ವಿವಾದಾತ್ಮಕ ನಾಯಕ ಸ್ವಾಮಿ ಅಗ್ನಿವೇಶ್ ಯಾರು?
Recommended Video
ಸಾಮಾಜಿಕ ಕಾರ್ಯಕರ್ತ, ಹರ್ಯಾಣದ ಮಾಜಿ ಸಚಿವ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಸಾಕಷ್ಟು ವಿವಾದ ಸೃಷ್ಟಿಸಿದೆ.
ಕಾಷಾಯ ವಸ್ತ್ರ ಧರಿಸಿದರೂ, ಸದಾ ಹಿಂದು ವಿರೋಧಿ ಹೇಳಿಕೆ ನೀಡುತ್ತಲೇ ಸುದ್ದಿಯಾಗುತ್ತಿದ್ದ ಸ್ವಾಮಿ ಅಗ್ನಿವೇಶ್ ಯಾರು? ಅವರ ಮೇಲೆ ಹಲ್ಲೆ ಮಾಡುವಂಥ ದ್ವೇಶ ಬಿಜೆಪಿ ಕಾರ್ಯಕರ್ತರಿಗೇಕೆ? ಎಲ್ಲ ವಿವರ ಇಲ್ಲಿದೆ.
ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ
ಜಾರ್ಖಂಡನ ಲಿಟ್ಟಿಪಡ ಎಂಬಲ್ಲಿ ಜು.17ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರ ಮೇಲೆ ಬಲಪಂಥೀಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅಗ್ನಿವೇಶ್, ಇದು ಆರೆಸ್ಸೆಸ್ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರದೇ ಕೆಲಸ. ನಾನು ಅವರ ವಿರುದ್ಧ ರಾಂಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದಿದ್ದಾರೆ.
ಸ್ವಾಮಿ ಅಗ್ನಿವೇಶ್ ಯಾರು?
ಆಂಧ್ರಪ್ರದೇಶದ ಶ್ರೀಕಕುಲಂ ನಲ್ಲಿ 1939 ಸೆ.21 ರಂದು ಸಾಂಪ್ರದಾಯಿಕ ಹಿಂದು ಕುಟುಂಬದಲ್ಲಿ ಜನಿಸಿದವರು ಅಗ್ನಿವೇಶ್. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅಗ್ನಿವೇಶ್ ತಮ್ಮ ತಾತನ ನೆರವಿನಿಂದ ಓದಿ, ಕಾನೂನು ಮತ್ತು ವಾಣಿಜ್ಯ ಪದವಿ ಪಡೆದರು. 'ಆರ್ಯ ಸಮಾಜ'ಪದ್ಧತಿಯಲ್ಲಿ ಸಾಕಷ್ಟು ಆಸಕ್ತಿ ಇದ್ದ ಅವರು ಅವೇ ಸಿದ್ಧಾಂತಗಳನ್ನು ಪಾಲಿಸುವುದಕ್ಕೆ ಆರಂಭಿಸಿದರು.
ರಾಜಕಾರಣಿಯಾಗಿ ಅಗ್ನಿವೇಶ್
1970 ರಲ್ಲಿ ಆರ್ಯ ಸಮಾಜದ ತತ್ವಗಳ ಆಧಾರದ ಮೇಲೆ 'ಆರ್ಯ ಸಭಾ' ಎಂಬ ರಾಜಕೀಯ ಪಕ್ಷವೊಂದನ್ನು ಕಟ್ಟಿದರು ಅಗ್ನಿವೇಶ್. 1977 ರಲ್ಲಿ ಅವರು ಹರ್ಯಾಣ ವಿಧಾನಸಭೆಯ ಸದ್ಯರಾಗಿ, ಶಿಕ್ಷಣ ಸಚಿವ(1979)ರಾಗಿಯೂ ಕೆಲಸ ಮಾಡಿದರು. ಸಚಿವರಾಗಿರುವಾಗಲೇ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದರು. ಭಾರತದಲ್ಲಿ ಜೀತ ಕಾರ್ಮಿಕರ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು ಈ ಸಸಂಸ್ಥೆಯ ಉದ್ದೇಶವಾಗಿತ್ತು. 2011 ರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು.
