ಹಣ, ಆಸ್ತಿ ಉಳ್ಳವರಿಗೆ ನೆಮ್ಮದಿ ನೀಡಿದ್ದು ಮಾತ್ರ ಭಾರತೀಯ ಸಂಸ್ಕೃತಿ!
ನವದೆಹಲಿ, ನವೆಂಬರ್.30: ವಿದೇಶದಲ್ಲಿ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸಾರಿ ಹೇಳಿದ ಜೋನಸ್ ಮಾಸೆಟ್ಟಿ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 71ನೇ ಸಂಚಿಕೆಯ ಮನ್ ಕೀ ಬಾತ್ ನಲ್ಲಿ ಉಲ್ಲೇಖಿಸಿದ್ದಾರೆ.
ಬ್ರೆಜಿಲಿಯನ್ ಮೂಲದ ಜೋನಸ್ ಮಾಸೆಟ್ಟಿಯವರು ರಿಯೋ ಡಿ ಜನೈರೋದಲ್ಲಿ ವೇದಾಂತ ಮತ್ತು ಭಗವದ್ಗೀತೆ ಬಗ್ಗೆ ಪ್ರವಚನ ನೀಡಿದ್ದಾರೆ. ಈ ಬಗ್ಗೆ ಉಲ್ಲೇಖಿಸಿರುವ ಪ್ರಧಾನಿ ಮೋದಿ, ಕೆಲವರು ತಮ್ಮೊಳಗಿನ ಬದುಕನ್ನು ಹುಡುಕಿಕೊಂಡು ಭಾರತಕ್ಕೆ ಬರುತ್ತಾರೆ. ಅದರಲ್ಲಿ ಕೆಲವರು ಭಾರತೀಯ ಸಂಪ್ರದಾಯದ ರಾಯಭಾರಿಗಳಾಗಿ ತಮ್ಮ ದೇಶಕ್ಕೆ ವಾಪಸ್ ಆಗುತ್ತಾರೆ ಎಂದು ಹೇಳಿದರು.
"ಬ್ರೆಜಿಲ್ ನಲ್ಲಿ ವಿಶ್ವನಾಥ್ ಅಂತಲೂ ಚಿರಪರಿಚಿತರಾಗಿರುವ ಜೋನಸ್ ಮಾಸೆಟ್ಟಿ ಅವರ ಬಗ್ಗೆ ನನಗೆ ಇತ್ತೀಚಿನ ದಿನಗಳಲ್ಲಿ ಗೊತ್ತಾಯಿತು. ಭಾರತದ ಸಂಸ್ಕೃತಿಯನ್ನು ಸಾರಿ ಹೇಳಿರುವ ವೇದಾಂತ ಹಾಗೂ ಭಗವದ್ಗೀತೆ ಬಗ್ಗೆ ಬ್ರೆಜಿಲ್ ನಲ್ಲಿ ಅವರು ಪ್ರವಚನಗಳನ್ನು ನೀಡುತ್ತಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಜೋನೆಸ್ ಮಾಸೆಟ್ಟಿ ಯಾರು?
ಬ್ರೆಜಿಲ್ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಜೋನೆಸ್ ಮಾಸೆಟ್ಟಿ ಅವರು ವಿಶ್ವವಿದ್ಯಾ ಸಂಸ್ಥೆಯ ಸಂಸ್ಥಾಪಕರೂ ಆಗಿದ್ದಾರೆ. ರಿಯೋ ಡಿ ಜನೈರೋದಿಂದ 1 ಗಂಟೆ ಪ್ರಯಾಣದ ಅಂತರದಲ್ಲಿರುವ ಪೆಟ್ರೋಪೊಲೀಸ್ ಗುಡ್ಡಗಾಡು ಪ್ರದೇಶದಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಪ್ರದೇಶದಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯ, ವೇದಾಂತ ಮತ್ತು ಭಗವದ್ಗೀತೆಯ ಅಧ್ಯಾಯದ ಬಗ್ಗೆ ಪಾಠ ಮಾಡಲಾಗುತ್ತದೆ. ಇದರ ಜೊತೆಗೆ ಸಂಸ್ಕೃತ ಮಂತ್ರ, ವೇದಶಾಸ್ತ್ರಗಳ ಅಧ್ಯಯನವನ್ನು ಮಾಡಿಸಲಾಗುತ್ತಿದೆ.
ಮನ್ ಕೀ ಬಾತ್ ನಲ್ಲಿ ಜೋನಸ್ ಮಾಸೆಟ್ಟಿ ಉಲ್ಲೇಖ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ 71ನೇ ಸಂಚಿಕೆ ಮನ್ ಕೀ ಬಾತ್ ನಲ್ಲಿ ಜೋನಸ್ ಮಾಸೆಟ್ಟಿ ಜೀವನದ ಹಾದಿಯ ಬಗ್ಗೆ ಮಾತನಾಡಿದ್ದರು. "ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿದ ನಂತರ ಜೋನಸ್ ಮಾಸೆಟ್ಟಿಯವರು ಷೇರು ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ತದನಂತರದಲ್ಲಿ ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಆಕರ್ಷಿತರಾದರು. ವಿಶೇಷವಾಗಿ ವೇದಾಂತದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಕೋಯಿಮತ್ತೂರಿನ ಅರ್ಶ ವಿದ್ಯಾ ಗುರುಕುಲಂನಲ್ಲಿ ಭಾರತೀಯ ವೇದಾಂತ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಿದರು.
