3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?
ನವದೆಹಲಿ, ಮಾರ್ಚ್ 25 : "ಎಲ್ಲ ಲೆಕ್ಕಾಚಾರಗಳನ್ನು ಪರ್ಫೆಕ್ಟ್ ಆಗಿ ಮಾಡಲಾಗಿದೆ. ಭಾರತದ ಜನಸಂಖ್ಯೆಯ ಶೇ.20ರಷ್ಟು ಅಂದರೆ, 5 ಕೋಟಿ ಕುಟುಂಬಗಳು ಪ್ರತಿವರ್ಷ 72 ಸಾವಿರ ರುಪಾಯಿಯನ್ನು ನೇರವಾಗಿ ತಮ್ಮ ಖಾತೆಗೆ ಪಡೆಯಲಿದ್ದಾರೆ!"
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೀಗೆಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡುತ್ತಿದ್ದಂತೆ, ಇಂಟರ್ನೆಟ್ಟಿನಲ್ಲಿ ಲೆಕ್ಕಾಚಾರಗಳು ಶುರುವಾಗಿವೆ. ಒಂದೊಂದು ಕುಟುಂಬಕ್ಕೆ ವರ್ಷಕ್ಕೆ 72 ಸಾವಿರ ರುಪಾಯಿಯಂದರೆ ವರ್ಷಕ್ಕೆ ಎಷ್ಟು ಖರ್ಚಾಗುತ್ತದೆ? ಆ 5 ಕೋಟಿ ಕುಟುಂಬಗಳು ಯಾವುವು? ಇತ್ಯಾದಿ.
ಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆ
ಸರಳವಾಗಿ ಲೆಕ್ಕ ಹಾಕಿದರೆ 3 ಲಕ್ಷ 60 ಸಾವಿರ ಕೋಟಿ ರುಪಾಯಿ ಸರಕಾರದ ಬೊಕ್ಕಸದಿಂದ ಪ್ರತಿವರ್ಷ ಶೇ.20ರಷ್ಟು ಬಡವರ ಬ್ಯಾಂಕ್ ಖಾತೆಯನ್ನು ಸೇರಲಿದೆ, ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಚುನಾವಣೆ ಗೆದ್ದರೆ ಮತ್ತು ರಾಹುಲ್ ಗಾಂಧಿ ಪ್ರಧಾನಿಯಾದರೆ! ಇಷ್ಟೊಂದು ಹಣವನ್ನು ರಾಹುಲ್ ಗಾಂಧಿ ಹೇಗೆ ಕ್ರೊಢೀಕರಿಸುತ್ತಾರೆ?
ಈ ಶೇ.20ರಷ್ಟು ಜನರು ಯಾರು? ಅವರನ್ನು ಹೇಗೆ ಗುರುತಿಸುವುದು? ಅವರ ಆದಾಯದ ಮಿತಿ ಎಷ್ಟು? ಯಾರು ಬಡವರ ಲೆಕ್ಕಕ್ಕೆ ಬರುತ್ತಾರೆ? ಯಾವ ಆಧಾರದ ಮೇಲೆ ಈ ಭರವಸೆಯನ್ನು ರಾಹುಲ್ ಗಾಂಧಿ ಅವರು ದೇಶದ ಜನತೆಗೆ ನೀಡುತ್ತಾರೆ? ಈ ಲೆಕ್ಕವನ್ನು ಅವರಿಗೆ ಹೇಳಿದವರು ಯಾರು? ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಪುಟಿದೇಳುತ್ತಿವೆ.
ಉಚಿತವಾಗಿ ಹಣವನ್ನೂ ನೀಡುವುದೆಷ್ಟು ಸರಿ?
ಪಾವನಾ ಎಂಬುವವರು, ಈ ಶೇ.20ರಷ್ಟು ಅಂದ್ರೆ ಏನು? ಈ ಖರ್ಚಿನ ಲೆಕ್ಕವನ್ನು ಹೇಗೆ ಹಾಕುತ್ತೀರಿ? ಬಡವರಿಗೆ ಉಚಿತ ಆಹಾರ, ಉಚಿತ ಮನೆ, ಉಚಿತ ಗ್ಯಾಸ್, ಉಚಿತ ವಿದ್ಯುತ್, ನೀಡುವುದರ ಜೊತೆಗೆ ಬಡವರಿಗೆ ಉಚಿತವಾಗಿ ಹಣವನ್ನೂ ನೀಡುವುದೆಷ್ಟು ಸರಿ? ಎಂದು ರಾಹುಲ್ ಗಾಂಧಿ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಪ್ರಶ್ನೆಗಳನ್ನು ಜನರು ಕೇಳಲು ಆರಂಭಿಸಿದ್ದಾರೆ.