ಸಾಮಾಜಿಕ ಚಳವಳಿಯಲ್ಲಿ ಅಗ್ನಿವೇಶ್
ಹೆಣ್ಣು ಭ್ರೂಣ ಹತ್ಯೆಗೆ ವಿರೋಧ, ಮಾನವ ಹಕ್ಕು ರಕ್ಷಣೆ, ವಲಸಿಗರ ಸಮಸ್ಯೆಗೆ ಪರಿಹಾರ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡವರು ಅಗ್ನಿವೇಶ್. 1970 ಮಾರ್ಚ್ 25 ರಂದು ಅಗ್ನಿವೇಶ್ ಸನ್ಯಾಸ ಸ್ವೀಕರಿಸಿದರು. ಆಗಸ್ಟ್ 2008 ರಲ್ಲಿ 19 ಕ್ಕೂ ಹೆಚ್ಚು ಆರ್ಯ ಸಮಾಜ ಪ್ರತಿನಿಧಿ ಸಭಾಗಳು ಅವರನ್ನು ವಿರೋಧಿಸಿದ ಕಾರಣ ಅವರನ್ನು ಆರ್ಯ ಸಮಾಜ ಸಂಘದಿಂದ ಹೊರಹಾಕಲಾಯಿತು.
ವಿವಾದಾತ್ಮಕ ಹಿಂದು ವಿರೋಧಿ ಹೇಳಿಕೆಗಳು
ಭಾರತದಲ್ಲಿರುವ ಮುಸ್ಲಿಮರು 'ವಂದೇ ಮಾತರಂ' ಹಾಡುವುದನ್ನು ನಿಷೇಧಿಸಬೇಕು ಎಂಬ ಜಮೈತ್ ಉಲೆಮಾ ಇ ಹಿಂದ್ ಸಂಘಟನೆಯ ಬೇಡಿಕೆಯನ್ನು ಅವರು ಬೆಂಬಲಿಸಿದ್ದರು! 'ಖುರಾನ್ ಮತ್ತು ಇಸ್ಲಾಮ್ ಅನ್ನು ಭಯೋತ್ಪಾದನೆಯ ಹೆಸರಿನಲ್ಲಿ ತೇಜೋವಧೆ ಮಾಡುವುದು ಸರಿಯಲ್ಲ. ಇಸ್ಲಾಮ್ ಎಂದರೆ ಶಾಂತಿ, ಬ್ರಾತೃತ್ವವನ್ನು ಯನ್ನು ಬಯಸುವ ಮತ. ಮುಸ್ಲಿಮರನ್ನು ಭಯೋತ್ಪಾದಕರು ಎನ್ನುವುದಕ್ಕಿಂತ ದೊಡ್ಡ ಸುಳ್ಳು ಬೇರೆ ಇಲ್ಲ' ಎಂಬ ಹೇಳಿಕೆಯನ್ನು ಅವರು ನೀಡಿದ್ದರು. ಇದು ಬಲಪಂಥೀಯರ ಕೆಂಗಣ್ಣಿಗೆ ಕಾರಣವಾಗಿತ್ತು.
ಬಿಜೆಪಿ, ಆರೆಸ್ಸಿಗರಿಗೇಕೆ ದ್ವೇಷ?
ಸದಾ ಹಿಂದು ವಿರೋಧಿ ಹೇಳಿಕೆ ನೀಡುತ್ತಿರುವ ಕಾರಣಕ್ಕೆ ಅಗ್ನಿವೇಶ್ ಮೇಲೆ ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರಲ್ಲಿ ಮುನಿಸಿದೆ. ಪುರಿ ಜಗನ್ನಾಥ ಮಂದಿರಕ್ಕೆ ತೆರಳಲು ಹಿಂದುವೇತರ ಜನರಿಗೆ ಅವಕಾಶ ನೀಡಬೇಕು ಎಂಬ ಹೇಳಿಕೆಯನ್ನು 2005 ರಲ್ಲಿ ಅವರು ನೀಡದಿದ್ದರು. ಇದು ಸಾಕಷ್ಟು ವಿವಾದ ಸೃಷ್ಟಿಸಿತ್ತು. 'ಹಿಂದುಗಳು ಶಿವನನ್ನು ಕೇಲವ ಒಂದು ಮಂಜುಗಡ್ಡೆಯ ತುಂಡು ಎಂದುಕೊಂಡಿದ್ದಾರೆ' ಎಂದು ಅಮರನಾಥ ಯಾತ್ರೆಯ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀದಿದ್ದರು. ಹಿಂದುಗಳ ಭಾವನೆಗೆ ನೋವುಂಟು ಮಾಡುವಂಥ ಹೇಳಿಕೆಯನ್ನು ನೀಡದಂತೆ ಅಗ್ನಿವೇಶ್ ಗೆ ಸುಪ್ರೀಂ ಕೋರ್ಟ್ ಸಹ ತಾಕಿತು ಹಾಕಿತ್ತು.