ರಾಹುಲ್ ಬಿಟ್ಟರೆ ಕಾಂಗ್ರೆಸ್ ಮುನ್ನಡೆಸುವ ತಾಕತ್ತು ಯಾರಿಗಿದೆ?
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್, 2017ರಲ್ಲಿ ಉತ್ತರಪ್ರದೇಶ ಚುನಾವಣೆಯಲ್ಲಿ ಮುಖ ಮೇಲೆತ್ತದಂತೆ ಏಟು ತಿಂದಿದೆ. ಈ ಸಂದರ್ಭದಲ್ಲಿ ಸಹಜವಾಗಿ ರಾಹುಲ್ ನಾಯಕತ್ವದ ಬಗ್ಗೆ ಅಪಸ್ವರಗಳು ಏಳಲು ಪ್ರಾರಂಭಿಸಿವೆ.
ಬೆಂಗಳೂರು, ಮಾರ್ಚ್ 22 : ಕಾಂಗ್ರೆಸ್ ಉಪಾಧ್ಯಕ್ಷರಾದ ಮೇಲೆ ನಲವತ್ತಾರರ ಹರೆಯದ ರಾಹುಲ್ ಗಾಂಧಿ ಅವರು ಎಷ್ಟು ಚುನಾವಣೆಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ, ಎಷ್ಟು ಚುನಾವಣೆಯಲ್ಲಿ ಸೋತಿದ್ದಾರೆ ಎಂಬ ಸಂಗತಿ ಬಹುಶಃ ಕಾಂಗ್ರೆಸ್ ನಾಯಕರಿಗೂ ಗೊತ್ತಿರಲಿಕ್ಕಿಲ್ಲ. ಗೊತ್ತಿದ್ದರೂ ಬಾಯಿ ಬಿಡುವುದಿಲ್ಲ.
ರಾಹುಲ್ ಗಾಂಧಿಯವರಲ್ಲಿ ಇರುವ ಅದಮ್ಯ ಉತ್ಸಾಹದ ಬಗ್ಗೆ, ಪಕ್ಷ ಕಟ್ಟಲು ಮಾಡುತ್ತಿರುವ ನಿರಂತರ ಪ್ರಯತ್ನಗಳ ಬಗ್ಗೆ ಎರಡು ಮಾತೇ ಇಲ್ಲ. ತಮ್ಮಲ್ಲಿರುವ ಹಲವಾರು ಗುಣದೋಷಗಳನ್ನು ಪಕ್ಕಕ್ಕಿಟ್ಟು ರಾಜಕೀಯವಾಗಿ ಬೆಳೆಯಲು, ನಾಯಕತ್ವ ತೋರಲು ಭಾರೀ ಹರಸಾಹಸ ಮಾಡಿದ್ದಾರೆ. [ಗಿನ್ನಿಸ್ ದಾಖಲೆ ಮಾಡುವಷ್ಟು ಚುನಾವಣೆ ಸೋತಿದ್ದಾರಾ ರಾಹುಲ್?]
ವಿಪರ್ಯಾಸವೆಂದರೆ, ಸೋಲೆಂಬ ಭೂತ ಅವರನ್ನು ಬೆಂಬಿಡದೆ ಕಾಡುತ್ತಿದೆ. ಅವರ ರಾಜಕೀಯ ತಂತ್ರಗಾರಿಕೆಗಳು ಕೈಕೊಡುತ್ತಿವೆ, ಮಾತುಗಳು ಎಲ್ಲೆಲ್ಲೋ ಓಡುತ್ತಿವೆ, ಹಲವಾರು ನುಡಿಗಳು ಅಪಹಾಸ್ಯಕ್ಕೀಡಾಗುತ್ತಿವೆ, ತಳೆಯುವ ನಿರ್ಧಾರಗಳು ಬುಡಮೇಲಾಗುತ್ತಿವೆ. ಪರಿಣಾಮವಾಗಿ ಚುನಾವಣೆಗಳಲ್ಲಿ ಹೀನಾಯವಾಗಿ ಸೋಲುತ್ತಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ. ಧೀರೋದಾತ್ತ ನಾಯಕರು ಚುಕ್ಕಾಣಿ ಹಿಡಿದು ಬೀಳುತ್ತಿರುವ ಕುದುರೆಯನ್ನು ಹಿಡಿದು ಎತ್ತಿದ್ದಾರೆ. ಕಾಂಗ್ರೆಸ್ ರಥದ ಗಾಲಿಗಳು ಕಳಚಿ ಬೀಳದಂತೆ ನೋಡಿಕೊಂಡಿದ್ದಾರೆ. ಆದರೆ, ರಾಹುಲ್ ಅವರ ನಾಯಕತ್ವದಲ್ಲಿ ಗಾಲಿಗಳ ಕೀಲುಗಳೇ ಕಳಚಿ ಬೀಳುವ ಅಪಾಯ ತಲುಪಿವೆ. [ಖರ್ಗೆಗೆ ಕೊಕ್, ಚುನಾವಣೆಯಲ್ಲಿ ಮುಗ್ಗರಿಸಿದ ರಾಹುಲ್ ವಿಪಕ್ಷ ನಾಯಕ!]