ಬಜೆಟ್ಟಿನ ಯಾವ ಭಾಗದಿಂದ ನೀಡುತ್ತೀರಿ?
ಚೌಕಿದಾರ್ ಜಿಎಸ್ ಪಾಥಿ ಎಂಬುವವರು, 3.6 ಲಕ್ಷ ಕೋಟಿ, ಇದು ಭಾರೀ ದೊಡ್ಡ ಮೊತ್ತ. ಕೇಂದ್ರ ಬಜೆಟ್ಟಿನಲ್ಲಿ ಯಾವ ಭಾಗದಿಂದ ಈ ಹಣವನ್ನು ಜನರಿಗೆ ನೀಡುವಿರಿ? ಎಂದು ಪ್ರಶ್ನಿಸಿದ್ದು, ಇಡೀ ದೇಶದ ತೆರಿಗೆ ಹಣವೇ 14.55 ಲಕ್ಷ ಕೋಟಿ ರುಪಾಯಿಯಾಗುತ್ತದೆ. ಇದರಲ್ಲಿ ಶೇ.25ರಷ್ಟು ಹಣವನ್ನು ಯಾವುದೇ ಆದಾಯವಿಲ್ಲದೆ ಬಡವರಿಗೆ ಉಚಿತವಾಗಿ ಹಂಚಿಬಿಡುತ್ತೀರಾ? ನೋಡೋಣ ಬಿಜೆಪಿ ಇದಕ್ಕೆ ಹೇಗೆ ತಿರುಗೇಟು ನೀಡುತ್ತದೆಂದು ಎಂದು ತಮ್ಮ ಲೆಕ್ಕವನ್ನೂ ರಾಹುಲ್ ಗಾಂಧಿ ಅವರ ಮುಂದಿಟ್ಟಿದ್ದಾರೆ.
ಮೋದಿ ಸುಳ್ಳು ಹೇಳುತ್ತಾರೆ, ಮಮತಾ ಸುಳ್ಳು ಭರವಸೆ ಕೊಡುತ್ತಾರೆ: ರಾಹುಲ್
ಜನರನ್ನು ಮೂರ್ಖರನ್ನಾಗಿ ಮಾಡುವುದು...
ಇವರ ಮಾತಿಗೆ ಮರುಳಾಗಬೇಡಿ. ಇವರು ದೇಶವನ್ನೇ ಮಾರಾಟ ಮಾಡಿಬಿಡುತ್ತಾರೆ. ಜನರನ್ನು ಮೂರ್ಖರನ್ನಾಗಿ ಮಾಡುವುದು ಈ ಕುಟುಂಬಕ್ಕೆ ಬಳುವಳಿಯಾಗಿ ಬಂದ ಕಸುಬು. ಈ ಹೇಳಿಕೆ ರಾಹುಲ್ ಗಾಂಧಿ ಅವರಿಂದ ಬಂದ ನಂತರ, ಕಾಂಗ್ರೆಸ್ ಪಕ್ಷವನ್ನು ದೇಶದ ಜನರು ಸಂಪೂರ್ಣವಾಗಿಯೇ ನಿರ್ನಾಮ ಮಾಡಿದರೂ ಅಚ್ಚರಿಯಿಲ್ಲ ಎಂದು ಕೆಲವರು ಟ್ವೀಟಿಸಿದ್ದಾರೆ.
ಜನರು ಕೆಲಸಕ್ಕೆ ಹೋಗುತ್ತಾರಾ?
ಇದೆಲ್ಲ ಲೆಕ್ಕವನ್ನು ರಾಹುಲ್ ಗಾಂಧಿ ಅವರು, ರಣದೀಪ್ ಸುರ್ಜೇವಾಲಾ ಅವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡೇ ಈ ಲೆಕ್ಕವನ್ನು ಕೊಟ್ಟಿದ್ದಾರೆ. ಈ ಲೆಕ್ಕ ನೀಡುವ ಮೊದಲು ದೇಶ ಕಂಡ ಅತ್ಯಂತ ಪ್ರಖರ ಆರ್ಥಿಕ ತಜ್ಞ, 10 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಆಳಿದ ಡಾ. ಮನಮೋಹನ ಸಿಂಗ್ ಅವರನ್ನು ಒಂದು ಮಾತು ಕೇಳಬಹುದಿತ್ತಲ್ಲ? ಇದು ಒಂದು ವರ್ಷದ ಬಾಬತ್ತು ಮಾತ್ರವಲ್ಲ, ಪ್ರತಿವರ್ಷ ಬಡವರು ಈ ಹಣವನ್ನು ಪಡೆಯಲಿದ್ದಾರೆ. ಪ್ರತಿವರ್ಷ 72 ಸಾವಿರ ರುಪಾಯಿಯೆಂದರೆ, ತಿಂಗಳಿಗೆ 6 ಸಾವಿರು ರುಪಾಯಿ ಬರುತ್ತದೆಂದರೆ, ಎಷ್ಟು ಜನ ಕೆಲಸ ಬಿಟ್ಟು ಮನೆಯಲ್ಲಿಯೇ ಇರುವುದಿಲ್ಲ? ಬಡವರು ಬಡವರಾಗಿಯೇ ಇರಬೇಕೆ? ಇದರಿಂದ ರಾಹುಲ್ ಗಾಂಧಿ ಅವರು ಏನು ಸಾಧನೆ ಸಾಧಿಸಿದಂತೆ ಆಯಿತು ಎಂದು ಕೆಲವೊಬ್ಬರು ಕೇಳುತ್ತಿದ್ದಾರೆ.
