ಭಾರತದ ಆರೋಗ್ಯ ಸಚಿವರಿಗೆ ಧನ್ಯವಾದ: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ
ನವದೆಹಲಿ, ಸೆಪ್ಟೆಂಬರ್ 22: ಕೊರೊನಾ ವೈರಸ್ ಸೋಂಕು ವಿರುದ್ದ ನೀಡಲಾಗುವ ಲಸಿಕೆಯನ್ನು ಭಾರತವು ರಫ್ತು ಮಾಡಲು ತೀರ್ಮಾನ ಮಾಡಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾರಿಗೆ ಧನ್ಯವಾದ ತಿಳಿಸಿದ್ದಾರೆ.
ಭಾರತವು ವಿಶ್ವದಲ್ಲೇ ಅಧಿಕ ಕೋವಿಡ್ ಲಸಿಕೆಯನ್ನು ಉತ್ಪಾದನೆ ಮಾಡುವ ದೇಶವಾಗಿದೆ. ಭಾರತವನ್ನು ವಿಶ್ವದ ಔಷಧಾಲಯ ಎಂದರೂ ತಪ್ಪೇನಿಲ್ಲ. ಭಾರತವು ಕೋವಿಡ್ ಲಸಿಕೆಯನ್ನು ರಫ್ತು ಮಾಡುತ್ತಿದ್ದ ಆರಂಭದಲ್ಲಿ ಭಾರತದಲ್ಲಿ ಕೋವಿಡ್ ಪ್ರಕರಣಗಳು ಅಧಿಕವಾಗಿ, ಲಸಿಕೆ ಪ್ರಮಾಣವು ಕಡಿಮೆ ಆಗಿತ್ತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ಭಾರೀ ವಾಗ್ದಾಳಿ ನಡೆಸಿತ್ತು. ಈ ವೇಳೆ ಕೇಂದ್ರ ಸರ್ಕಾರವು ಕಳೆದ ಎಪ್ರಿಲ್ನಲ್ಲಿ ಲಸಿಕೆಯನ್ನು ರಫ್ತು ಮಾಡುವುದನ್ನು ಸ್ಥಗಿತಗೊಳಿಸಿತ್ತು.
ಕೋವಿಶೀಲ್ಡ್ ಪಡೆದರೂ 'ಲಸಿಕೆ ಪಡೆದಿಲ್ಲ' ಎಂದು ಪರಿಗಣನೆ: ಯುಕೆ ಸರ್ಕಾರಕ್ಕೆ ಭಾರತ ಎಚ್ಚರಿಕೆ
ಈಗ "ಲಸಿಕೆ ಮೈತ್ರಿ" ಕಾರ್ಯಕ್ರಮದಡಿಯಲ್ಲಿ ಭಾರತವು ಕೋವಿಡ್ ಲಸಿಕೆಯನ್ನು ಅಕ್ಟೋಬರ್ ವೇಳೆಗೆ ರಫ್ತು ಮಾಡಲಿದೆ ಎಂದು ಸೋಮವಾರ ಘೋಷಣೆ ಮಾಡಿದೆ. ಭಾರತದ ಈ ನಿರ್ಧಾರದ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್, ಭಾರತದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾರಿಗೆ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೊಂ ಗೆಬ್ರೇಯೇಸಸ್, "ಅಕ್ಟೋಬರ್ನಲ್ಲಿ ಈ ನಿರ್ಣಾಯಕ ಕೋವಾಕ್ಸ್ ಕೋವಿಡ್ ಲಸಿಕೆಯ ರಫ್ತನ್ನು ಭಾರತ ಆರಂಭ ಮಾಡುವುದಾಗಿ ಘೋಷಣೆ ಮಾಡಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾರಿಗೆ ಧನ್ಯವಾದಗಳು," ಎಂದು ತಿಳಿಸಿದ್ದಾರೆ.
