ಪತ್ರಕರ್ತ ಜುಬೈರ್ ಬಂಧನ: ಬಿಜೆಪಿ ಸೇಡಿನ ರಾಜಕಾರಣ ಎಂದು ಆಕ್ರೋಶ
ನವದೆಹಲಿ, ಜೂನ್ 28: ಸುಳ್ಳು ಸುದ್ದಿಗಳ ಅಸಲಿ ಸತ್ಯಗಳನ್ನು ತಿಳಿಸುತ್ತಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ, ಪತ್ರಕರ್ತ ಮುಹಮ್ಮದ್ ಜುಬೈರ್ 'ಧಾರ್ಮಿಕ ಭಾವನೆಗಳಿಗೆ ಧಕ್ಕೆ' ಆರೋಪದ ಮೇಲೆ ದೆಹಲಿಯಲ್ಲಿ ವಿಶೇಷ ತನಿಖಾ ದಳ ಬಂಧಿಸಿದೆ.
ಜುಬೈರ್ ಮಾಡಿದ ಟ್ವೀಟ್ಗೆ ಸಂಬಂಧಿಸಿದಂತೆ ಸಹ ಸಂಸ್ಥಾಪಕನ ವಿರುದ್ಧ ಟ್ವಿಟರ್ ಮೂಲಕ ದೂರು ಸ್ವೀಕರಿಸಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಜುಬೈರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 295A (ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
Breaking: ಆಲ್ಟ್ನ್ಯೂಸ್ ಪತ್ರಕರ್ತ ಮೊಹಮ್ಮದ್ ಜುಬೈರ್ ಬಂಧನ
"ಯಾವುದೋ ಬೇರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆಸಲಾಗಿತ್ತು. ಆದರೆ ಇಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂಧಸಿದಂತೆ ಅವರನ್ನು ಬಂಧಿಸಲಾಗಿದೆ. ಬಂಧನದ ಕುರಿತು ಯಾವುದೇ ಸೂಚನೆ ನೀಡಿಲ್ಲ" ಎಂದು ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ಆರೋಪಿಸಿದ್ದಾರೆ. ಅಲ್ಲದೆ ಪೊಲೀಸರು ಎಫ್ಐಆರ್ ಪ್ರತಿ ಕೂಡ ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
"ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು, ಅದನ್ನು ನ್ಯಾಯಾಲಯವು ತಿರಸ್ಕರಿಸಿದೆ. ಒಂದು ದಿನದ ಪೊಲೀಸ್ ಕಸ್ಟಡಿಗಾಗಿ ದೆಹಲಿ ಪೊಲೀಸರ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಪೊಲೀಸರ ಪ್ರಕಾರ, ಪತ್ರಕರ್ತ ಜುಬೈರ್ ಮಾಡಿರುವ ಟ್ವೀಟ್ಗೆ ಸಂಬಂಧಿಸಿದಂತೆ ಆತನ ವಿರುದ್ಧ ದೂರು ನೀಡಲಾಗಿದೆ. ದೂರಿನ ಮೇರೆಗೆ ವಿಚಾರಣೆಗೆ ಕರೆಯಾಗಿದ್ದು, ತನಿಖೆಗೆ ಸಹಕರಿಸದ ಕಾರಣ ದೆಹಲಿ ಪೊಲೀಸ್ ವಿಶೇಷ ಘಟಕದ ಐಎಫ್ಎಸ್ಒ ಘಟಕ ಜುಬೈರ್ ಅವರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧಾರ್ಮಿಕ ವೈಷಮ್ಯ: ನುಪೂರ್ ಜೊತೆ ಪತ್ರಕರ್ತೆ ಮೇಲೂ ಕೇಸು
|
ಕರ್ನಾಟಕ ಮೂಲದ ಮುಹಮ್ಮದ್ ಜುಬೈರ್
ಮುಹಮ್ಮದ್ ಜುಬೈರ್, ಸುಳ್ಳು ಸುದ್ದಿಗಳನ್ನು ಗುರುತಿಸಿ ಅದರ ಸತ್ಯಾಸತ್ಯತೆ, ವಾಸ್ತವಾಂಶಗಳನ್ನು ಜನರಿಗೆ ತಲುಪಿಸುವ ಆಲ್ಟ್ ನ್ಯೂಸ್ (Altnews) ಎನ್ನುವ ವೆಬ್ಸೈಟ್ನ ಸಹಸಂಸ್ಥಾಪಕ. ಇವರು ಮೂಲತಃ ಕರ್ನಾಟಕದವರು.
