ಅಂತಾರಾಷ್ಟ್ರೀಯ ಮನ್ನಣೆ ಪಡೆದ ಈ ಫೋಟೋ ತೆಗೆದವ ಯಾರು?
ಬೆಂಗಳೂರು, ಮಾ.25: ಸಾವಿರ ಪದಕ್ಕಿಂತ ಒಂದು ಫೋಟೋ ಶಕ್ತಿಶಾಲಿ ಎಂಬ ಹಳೆ ಗಾದೆ ಮತ್ತೊಮ್ಮೆ ಸತ್ಯವಾಗಿದೆ. ಒಂದೇ ಒಂದು ಫೋಟೋ ಎಂಥ ಬದಲಾವಣೆಯನ್ನು ತರಬಹುದು ಎಂಬುದಕ್ಕೆ ಬಿಹಾರದಲ್ಲಿ ಕಳೆದ ವಾರ ನಡೆದ ಸಾಮೂಹಿಕ ನಕಲು ಘಟನೆಯ ವರದಿಯೇ ಸಾಕ್ಷಿ. ಬಿಹಾರದ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದ ಅಕ್ರಮಗಳ ಪರಿ ಯಾವ ರೀತಿಯಿದೆ ಎಂಬುದನ್ನು ಇದೊಂದೇ ಚಿತ್ರ ಹೇಳಿತ್ತು. ಆದರೆ ಫೋಟೋ ತೆಗೆದ ಪತ್ರಕರ್ತ ಮಾತ್ರ ಇನ್ನು ಅನಾಮಿಕನಾಗಿದ್ದರು.
ಬಿಹಾರದ ವೈಶಾಲಿ ಜಿಲ್ಲೆಯಲ್ಲಿ 10ನೇ ತರಗತಿ ಪರೀಕ್ಷೆ ನಡೆಯುತ್ತಿದ್ದ ವೇಳೆ ಪಾಲಕರು ಮತ್ತು ವಿದ್ಯಾರ್ಥಿಗಳ ಸ್ನೇಹಿತರು ಕಾಪಿ ಚೀಟಿಗಳನ್ನು, ಪುಸ್ತಕಗಳನ್ನು ಕಟ್ಟಡದ ಮೇಲೇರಿ ಕಿಟಕಿಯಲ್ಲಿ ತೂರುತ್ತಿದ್ದರು. ಇದನ್ನು ಸೆರೆಹಿಡಿದ ಪರಿಣಾಮ ಅಕ್ರಮಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಂಡಿತ್ತು. ಅಲ್ಲದೇ 15 ಲಕ್ಷ ರೂ. ಗೂ ಅಧಿಕ ದಂಡ ಕೂಡ ಸಂಗ್ರಹ ಮಾಡಲಾಗಿತ್ತು.[ಮಂಗಳನ ಅಂಗಳದ ಜ್ವಾಲಾಮುಖಿ ನೋಡಿದ್ದೀರಾ?]
ಈ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಫೋಟೋ ವೈರಲ್ ಆಗಿತ್ತು. ಘಟನೆಗೆ ಸಂಬಂಧಿಸಿ ಸುಮಾರು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ವ್ಯಾಪಕ ಪರಿಶೀಲನೆ ನಡೆಸಲಾಗಿತ್ತು.
ಇಷ್ಟೆಲ್ಲಾ ಕ್ರಮ ತೆಗೆದುಕೊಳ್ಳಲು ಕಾರಣವಾದ ಫೋಟೋ ತೆಗೆದವರು ಸ್ಥಳೀಯ ಹಿಂದಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ರಾಜೇಶ್ ಕುಮಾರ್. ನಾನು ತೆಗೆದ ಫೋಟೋಕ್ಕೆ ಈ ರೀತಿಯ ಮನ್ನಣೆ ದೊರೆಯಿತು, ಆದರೆ ನಾನು ಮಾತ್ರ ಅನಾಮಧೇಯನಾಗಿಬಿಟ್ಟೆ, ಯಾರು ನನ್ನನ್ನು ಸಂಪರ್ಕಿಸಲಿಲ್ಲ ಎಂದು ರಾಜೇಶ್ ಹೇಳುತ್ತಾರೆ.
ನನಗೆ ಈ ಫೋಟೋ ಇಷ್ಟೆಲ್ಲಾ ಪ್ರಯೋಜನ ನೀಡುತ್ತದೆ ಎಂದು ಗೊತ್ತಿರಲಿಲ್ಲ. ಎಂದಿನಂತೆ ನಾನು ಫೋಟೋವನ್ನು ತೆಗೆದು ಕಚೇರಿಗೆ ಕಳಿಸಿಕೊಟ್ಟಿದ್ದೆ. ನಮ್ಮ ಪತ್ರಿಕೆಯಲ್ಲಿ ಮರುದಿನ ಪ್ರಕಟವಾಗಿತ್ತು. ನಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲೂ ಪ್ರಕಟವಾಯಿತು.[ಮಂಗಳನ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ]
ನನ್ನ ಹೆಸರು ಜನಪ್ರಿಯವಾಗಲಿಲ್ಲ ಎಂಬ ಅಸಮಾಧಾನ ನನಗಿಲ್ಲ. ಈ ಒಂದು ಚಿತ್ರದಿಂದ ಸರ್ಕಾರ ಸಾಮೂಹಿಕ ನಕಲು ತಡೆಯಲು ಕ್ರಮ ತೆಗೆದುಕೊಂಡಿದ್ದೇ ತೃಪ್ತಿ ತಂದಿದೆ ಎಂದು ಕುಮಾರ್ ಹೇಳುತ್ತಾರೆ.
ಸಾಮೂಹಿಕ ನಕಲು ನಡೆಯುತ್ತಿದ್ದ ವೇಳೆ ಫೋಟೋ ತೆಗೆಯಲು ತೆರಳಿದ್ದೆ. ನನ್ನ ಕೈಯಲ್ಲಿ ಕ್ಯಾಮರಾ ಕಂಡ ಕೆಲವರು ನನ್ನನ್ನು ಅಟ್ಟಿಸಿಕೊಂಡಿ ಬಂದಿದ್ದರು ಎಂದು ಅಂದಿನ ಸಂದರ್ಭವನ್ನು ಕುಮಾರ್ ಬಿಚ್ಚಿಡುತ್ತಾರೆ.
ಒಟ್ಟಿನಲ್ಲಿ ಚಿತ್ರ ತೆಗೆಯುವಾಗ ಇಂಥ ಕ್ರಾಂತಿ ಅಥವಾ ಮೌಲ್ಯ ದೊರೆಯುತ್ತದೆ ಎಂದು ರಾಜೇಶ್ ಗೆ ಗೊತ್ತಿರದಿದ್ದರೂ ನಂತರ ಅದು ಮಾಡಿದ ಕೆಲಸಗಳು ನಿಜಕ್ಕೂ ಬದಲಾವಣೆಗೆ ಕಾರಣವಾದವು.