ಹಾಗೆಯೇ, "ಈ ವರ್ಷದ ಕೊನೆಯಲ್ಲಿ ಶೇಕಡ 40 ರಷ್ಟಾದರೂ ಕೋವಿಡ್ ಲಸಿಕೆ ನೀಡಿಕೆ ಗುರಿಯನ್ನು ವಿಶ್ವದ ಹಲವು ದೇಶಗಳು ತಲುಪುವುದಕ್ಕೆ ಈ ಮಹತ್ವದ ಬೆಳವಣಿಗೆ ಕಾರಣವಾಗಲಿದೆ. ಲಸಿಕೆ ಸಮಾನತೆ," ಎಂದು ಡಬ್ಲ್ಯೂಎಚ್ಒ ಮುಖ್ಯಸ್ಥ ಟೆಡ್ರೋಸ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದೀದಿ ವಿರುದ್ದದ ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಆಯೋಗ ನೊಟೀಸ್
ಕೊರೊನಾ ವೈರಸ್ ಸೋಂಕಿನ ವಿರುದ್ದ ವಿಶ್ವದಾದ್ಯಂತ ಸಮಾನವಾಗಿ ಲಸಿಕೆಯನ್ನು ಹಂಚಿಕೆ ಮಾಡುವ ನಿಟ್ಟಿನಲ್ಲಿ ಕೋವಾಕ್ಸ್ ಸೌಲಭ್ಯವನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಲಸಿಕೆಗಳು ಮತ್ತು ಪ್ರತಿರಕ್ಷಣೆಗಾಗಿ ಜಾಗತಿಕ ಒಕ್ಕೂಟ (ಜಿಎವಿಐ) ಮುನ್ನಡೆಸುತ್ತಿದೆ. "ಭಾರತ ದೇಶದಲ್ಲಿ ಎರಡನೇ ಅಲೆಯ ಸಂದರ್ಭದಲ್ಲಿ ಕೋವಿಡ್ ಲಸಿಕೆ ರಫ್ತನ್ನು ಸ್ಥಗಿತಗೊಳಿಸಿದ ಬಳಿಕ, ಭಾರೀ ತೊಂದರೆ ಉಂಟಾಗಿದೆ," ಎಂದು ಮೇ ತಿಂಗಳಿನಲ್ಲಿ ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಯುಎಸ್ ಏಜೆನ್ಸಿಯ ಆಡಳಿತಾಧಿಕಾರಿ ಸಮಾಂತ ಪವಾರ್ ಹೇಳಿದ್ದರು ಎಂಬುವುದನ್ನು ನಾವು ಈಗ ಸ್ಮರಿಸಬಹುದು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಈ ನಿರ್ಧಾರವನ್ನು ಭಾರತ ಕೈಗೊಂಡಿದೆ. ಅಮೆರಿಕದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳ ಜೊತೆಯಲ್ಲಿ ಸಭೆ ನಡೆಸಲಿದ್ದಾರೆ. ಹಾಗೆಯೇ ದ್ವಿಪಕ್ಷೀಯ ಸಭೆಗಳನ್ನು ಕೂಡಾ ನಡೆಸಲಿದ್ದಾರೆ. ಹಾಗೆಯೇ ವಿಶ್ವ ಆರೋಗ್ಯ ಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಕೂಡಾ ಮಾತನಾಡಲಿದ್ದಾರೆ. ಕ್ವಾಡ್ ಶೃಂಗ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ಸೋಂಕು ಹಾಗೂ ಲಸಿಕೆಯ ವಿಚಾರದಲ್ಲಿ ಚರ್ಚೆಗಳು ನಡೆಯಲಿದೆ. ಈ ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ಇರಲಿದೆ.
"ಲಸಿಕೆ ಮೈತ್ರಿ" ಕಾರ್ಯಕ್ರಮದಡಿಯಲ್ಲಿ ಭಾರತವು ಕೋವಿಡ್ ಲಸಿಕೆಯನ್ನು ಅಕ್ಟೋಬರ್ ವೇಳೆಗೆ ರಫ್ತು ಮಾಡಲಿದೆ ಎಂದು ಸೋಮವಾರ ಘೋಷಣೆ ಮಾಡಿದ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, "ಎಪ್ರಿಲ್ ಬಳಿಕ ದೇಶದಲ್ಲಿ ಕೋವಿಡ್ ಲಸಿಕೆ ಉತ್ಪಾದಣೆ ಪ್ರಮಾಣ ಅಧಿಕವಾಗಿದೆ," ಎಂದು ತಿಳಿಸಿದ್ದಾರೆ. ಹಾಗೆಯೇ "ಬರುವ ತಿಂಗಳಲ್ಲಿ ಕೋವಿಡ್ ಲಸಿಕೆ ಉತ್ಪಾದನೆ ನಾಲ್ಕು ಪಟ್ಟು ಅಧಿಕವಾಗಲಿದೆ. ಸುಮಾರು 300 ಮಿಲಿಯನ್ಗೂ ಅಧಿಕ ಡೋಸ್ಗಳು ಬರುವ ತಿಂಗಳು ಉತ್ಪಾದನೆ ಆಗಲಿದೆ," ಎಂದು ಕೂಡಾ ಮಾಹಿತಿ ನೀಡಿದ್ದಾರೆ.
"ನಾವು ಕೋವಿಡ್ ಲಸಿಕೆಯನ್ನು ರಫ್ತು ಮಾಡುವ ಮೂಲಕ ಬೇರೆ ದೇಶಗಳಿಗೂ ಸಹಾಯ ಮಾಡಲು ನಿರ್ಧಾರ ಮಾಡಿದ್ದೇವೆ. ಕೋವಾಕ್ಸ್ ವಿಚಾರದಲ್ಲಿ ನಮ್ಮ ಜವಾಬ್ದಾರಿಯನ್ನು ನಾವು ನಿಭಾಯಿಸುತ್ತೇವೆ. ಮೊದಲು ನೆರೆಯ ದೇಶಗಳಿಗೆ ಕೋವಿಡ್ ಲಸಿಕೆ," ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಮನ್ಸುಖ್ ಮಾಂಡವೀಯಾ ತಿಳಿಸಿದ್ದಾರೆ.
ಇನ್ನು ಭಾರತವು ಎಪ್ರಿಲ್ನಲ್ಲಿ ಕೋವಿಡ್ ಲಸಿಕೆ ಸರಬರಾಜನ್ನು ಸ್ಥಗಿತ ಮಾಡುವವರೆಗೆ ಸುಮಾರು 6.6 ಕೋಟಿ ಕೋವಿಡ್ ಲಸಿಕೆ ಡೋಸ್ಗಳನ್ನು ಸುಮಾರು 100 ದೇಶಗಳಿಗೆ ಮಾರಾಟ ಮಾಡಿದೆ ಅಥವಾ ಕೊಡುಗೆಯಾಗಿ ನೀಡಿದೆ.
(ಒನ್ ಇಂಡಿಯಾ ಸುದ್ದಿ)