ಸಾರ್ಥಕತೆ ಮೂಡಿಸಲಿಲ್ಲ ಆಸ್ತಿ ಮತ್ತು ಐಶ್ವರ್ಯ
ಹಣಕಾಸು ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜೋನಸ್ ಮಾಸೆಟ್ಟಿಯವರಿಗೆ ಆಧ್ಯಾತ್ಮಿಕ ಮಾರ್ಗದ ಬಗ್ಗೆ ಆಸಕ್ತಿ ಹೆಚ್ಚಿತು. ಉನ್ನತ ಮಟ್ಟದ ಕಂಪನಿಗಳಲ್ಲಿ ನಿರ್ವಹಣೆಯ ಹೊಣೆ ನಿಭಾಯಿಸುವ ಹುದ್ದೆಯಿತ್ತು. ಗೆಳತಿ, ಕುಟುಂಬ, ಹಣ, ಉದ್ಯೋಗ ಆಸ್ತಿ ಮತ್ತು ಐಶ್ವರ್ಯ ಎಲ್ಲವೂ ಇತ್ತು. ಆದರೆ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಜೋನಸ್ ಮಾಸೆಟ್ಟಿಯವರು ತಮಗೆ ತಾವೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದರು ಎಂದು ವೆಬ್ ಸೈಟ್ ನಲ್ಲಿ ಹೇಳಲಾಗಿದೆ.
ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಗಳಿಂದಲೂ ಉತ್ತರ ಸಿಗಲಿಲ್ಲ
ಬ್ರೆಜಿಲ್ ನಲ್ಲಿ ತಾನು ಕಂಡ ಯಶಸ್ವಿ ವ್ಯಕ್ತಿಗಳಲ್ಲೂ ನಾನು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿದೆ. ಆದರೆ ಜೀವನದಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿಕೊಳ್ಳುವ ಜನರಲ್ಲಿಯೂ ಶಾಂತಿ ಮತ್ತು ಸ್ಪಷ್ಟತೆ ಗೋಚರಿಸಲಿಲ್ಲ. ಈ ಹಿನ್ನೆಲೆ ಆಧ್ಯಾತ್ಮಿಕ ಮಾರ್ಗದಲ್ಲಿ ತನ್ನೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಭಾರತಕ್ಕೆ ತೆರಳಲಿದೆೆ. ಸ್ವಾಮಿ ದಯಾನಂದ ಸರಸ್ವತಿಯವರ ಮಾರ್ಗದರ್ಶನದಲ್ಲಿ ನಾಲ್ಕು ವರ್ಷಗಳ ಕಾಲ ವೇದಾಂತವನ್ನು ಅಧ್ಯಯನ ಮಾಡಿದೆ ಎಂದು ಮಾಸೆಟ್ಟಿ ಹೇಳಿದ್ದಾರೆ.
ಜೋನಸ್ ಮಾಸೆಟ್ಟಿ ಯಶಸ್ಸಿಗೆ ಕಾರಣವೇನು?
ರಿಯೋ ಡಿ ಜನೈರೋದಿಂದ 1 ಗಂಟೆ ಪ್ರಯಾಣದ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಜೋನಸ್ ಮಾಸೆಟ್ಟಿ ವೇದಾಭ್ಯಾಸ ಕಲಿಸುತ್ತಾರೆ. ಆದರೆ ಅದಕ್ಕಿಂತ ಮಿಗಿಲಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕವೇ ಪಾಠ-ಪ್ರವಚನಗಳನ್ನು ನೀಡುತ್ತಿದ್ದಾರೆ. ಯೋಗ ಮತ್ತು ವೇದದ ಉಪಯೋಗಗಳ ಕುರಿತು ಸ್ವತಃ ಜೋನಸ್ ಮಾಸೆಟ್ಟಿಯವರು ಯೂಟ್ಯೂಬ್ ನಲ್ಲಿ ಕೂಡಾ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರೆ. ಭಾರತೀಯ ಸಂಸ್ಕೃತಿಯನ್ನು ಸಾರಿ ಹೇಳುವುದಕ್ಕೆ ಜೋನೆಸ್ ಮಾಸೆಟ್ಟಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು.
ಇನ್ ಸ್ಟಾಗ್ರಾಮ ಮತ್ತು ಟ್ವಿಟರ್ ನಲ್ಲಿ ವೇದಾಂತದ ಬರಹಗಳು ಮತ್ತು ಪಾಠಗಳನ್ನು ಹಂಚಿಕೊಳ್ಳುತ್ತಾರೆ. ಅದರಿಂದಾಗಿ ಜೋನಸ್ ಮಾಸೆಟ್ಟಿಯವರಿಗೆ ಟ್ವಿಟರ್ ನಲ್ಲಿ 34,000ಕ್ಕಿಂತಲೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.