'ದೇವಮಾನವ' ಚಂದ್ರಸ್ವಾಮಿಯ ಜೀವನ ವೃತ್ತಾಂತ
ಸ್ವಯಂ ಘೋಷಿತ ದೇವ ಮಾನವ ನೇಮಿಚಂದ್ ಅಲಿಯಾಸ್ ಚಂದ್ರಸ್ವಾಮಿ ತಾಂತ್ರಿಕನಾಗಿ, ಸ್ವಯಂಘೋಷಿತ ದೇವಮಾನವನಾಗಿ, ರಾಜಕೀಯ ಮುಖಂಡರ ಗುರುವಾಗಿ ಬೆಳೆದವರು. ಚಂದ್ರಸ್ವಾಮಿಯ ಜೀವನ ವೃತ್ತಾಂತ ಇಲ್ಲಿದೆ
ಹಣ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ರಾಜಸ್ಥಾನಿ ಮೂಲದ ವ್ಯಕ್ತಿಯೊಬ್ಬನ ಮಗನಾದ ನೇಮಿ ಚಂದ್ ತಾಂತ್ರಿಕನಾಗಿ, ವಿವಾದಿತ ವ್ಯಕ್ತಿಯಾಗಿ, ಸ್ವಯಂಘೋಷಿತ ದೇವಮಾನವನಾಗಿ, ರಾಜಕೀಯ ಮುಖಂಡರ ಗುರುವಾಗಿ ಬೆಳೆದವರು. ಚಂದ್ರಸ್ವಾಮಿಯ ಜೀವನ ವೃತ್ತಾಂತ ಇಲ್ಲಿದೆ
ರಾಜೀವ್ ಗಾಂಧಿ ಹತ್ಯೆ ಸಂಚಿನಲ್ಲೂ ಚಂದ್ರಸ್ವಾಮಿ ಹೆಸರು ಬಲವಾಗಿ ಕೇಳಿ ಬಂದಿತ್ತು. ತನ್ನ ಅಂತಾರಾಷ್ಟ್ರೀಯ ಸಂಪರ್ಕ, ಶಸ್ತ್ರಾಸ್ತ್ರ, ವಾಣಿಜ್ಯ ಡೀಲ್ ಮೂಲಕ ಎಲ್ ಟಿಟಿಐ ಸಂಘಟನೆಗೆ ನೆರವಾಗುತ್ತಿದ್ದರು. ಚಂದ್ರಸ್ವಾಮಿ ಬಂಧನವಾದರೂ ನಂತರ ಬಿಡುಗಡೆಗೊಂಡಿದ್ದರು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆಧಾತ್ಮ ಸಲಹೆಗಾರ ಎನಿಸಿಕೊಂಡಿದ್ದ ಸ್ವಾಮಿ, ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದವರು. [ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿಯ ವಿವಾದಗಳು]
1948ರಲ್ಲಿ ಜನಿಸಿದ ನೇಮಿಚಂದ್ ಬಾಲ್ಯದಲ್ಲೇ ತಂದೆಯ ಜತೆಗೂಡಿ ರಾಜಸ್ಥಾನದ ಬೆಹ್ರೂರ್ ನಿಂದ ಹೈದರಾಬಾದಿಗೆ ಬರುತ್ತಾನೆ. ತಂತ್ರ ವಿದ್ಯೆಯಲ್ಲಿ ಪರಿಣಿತಿ ಹೊಂದಲು ಮನೆಯನ್ನು ತೊರೆದು ಉಪಾಧ್ಯಾರ್ ಅಮರ್ ಮುನಿ ಅವರ ಬಳಿ ತೆರಳುತ್ತಾನೆ. ಬಿಹಾರದ ಕಾಡಿನಲ್ಲಿ ಧ್ಯಾನ, ತಂತ್ರವಿದ್ಯೆ ಕಲಿತು ಸ್ವಾಮಿಯಾಗುತ್ತಾರೆ.
ತಾಂತ್ರಿಕ ಗೋಪಿನಾಥ್ ಕವಿರಾಜ್ ರಲ್ಲಿ ಶಿಷ್ಯವೃತ್ತಿ ಮಾಡುತ್ತಾರೆ. ನಾಲ್ಕು ವರ್ಷಗಳ ನಂತರ ತಂತ್ರ ವಿದ್ಯೆ ಕಲಿತ ಚಂದ್ರಸ್ವಾಮಿ ಅವರು ಕಾಳಿ ಮಾತೆಯ ಪರಮ ಭಕ್ತ ಹಾಗೂ ಆರಾಧಕ. ಧರ್ಮದಲ್ಲಿ ಜೈನ ಸಮುದಾಯದವರಾದರೂ ತಂತ್ರವಿದ್ಯೆ ಕಲಿತು ಅಂತಾರಾಷ್ಟ್ರೀಯ ಮಟ್ಟದ ಉಪನ್ಯಾಸ ನೀಡುವಷ್ಟರ ಮಟ್ಟಿಗೆ ಬೆಳೆದವರು.
ಭಕ್ತಗಣ: ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್ ಮತ್ತು ಚಂದ್ರಶೇಖರ್ ಚಂದ್ರ ಸ್ವಾಮಿಯ ಭಕ್ತ ಗಣದಲ್ಲಿ ಅಗ್ರಸ್ಥಾನ ಪಡೆದಿದ್ದರು. ನರಸಿಂಹರಾವ್ ಅವರ ಆಪ್ತರಾಗಿದ್ದರಿಂದ ವಿಶ್ವ ಧರ್ಮಯಾತನ್ ಸನಾತನ ಹೆಸರಿನಲ್ಲಿ ದೆಹಲಿಯಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು.
ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ರೊಮೇಶ್ ಭಂಡಾರಿ, ಮಾಜಿ ಬಿಹಾರ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ರಾಜೇಶ್ ಪೈಲಟ್, ಮನೇಕಾ ಗಾಂಧಿ, ಬ್ರೂನಿಯ ರಾಜ, ನಟಿ ಎಲಿಜಬೆತ್ ಟೇಲರ್, ಬಹರೇನ್ ನ ಶೇಖ್ ಇಸಾ ಬಿನ್ ಸಲ್ಮಾನ್ ಅಲ್ ಖಲೀಫಾ, ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್, ಶಸ್ತ್ರಾಸ್ತ್ರ ಡೀಲರ್ ಅದ್ನಾನ್ ಖಶೋಗಿ, ಡಿ ಕಂಪನಿ ಒಡೆಯ ಭೂಗತ ಪಾತಕಿ, ದಾವೂದ್ ಇಬ್ರಾಹಿಂ ಸೇರಿದಂತೆ ವಿಶ್ವದೆಲ್ಲೆಡೆ ತಮ್ಮ ಭಕ್ತರನ್ನು ಹೊಂದಿದ್ದರು.