ಸೋಂಕಿನ ವಿರುದ್ಧ ಹೋರಾಟಕ್ಕೆ ನಿರಂತರ ಬೆಂಬಲ; ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವ ಸಂಸ್ಥೆ
ನವದೆಹಲಿ, ಜನವರಿ 23: ಕೊರೊನಾ ಸೋಂಕಿನ ವಿರುದ್ಧದ ಜಾಗತಿಕ ಹೋರಾಟದಲ್ಲಿ ನಿರಂತರ ಬೆಂಬಲವನ್ನು ಶ್ಲಾಘಿಸಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಭಾರತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತದ ನೇತೃತ್ವವನ್ನು ಹೊಗಳಿ ಟ್ವೀಟ್ ಮಾಡಿರುವ ವಿಶ್ವ ಸಂಸ್ಥೆ ನಿರ್ದೇಶಕ ಟೆಡ್ರೋಸ್ ಅದಾನಾಂ ಗೆಬ್ರೆಯೇಸಸ್, "ಕೊರೊನಾ ಸೋಂಕಿನ ವಿರುದ್ಧದ ಜಾಗತಿಕ ಹೋರಾಟಕ್ಕೆ ನಿರಂತರ ಬೆಂಬಲ ನೀಡುತ್ತಿರುವ ಭಾರತ ಹಾಗೂ ನರೇಂದ್ರ ಮೋದಿಯವರಿಗೆ ಧನ್ಯವಾದ" ಎಂದಿದ್ದಾರೆ.
ಬ್ರೆಜಿಲ್ಗೆ ಕೊರೊನಾ ಲಸಿಕೆ ಪೂರೈಕೆ: 'ಗೌರವ ನಮ್ಮದು' ಎಂದ ಪ್ರಧಾನಿ ನರೇಂದ್ರ ಮೋದಿ
"ನಮ್ಮ ಜ್ಞಾನವನ್ನು ಹಂಚಿಕೊಂಡು ಒಗ್ಗಟ್ಟಾಗಿ ನಾವು ಕಾರ್ಯನಿರ್ವಹಿಸಿದರೆ ಮಾತ್ರ ಈ ಸೋಂಕನ್ನು ತಡೆಗಟ್ಟಿ ಹಲವು ಜೀವಗಳನ್ನು ಹಾಗೂ ಜೀವನವನ್ನು ಉಳಿಸಬಹುದು" ಎಂದು ಹೇಳಿದ್ದಾರೆ.
"ರಾಮಾಯಣದಲ್ಲಿ ಸಂಜೀವಿನಿ ಪರ್ವತ ಹೊತ್ತು ತಂದು ಲಕ್ಷ್ಮಣನಿಗೆ ಜೀವದಾನ ನೀಡಿದ ಹನುಮಂತನಂತೆ ಕೊರೊನಾ ವೈರಸ್ ಲಸಿಕೆಗಳನ್ನು ಭಾರತ ಬ್ರೆಜಿಲ್ಗೆ ಕಳುಹಿಸಿಕೊಟ್ಟು ನಮ್ಮ ಪ್ರಜೆಗಳ ಜೀವ ಉಳಿಸಿದೆ" ಎಂದು ಬ್ರೆಜಿಲ್ ಅಧ್ಯಕ್ಷ ಜೇರ್ ಎಂ ಬೋಲ್ಸೊನಾರೊ ಹೊಗಳಿದ ಬೆನ್ನಲ್ಲೇ ವಿಶ್ವಸಂಸ್ಥೆ ಕೂಡ ಟ್ವೀಟ್ ಮಾಡಿದೆ. "ನಮಸ್ಕಾರ ಪ್ರಧಾನಿ ನರೇಂದ್ರ ಮೋದಿ. ಕೊರೊನಾದ ತುರ್ತು ಪರಿಸ್ಥಿತಿಯಲ್ಲಿ ಭಾರತದಂತಹ ಸ್ನೇಹಿತನನ್ನು ಹೊಂದಿರುವುದು ಬ್ರೆಜಿಲ್ ಗೆ ಹೆಮ್ಮೆಯ ವಿಷಯ" ಎಂದು ಬ್ರೆಜಿಲ್ ಅಧ್ಯಕ್ಷ ಧನ್ಯವಾದ ಹೇಳಿದ್ದರು.
ಶುಕ್ರವಾರ ಬ್ರೆಜಿಲ್ ಗೆ ಭಾರತ ಎರಡು ಮಿಲಿಯನ್ ಕೋವಿಶೀಲ್ಡ್ ಲಸಿಕೆಗಳನ್ನು ಕಳುಹಿಸಿಕೊಟ್ಟಿದೆ. ಬಾಂಗ್ಲಾದೇಶ, ನೇಪಾಳ, ಭೂತಾನ್, ಮಾಲ್ಡೀವ್ಸ ಗೂ ಭಾರತದಿಂದ ಒಟ್ಟು 3.2 ಮಿಲಿಯನ್ ಡೋಸ್ ಗಳನ್ನು ನೀಡಲಾಗಿದೆ. ದಕ್ಷಿಣ ಆಫ್ರಿಕಾಗೂ ಕೆಲವೇ ದಿನಗಳಲ್ಲಿ ಲಸಿಕೆಯನ್ನು ಕಳುಹಿಸಿಕೊಡಲಾಗುತ್ತಿದೆ.
ಜನವರಿ 16ರಿಂದ ಭಾರತದಲ್ಲಿ ಬೃಹತ್ ಕೊರೊನಾ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಇದುವರೆಗೂ ಹದಿನಾಲ್ಕು ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಗಳನ್ನು ನೀಡಲಾಗಿದೆ.