ಉತ್ತರಾಖಂಡ ಹಿಮ ಪ್ರವಾಹ; ಅಷ್ಟಕ್ಕೂ ಘಟನೆ ಹಿಂದಿನ ಕಾರಣವೇನು?
ಡೆಹ್ರಾಡೂನ್, ಫೆಬ್ರುವರಿ 09: ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಹಿಮಪ್ರವಾಹದಲ್ಲಿ ನೂರಾರು ಮನೆಗಳು ಕೊಚ್ಚಿಹೋಗಿ, ಎರಡು ಬೃಹತ್ ಅಣೆಕಟ್ಟುಗಳು ಹೇಳಹೆಸರಿಲ್ಲದಂತಾಗಿವೆ. ಹದಿಮೂರು ಹಳ್ಳಿಗಳು ಜಲಾವೃತವಾಗಿದ್ದು, ರಸ್ತೆ ಸಂಪರ್ಕ, ಸೇತುವೆಗಳೂ ಕುಸಿದುಹೋಗಿವೆ. ರಕ್ಷಣಾ ಕಾರ್ಯ ಮುಂದುವರೆದಿದೆ.
ಇದುವರೆಗೂ 26 ಮಂದಿ ಮೃತದೇಹಗಳು ದೊರೆತಿವೆ. ನಾಪತ್ತೆಯಾದ 171 ಜನರ ಸುಳಿವಿನ್ನೂ ಸಿಕ್ಕಿಲ್ಲ. ಆದರೆ ಘಟನೆಯ ಹಿಂದಿನ ಕಾರಣ ಮಾತ್ರ ಇನ್ನೂ ಅಸ್ಪಷ್ಟವಾಗಿದೆ. ಈ ಹಿಮ ಪ್ರವಾಹದ ಹಿಂದಿನ ಕಾರಣವೇನು? ಯಾವ ಅಂಶ ಈ ಪ್ರಾಕೃತಿಕ ವಿಕೋಪಕ್ಕೆ ಎಡೆ ಮಾಡಿಕೊಟ್ಟಿತು ಎನ್ನುವ ಕುರಿತು ವಿಜ್ಞಾನಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಹಲವು ಸಂಸ್ಥೆಗಳು ಉಪಗ್ರಹ ಚಿತ್ರಗಳನ್ನಾಧರಿಸಿ ವಿಶ್ಲೇಷಣೆ ಮಾಡಿವೆ. ಅವುಗಳಲ್ಲಿ ಕೆಲವು ಇಲ್ಲಿವೆ. ಮುಂದೆ ಓದಿ...
ಪರ್ವತದಡಿಯ ನದಿಯಲ್ಲಿನ ಒತ್ತಡದಿಂದ ಪ್ರವಾಹ ಸಂಭವಿಸಿತೇ?
ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ಈ ಘಟನೆ ಕುರಿತು ವಿಶ್ಲೇಷಣೆ ನಡೆಸಿದೆ. ಪರ್ವತಗಳ ಅಡಿಯಲ್ಲಿನ ಹಿಮ ನದಿ ಮೇಲಿನ ಒತ್ತಡ ಈ ಘಟನೆಗೆ ಕಾರಣವಿರಬಹುದು ಎಂದು ವಿಶ್ಲೇಷಿಸಿದೆ. ಈ ಅಂತರ ನದಿಯು ಸುಮಾರು 4.5 ಮಿಲಿಯನ್ ಕ್ಯೂಬಿಕ್ ಮೀಟರ್ ನಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದ್ದು, ಇದರ ಮೇಲಿನ ಒತ್ತಡವೂ ಹಿಮಪ್ರವಾಹ ಸಂಭವಿಸಲು ಕಾರಣ ಎಂದು ಅಂದಾಜು ಮಾಡಿದೆ. ಹೆಚ್ಚಿನ ಮಟ್ಟದ ಅಂತರ ಜಲ ಶೇಖರಣೆಯಾಗಿ, ಮತ್ತೊಂದು ಕಡೆಯಿಂದ ನೀರು ಅಧಿಕ ಮಟ್ಟದಲ್ಲಿ ಹರಿದುಬಂದಿದ್ದು ಹಿಮಪ್ರವಾಹಕ್ಕೆ ಕಾರಣವಾಗಿದೆ ಹಾಗೂ ಕಣಿವೆಯಲ್ಲಿ ರಭಸದಿಂದ ಮುನ್ನುಗ್ಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಉತ್ತರಾಖಂಡ ಹಿಮನದಿ ಸ್ಫೋಟ; ಎಚ್ಚರಿಕೆ ಕೊಟ್ಟರೂ ನಿರ್ಲಕ್ಷಿಸಿದ್ದರ ಫಲ...