ಹಲವು ಬಿಜೆಪಿ ನಾಯಕರ ದ್ವೇಷದ ಭಾಷಣಗಳನ್ನು ಹೊರಗೆ ತಂದಿದ್ದರು. ಅಲ್ಲದೆ ದೇಶದ ಇತಿಹಾಸ, ರಾಜಕೀಯ, ಹಲವು ನಾಯಕರ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದ್ದ ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಿ ಆ ಸುದ್ದಿಯ ವಾಸ್ತವತೆಯನ್ನು ಜನರಿಗೆ ತಿಳಿಸುತ್ತಿದ್ದರು. ಫ್ಯಾಕ್ಟ್ ಚೆಕ್ (Fact Check) ಹೆಸರಿನಲ್ಲಿ ಸಮಾಜದಲ್ಲಿ ಕೋಮುದ್ವೇಷ ಹರಡುವ, ತಪ್ಪುದಾರಿಗೆ ತಳ್ಳುವ ಸಾಕಷ್ಟು ಸುಳ್ಳು ಸುದ್ದಿಗಳ ಬೆನ್ನತ್ತಿ ಅವುಗಳ ಪೂರ್ವಾಪರ ತಿಳಿಸಿ ಸುದ್ದಿಯನ ಸತ್ಯಾಸತ್ಯತೆ ಬಯಲು ಮಾಡುತ್ತಿದ್ದರು.
ನೂಪುರ್ ಶರ್ಮಾ ಪ್ರವಾದಿ ಕುರಿತಾದ ಹೇಳಿಕೆಯ ಬಗ್ಗೆಯೂ ವರದಿ ಮಾಡಿದ್ದ ಜುಬೈರ್ ಅವರ ಹೇಳಿಕೆಯನ್ನು ಸುಳ್ಳು ಎಂದು ಸಾಕ್ಷಿ ಸಮೇತ ನಿರೂಪಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನೂಪುರ್ ಶರ್ಮಾ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಾತ್ರವಲ್ಲದೆ ನೂಪುರ್ ಶರ್ಮಾರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಯಿತು.
ಬಿಜೆಪಿ ಸೇಡಿನ ರಾಜಕಾರಣ ಮಾಡ್ತಿದೆ ಎಂದು ಆಕ್ರೋಶ
ಜುಬೈರ್ ಬಂಧನವಾಗುತ್ತಿದ್ದಂತೆ ಹಲವು ರಾಜಕೀಯ ನಾಯಕರು, ಪತ್ರಕರ್ತರು ಸರ್ಕಾರದ ವಿರುದ್ಧ ದನಿಯೆತ್ತಿದ್ದಾರೆ. ಇತ್ತೀಚೆಗಷ್ಟೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಮಾಜಿ ಐಪಿಎಸ್ ಅಧಿಕಾರಿ ಆರ್ಬಿ ಶ್ರೀ ಕುಮಾರ್ ಬಂಧನವನ್ನು ಖಂಡಿಸಲಾಗಿತ್ತು. ಈಗ ಪತ್ರಕರ್ತ ಝುಬೈರ್ ಬಂಧನವನ್ನು "ಬಿಜೆಪಿ ಸೇಡಿನ ರಾಜಕಾರಣ" ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಪ್ರತಿಪಕ್ಷಗಳು ಆರೋಪಿಸಿವೆ.
ರಾಹುಲ್ ಗಾಂಧಿ, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಂಸದ ಶಶಿ ತರೂರ್ ಸೇರಿದಂತೆ, ಹಲವು ರಾಜಕಾರಣಿಗಳು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಟ್ವೀಟ್ ಮೂಲಕ ಜುಬೈರ್ ಬಂಧನವನ್ನು ಖಂಡಿಸಿದ್ದಾರೆ.