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್, 2017ರಲ್ಲಿ ಉತ್ತರಪ್ರದೇಶ ಚುನಾವಣೆಯಲ್ಲಿ ಮುಖ ಮೇಲೆತ್ತದಂತೆ ಏಟು ತಿಂದಿದೆ. ಈ ಸಂದರ್ಭದಲ್ಲಿ ಸಹಜವಾಗಿ ರಾಹುಲ್ ನಾಯಕತ್ವದ ಬಗ್ಗೆ ಅಪಸ್ವರಗಳು ಏಳಲು ಪ್ರಾರಂಭಿಸಿವೆ. ರಾಹುಲ್ ನಾಯಕತ್ವದ ಸನ್ಯಾಸ ತೆಗೆದುಕೊಳ್ಳಲು ಎಂದು ಕೆಲವರು ಬಹಿರಂಗವಾಗಿಯೇ ದನಿಯೆತ್ತುತ್ತಿದ್ದಾರೆ.
ಲೋಕಸಭೆ ಚುನಾವಣೆ ಹತ್ತಿರದಲ್ಲಿಯೇ ಇರುವುದರಿಂದ ರಾಹುಲ್ ಗಾಂಧಿ ಬಿಟ್ಟರೆ ಕಾಂಗ್ರೆಸ್ ನಲ್ಲಿ ನಾಯಕರು ಯಾರಿದ್ದಾರೆ ಎಂಬ ಮಾತು ಸಹಜವಾಗಿ ಉದ್ಭವವಾಗಿದೆ. ಉತ್ತರಪ್ರದೇಶದಲ್ಲಿ ಆದ ಮುಖಭಂಗವೇ ಲೋಕಸಭೆ ಚುನಾವಣೆಯಲ್ಲಿಯೂ ಆದರೆ ಎಂಬ ಸಣ್ಣ ನಡುಕ ಆರಂಭವಾಗಿದೆ. ಏಕೆಂದರೆ ನರೇಂದ್ರ ಮೋದಿ ಅಷ್ಟು ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದಾರೆ. ಹಾಗಿದ್ದರೆ ಕಾಂಗ್ರೆಸ್ ಪಕ್ಷದ ಭವಿಷ್ಯವೇನು? [ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]
ರಾಹುಲ್ ಬಿಟ್ಟರೆ ಬೇರೆಯವರು ಯಾರ್ಯಾರಿದ್ದಾರೆ?