ಹಿಮ ಕುಸಿತದಿಂದ ಪ್ರವಾಹ
ಉತ್ತರ ನಂದಾದೇವಿ ಸಮೀಪ ಪರ್ವತದಡಿಯಲ್ಲಿ ಒತ್ತಡ ಹೆಚ್ಚಾಗಿ ನೀರು ರಭಸವಾಗಿ ಸ್ಫೋಟಗೊಂಡಿದ್ದು, ಇದರಿಂದ ಹಿಮ ಕುಸಿದಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಹಿಮಪ್ರವಾಹ ಸಂಭವಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಿಮಾಲಯನ್ ಗ್ಲೇಸಿಯರ್ ಥಿಕ್ನೆಸ್ ಮ್ಯಾಪರ್ ಸಾಧನದೊಂದಿಗೆ ಈ ಅಂದಾಜು ಮಾಡಲಾಗಿದೆ.
ಹಠಾತ್ತನೆ ಹಿಮ ಕುಸಿದ ಪರಿಣಾಮ ಹಿಮಪ್ರವಾಹ?
ಉತ್ತರಾಖಂಡದ ಘಟನೆ ಕುರಿತು ಪರಿಶೀಲನೆಗೆ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಸೋಮವಾರ ಸಭೆ ನಡೆಸಿದ್ದು, "ಮಿಲಿಯನ್ ಮೆಟ್ರಿಕ್ ಟನ್ ಗಟ್ಟಲೆ ಹಿಮಪರ್ವತಗಳಿಂದ ಹಿಮಗಡ್ಡೆಗಳು ಹಠಾತ್ತನೆ ಕುಸಿದಿರುವುದರಿಂದ ಈ ಅವಘಡ ಸಂಭವಿಸಿದೆ. ಇದನ್ನು ಹಿಮನದಿ ಸ್ಫೋಟ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದರು. ಜೊತೆಗೆ ಇದನ್ನು "ಅಭಿವೃದ್ಧಿ ವಿರೋಧಿ" ಎಂಬಂತೆ ಬಿಂಬಿಸದಂತೆಯೂ ಜನರಲ್ಲಿ ಮನವಿ ಮಾಡಿದ್ದರು. ಇಸ್ರೋ ವಿಜ್ಞಾನಿಗಳು ಕೆಲವು ಚಿತ್ರಗಳನ್ನು ತೋರಿಸಿದ್ದು, ಅದರಲ್ಲಿ ಹಿಮನದಿ ಸ್ಫೋಟಗೊಂಡ ಕುರಿತು ಸುಳಿವಿಲ್ಲ. ಆದರೆ ಬರಿದಾದ ಪರ್ವತಗಳು ಗೋಚರಿಸಿವೆ ಎಂದು ಹೇಳಿದ್ದರು. ಬೃಹತ್ ಪ್ರಮಾಣದಲ್ಲಿ ಹಿಮಗಡ್ಡೆಗಳು ಕುಸಿದ ಮೂಲ ಗೋಚರಿಸಿದೆ ಎಂದು ತಿಳಿಸಿದ್ದರು.
ಹಠಾತ್ ಹಿಮಕುಸಿತದಿಂದ ಪ್ರವಾಹ ಸಂಭವಿಸಿದ್ದೇ ವಿನಾ, ಹಿಮನದಿ ಸ್ಫೋಟದಿಂದಲ್ಲ: ರಾವತ್
ಭೂಕುಸಿತ ಕಾರಣ ಎಂದಿದ್ದ ಅಮೆರಿಕ ವಿಜ್ಞಾನಿಗಳು
ಅಮೆರಿಕಾ ಮೂಲದ ವಿಜ್ಞಾನಿಗಳು ಈ ಘಟನೆ ಕುರಿತು ವಿಶ್ಲೇಷಣೆ ನೀಡಿದ್ದು, ಇದಕ್ಕೆ ಭೂಕುಸಿತ ಕಾರಣ ಎಂದು ಹೇಳಿದ್ದರು. ಭೂಕುಸಿತದಿಂದ ಅಪಾರ ಪ್ರಮಾಣದಲ್ಲಿ ಹಿಮ ಕುಸಿದು ಹಿಮ ಪ್ರವಾಹ ಸಂಭವಿಸಿದೆ. ಲಭ್ಯವಿರುವ ಉಪಗ್ರಹ ಚಿತ್ರಗಳಿಂದ ಇದನ್ನು ಕಂಡುಕೊಳ್ಳಲಾಗಿದೆ. ನಂದಾದೇವಿ ಹಿಮ ಬೆಟ್ಟಗಳ ಕುಸಿತದಿಂದ ಈ ಪ್ರವಾಹ ಸಂಭವಿಸಿದೆ ಎಂದು ಅಂದಾಜು ಮಾಡಿದ್ದರು. ಈ ಪ್ರದೇಶದಲ್ಲಿ ಕೆಲವು ದಿನಗಳಿಂದ ಹಿಮ ಸುರಿಯುತ್ತಿದ್ದು, ಈ ಎಲ್ಲಾ ಅಂಶವೂ ಭಾನುವಾರ ನಡೆದ ಘಟನೆಗೆ ಕಾರಣವಾಗಿರಬಹುದು ಎಂದಿದ್ದರು.