|
ಸತ್ಯ ಯಾವಾಗಲೂ ಜಯಗಳಿಸುತ್ತದೆ ಹೆದರಬೇಡಿ
ಜುಬೈರ್ ಬಂಧನದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಟ್ವೀಟ್ ಮಾಡಿದ್ದು, "ಬಿಜೆಪಿಯ ದ್ವೇಷ, ಮತಾಂಧತೆ ಮತ್ತು ಸುಳ್ಳುಗಳನ್ನು ಬಹಿರಂಗಪಡಿಸುವ ಪ್ರತಿಯೊಬ್ಬ ವ್ಯಕ್ತಿಯೂ ಅವರಿಗೆ ಬೆದರಿಕೆಯಾಗಿದ್ದಾರೆ. ಒಂದು ಸತ್ಯದ ಧ್ವನಿಯನ್ನು ಬಂಧಿಸಿದರೆ ಇನ್ನೂ ಸಾವಿರ ಧ್ವನಿಗಳನ್ನು ಅದು ಹುಟ್ಟುಹಾಕುತ್ತದೆ. ಸತ್ಯ ಯಾವಾಗಲೂ ದೌರ್ಜನ್ಯದ ಮೇಲೆ ಜಯಗಳಿಸುತ್ತದೆ. #DaroMat" ಎಂದು ಬರೆದಿದ್ದಾರೆ.
"ದ್ವೇಷ ಬಾಷಣದ ವಿರುದ್ಧ ಕೆಂಪು ಬಾವುಟವನ್ನು ಎತ್ತಿದ ಮತ್ತು ದ್ವೇಷದ ಭಾಷಣಗಳನ್ನು ಬಹಿರಂಗಪಡಿಸಿದ ಮುಹಮ್ಮದ್ ಜುಬೈರ್ ಈಗ ತಾವೇ ಸ್ವತಃ ದ್ವೇಷ ಬಿತ್ತುವ ಆರೋಪದಲ್ಲಿ ಬಂಧಿಸಲ್ಪಿಟ್ಟಿದ್ದಾರೆ. ಅವರು ಬಹಿರಂಗಪಡಿಸಿದ ದ್ವೇಷ ಭಾಷಣಕೋರರು ಮುಕ್ತವಾಗಿ ತಿರುಗಾಡುತ್ತಿದ್ದಾರೆ" ಎಂದು ಹಿರಿಯ ಪತ್ರಕರ್ತ ರಾಜ್ದೀಪ್ ಸರ್ ದೇಸಾಯಿ ಟ್ವೀಟ್ ಮಾಡಿದ್ದಾರೆ.
"ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಯ ಹಿಂದಿರುವ ವಾಸ್ತವಗಳನ್ನು ಭಾರತದ ಕೆಲವು ಸತ್ಯ ಪರಿಶೀಲನಾ ಸೇವೆಗಳು ಮಾಡುತ್ತಿವೆ, ವಿಶೇಷವಾಗಿ ಆಲ್ಟ್ ನ್ಯೂಸ್. ಜುಬೈರ್ ಅವರ ಬಂಧನವು ಸತ್ಯದ ಮೇಲಿನ ಆಕ್ರಮಣವಾಗಿದೆ, ಅವರನ್ನು ಶೀಘ್ರವೇ ಬಿಡುಗಡೆ ಮಾಡಬೇಕು" ಎಂದು ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಮುಹಮ್ಮದ್ ಜುಬೈರ್ ಬಂಧನ ಯಾಕೆ?
ಜುಬೈರ್ 2018 ರ ಟ್ವೀಟ್ನಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ: 2014 ರ ಮೊದಲು: ಹನಿಮೂನ್ ಹೋಟೆಲ್. 2014 ರ ನಂತರ: ಹನುಮಾನ್ ಹೋಟೆಲ್. ಈ ಟ್ವೀಟ್ ಕುರಿತು ಮತ್ತೊಬ್ಬ ಟ್ವಿಟರ್ ಬಳಕೆದಾರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದ. ಇದೇ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ದೆಹಲಿ ಪೊಲೀಸರು ಪೋಸ್ಟ್ ಅನ್ನು ಪರಿಶೀಲಿಸಿದ್ದು. ನಿರ್ದಿಷ್ಟ ಧರ್ಮದ ವಿರುದ್ಧ ಚಿತ್ರಗಳು ಮತ್ತು ಪದಗಳನ್ನು ಒಳಗೊಂಡಿದೆ ಮತ್ತು ನಿರ್ದಿಷ್ಟ ಸಮುದಾಯದ ಜನರನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ಜನರ ನಡುವೆ ದ್ವೇಷವನ್ನು ಈ ಪೋಸ್ಟ್ ಪ್ರಚೋದಿಸುತ್ತದೆ ಎಂದು ಪೊಲೀಸರು ಆರೋಪಿಸಿದ್ದಾರೆ.
Recommended Video