ಕಾಂಗ್ರೆಸ್ ಒಂದು ನಿರ್ಧಾರಕ್ಕೆ ಬರಲೇಬೇಕಾಗಿದೆ. ಒಂದು ರಾಹುಲ್ ಗಾಂಧಿಯನ್ನು ಅಧ್ಯಕ್ಷಗಾದಿಗೇರಿಸಿ, ಅವರಲ್ಲಿಯೇ ಮತ್ತೆ ವಿಶ್ವಾಸ ತೋರುವುದು. ಅಥವಾ ಕಾಂಗ್ರೆಸ್ ಚುಕ್ಕಾಣಿಯನ್ನು ನೆಹರೂ, ಗಾಂಧಿಯೇತರ ನಾಯಕರ ಕೈಗೆ ಹಸ್ತಾಂತರಿಸುವುದು. ನಿಜಸ್ಥಿತಿಯೇನೆಂದರೆ, ಕಾಂಗ್ರೆಸ್ ನಲ್ಲಿ ಸಮರ್ಥ ಯುವನಾಯಕರ ಕೊರತೆಯಿಲ್ಲ. ಇಲ್ಲದಿರುವುದು ಇಚ್ಛಾಶಕ್ತಿ ಮಾತ್ರ. ಅಂಥವರು ಯಾರ್ಯಾರಿದ್ದಾರೆ?[ಹಡಗೇ ಮುಳುಗಿದೆ, ಕಳ್ಕೊಂಡಿದ್ದು ಅಡಿಕೆ ಚೂರು ಅಂತಾರೆ ರಾಹುಲ್ ಗಾಂಧಿ]
ಪ್ರಿಯಾಂಕಾ ಗಾಂಧಿ ವದ್ರಾ
ಪ್ರಪ್ರಥಮವಾಗಿ ಹೆಸರು ಕೇಳಿಬರುವುದೇ ಪ್ರಿಯಾಂಕಾ ಗಾಂಧಿ ವದ್ರಾ ಅವರದ್ದು. ನಿಸ್ಸಂಶಯವಾಗಿ ಪ್ರಿಯಾಂಕಾ ರಾಹುಲ್ ಅವರಿಗಿಂತ ಮಾತಿನಲ್ಲಿ, ನಡವಳಿಕೆಯಲ್ಲಿ, ವರ್ಚಸ್ಸಿನಲ್ಲಿ, ಜಾಣತನದಲ್ಲಿ ಪ್ರಬುದ್ಧರು. ಇದರಲ್ಲಿ ಎರಡು ಮಾತೇ ಇಲ್ಲ. ಅವರು ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುವವರೆಗೆ ಅವರ ಯಾವ ಗುಣಗಳೂ ಒರೆಗೆ ಹಚ್ಚಲು ಸಾಧ್ಯವಿಲ್ಲ. ಆದರೆ, ಅವರು ಪ್ರವರ್ಧಮಾನಕ್ಕೆ ಬರಲು ರಾಹುಲ್ ಬಿಡುತ್ತಾರಾ? ಬಿಟ್ಟರೆ ರಾಹುಲ್ ಸ್ಥಾನಮಾನವೇನು?
ರಾಹುಲ್ ನೆರಳಿನಂತೆ ಜ್ಯೋತಿರಾಧಿತ್ಯ ಸಿಂಧಿಯಾ
ರಾಜವಂಶಸ್ಥರಾದ ಜ್ಯೋತಿರಾಧಿತ್ಯ ಸಿಂಧಿಯಾ ತಮ್ಮ ತಂದೆ ಮಾಧವರಾವ್ ಸಿಂಧಿಯಾ ಬಿಟ್ಟುಹೋದ ರಾಜಕೀಯ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಮಧ್ಯಪ್ರದೇಶದ ಗುಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಅವರು, ರಾಹುಲ್ ನೆರಳಿನಂತೆ ಅಡ್ಡಾಡುತ್ತಿರುತ್ತಾರೆ. ಆ ನೆರಳಿನಿಂದ ಹೊರಬಂದು ತಮ್ಮ ಸ್ವಂತ ವ್ಯಕ್ತಿತ್ವ ಬೆಳೆಸಿಕೊಂಡರೆ ಪ್ರಭಾವಿ ನಾಯಕರಾಗುವ ಎಲ್ಲ ಲಕ್ಷಗಳೂ ಅವರಲ್ಲಿವೆ.
ರಾಹುಲ್ ಸ್ನೇಹಬಳಗದಲ್ಲಿರುವ ಸಚಿನ್ ಪೈಲಟ್
ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದ ರಾಜೇಶ್ ಪೈಲಟ್ ಅವರ ಮಗ ಸಚಿನ್ ಪೈಲಟ್ ವಿದ್ಯಾವಂತ, ಗುಣವಂತ. ಮನಮೋಹನ ಸಿಂಗ್ ಅವರ ಸರಕಾರದಲ್ಲಿ ಮಂತ್ರಿಯಾಗಿಯೂ ಅನುಭವ ಪಡೆದಿದ್ದಾರೆ. ಅತ್ಯುತ್ತಮ ಸಂವಹನಕಾರರೂ ಆಗಿರುವ 39 ವರ್ಷದ ಸಚಿನ್ ಪೈಲಟ್ ಕಾಂಗ್ರೆಸ್ ಪಕ್ಷವನ್ನು ಹಲವಾರು ಟಿವಿ ಡಿಬೇಟುಗಳಲ್ಲಿ ಪ್ರತಿನಿಧಿ ಸೈ ಅನ್ನಿಸಿಕೊಂಡಿದ್ದಾರೆ. ರಾಹುಲ್ ಸ್ನೇಹಬಳಗದಲ್ಲಿರುವ ಸಚಿನ್ ಅವರಿಗೆ ಕಾಂಗ್ರೆಸ್ ಚುಕ್ಕಾಣಿ ಕೊಟ್ಟರೆ ಹೇಗೆ?