ಬಿಜೆಪಿಯ ಎಲ್ಲಾ ಚೌಕಿದಾರರೂ ಚೋರರೇ! ರಾಹುಲ್ ಗಾಂಧಿ ಟ್ವೀಟ್
ರಾಹುಲ್ ಐಕ್ಯೂವನ್ನು ದೇಶ ಪ್ರತಿಬಿಂಬಿಸುತ್ತದೆ
ಲೋಹಿತ್ ಎಂಬುವವರು, ಸ್ವಾಮೀ ರಾಹುಲ್ ಗಾಂಧಿಯವರೆ, ನೀವು ಬಡ ಕುಟುಂಬಕ್ಕೆ 12 ಸಾವಿರ ರುಪಾಯಿ ಮೂಲ ಆದಾಯವನ್ನು ನೀಡಿದರೆ, ಅದು ಎಚ್ಆರ್ಎ (ಮನೆ ಬಾಡಿಗೆ ಭತ್ಯೆ), ಪಿಎಫ್ (ಪ್ರಾವಿಡೆಂಟ್ ಫಂಡ್) ಮುಂತಾದವುಗಳನ್ನು ಒಳಗೊಂಡಿರುತ್ತದಾ? ಏನೇ ಆಗಲಿ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಏಕೆ ಖರ್ಚು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ. ನಾವು ಬಡ ಕುಟುಂಬಕ್ಕೆ ಸೇರಿದವರು ಎಂಬುದನ್ನು ಖಚಿತಪಡಿಸಿಕೊಂಡರೆ ಆಯಿತು. ಯಾವುದೇ ಶಿಕ್ಷಣವಿಲ್ಲದೆ, ಇಡೀ ದೇಶ ನಿಮ್ಮದೇ ಐಕ್ಯೂವನ್ನು ಪ್ರತಿಬಿಂಬಿಸುತ್ತದೆ ಎಂದು ರಾಹುಲ್ ಗಾಂಧಿ ಅವರಿಗೆ ಸರಿಯಾಗಿಯೇ ಚಾಟಿಯೇಟು ನೀಡಿದ್ದಾರೆ.
ಇಂತಹ ಯೋಜನೆ ಯಾರೂ ರೂಪಿಸಿಲ್ಲ
ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು, ಕನಿಷ್ಠ ಆದಾಯ ಗ್ಯಾರಂಟಿ ಸ್ಕೀಂನ ವಿವರವನ್ನು ನಿಮಗೆ ನಾನು ಅತ್ಯಂತ ಹೆಮ್ಮೆಯಿಂದ ನೀಡುತ್ತೇನೆ. ಇದನ್ನು ಭಾರತ ದೇಶದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಇಂತಹ ಯೋಜನೆಯನ್ನು ಯಾರೂ ರೂಪಿಸಿಲ್ಲ ಎಂದು ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದಿದ್ದರು. ಅರೇ ರಾಹುಲ್ ಸರ್, ಪ್ರತಿ ತಿಂಗಳಿಗೆ ಪ್ರತಿ ಕುಟುಂಬಕ್ಕೆ 12 ಸಾವಿರ ರುಪಾಯಿ ಕನಿಷ್ಠ ಆದಾಯ ದೊರಕಿಸಿಕೊಟ್ಟರೆ ವರ್ಷಕ್ಕೆ 72 ಸಾವಿರ ರುಪಾಯಿ ಹೇಗೆ ಆಗುತ್ತದೆ. ಅವರ ಗಣಿತ ಸ್ವಲ್ಪ ಕಂಜೋರ್ (ದುರ್ಬಲ) ಇದೆ ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ರಾಹುಲ್ ಅವರ ಈ ಘೋಷಣೆಯಿಂದ ಬಡವರು ಖುಷಿಯಾಗಿದ್ದಾರೆ. ಆದರೆ, ವಿಚಾರ ಮಾಡುವ ಬುದ್ಧಿವಂತಿಕೆ ಬಡವರಿಗೂ ಇರುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.