ರಾಹುಲ್ ವಿರುದ್ಧ ದನಿಯೆತ್ತಿದ್ದ ಮಿಲಿಂದ್ ದೇವೋರಾ
ಮಾಜಿ ಕಾಂಗ್ರೆಸ್ ನಾಯಕ ದಿವಂಗತ ಮುರಳಿ ದೇವೋರಾ ಅವರ ಮಗ ಮಿಲಿಂದ್ ದೇವೋರಾ ಮುಂಬೈ ಪ್ರತಿನಿಧಿಸುವ ಖಡಕ್ ನಾಯಕ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಳುಗಿದ ನಂತರ ರಾಹುಲ್ ವಿರುದ್ಧ ದನಿಯೆತ್ತುವ ಧೈರ್ಯ ತೋರಿದವರು ಮಿಲಿಂದ್ ದೇವೋರಾ. ಇಂಥ ಎದೆಗಾರಿಕೆ ಇಲ್ಲದಿದ್ದರೆ ಪಕ್ಷ ನಡೆಸುವ ತಾಕತ್ತು ಬರುವುದಾದರೂ ಹೇಗೆ? ಇದು ಗಾಂಧಿ ಫ್ಯಾಮಿಲಿಗೆ ಮೆಚ್ಚುಗೆಯಾಗದಿದ್ದರೂ ಮುಕ್ತ ಮನಸ್ಸು ಹರಿಯಬಿಡುವ, ಇದ್ದದ್ದು ಇದ್ದಂತೆ ಹೇಳುವ ಇಂಥ ನಾಯಕರು ಕಾಂಗ್ರೆಸ್ಸಿಗೆ ಬೇಕಾಗಿದೆ.
ದೆಹಲಿ ನಿವಾಸಿ ಅಜಯ್ ಮೇಕನ್
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ 53 ವರ್ಷದ ಅಜಯ್ ಮೇಕನ್ ಅವರು ರಾಹುಲ್ ಗಾಂಧಿ ಚೇಲಾಗಳಲ್ಲಿ ಒಬ್ಬರು. ಮನಮೋಹನ್ ಸಿಂಗ್ ಆಡಳಿತದಲ್ಲಿ ಹಲವಾರು ಹುದ್ದೆಗಳನ್ನು ಅಲಂಕರಿಸಿದ್ದ ಅಜಯ್ ದೆಹಲಿ ನಿವಾಸಿ. ಅಂತಹ ನಾಯಕತ್ವದ ಗುಣಗಳನ್ನು ಅವರು ಹೊಂದಿಲ್ಲವಾದರೂ, ರಾಹುಲ್ ಗಾಂಧಿಗಿಂತ ಉತ್ತಮರು ಎಂಬ ಮಾತು ಕೂಡ ಕೇಳಿಬಂದಿವೆ.
ಖರ್ಗೆಯವರಿಗಿಂತ ಬೇರೆ ನಾಯಕರು ಬೇಕೆ?
ಕರ್ನಾಟಕದ ಪ್ರಬುದ್ಧ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅಂತಹ ವರ್ಚಸ್ವಿ ನಾಯಕರಲ್ಲದಿರಬಹುದು. ರಾಜೀವ್, ಸೋನಿಯಾ ನೆರಳಿನಲ್ಲಿಯೇ ಉಳಿದಿದ್ದ ಖರ್ಗೆ ಅವರು ಎಂಥ ನಾಯಕರೆಂಬುದನ್ನು ಪ್ರತಿಪಕ್ಷದ ನಾಯಕರಾಗಿ ಅವರು ತೋರಿದ್ದಾರೆ. ಸದ್ಯಕ್ಕೆ ಎಳಸು ನಾಯಕರ ಕೈಗೆ ಕಾಂಗ್ರೆಸ್ ಚುಕ್ಕಾಣಿ ಕೊಡುವುದಕ್ಕಿಂತ ಹಿರಿಯ ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಟ್ಟರೆ ಮಾನವೂ ಉಳಿದೀತು.