ಹಿಮಾಚಲದ ಸಿಎಂ ಅಭ್ಯರ್ಥಿ ಪ್ರೇಮ್ ಸೋಲಲು ಏನು ಕಾರಣ?
ಶಿಮ್ಲಾ, ಡಿಸೆಂಬರ್ 19: ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. ಆದರೆ, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋಲು ಕಂಡಿದ್ದಾರೆ. ಮೋದಿ ಆಪ್ತ ಪ್ರೇಮ್ ಕುಮಾರ್ ಸೋಲಿಗೆ ಕಾರಣವೇನು? ಮುಂದೆ ಓದಿ...
'ರಾಜಕೀಯದಲ್ಲಿ ವೈಯಕ್ತಿಕ ಸೋಲು ಮುಖ್ಯವಾಗುವುದಿಲ್ಲ. ನಾನು ಸೋಲು ನಿರೀಕ್ಷೆ ಮಾಡಿರಲಿಲ್ಲ' ಎಂದು ಧುಮಾಲ್ ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ | ||
---|---|---|
ಪಕ್ಷ | 2017 | 2012 |
ಬಿಜೆಪಿ | 44 | 26 |
ಕಾಂಗ್ರೆಸ್ | 21 | 36 |
ಎಚ್ಎಲ್ಪಿ | 0 | 1 |
ಸ್ವತಂತ್ರ | 2 | 5 |
ಇತರೆ | 1 | 0 |
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಮತದಾನಕ್ಕೆ 2 ವಾರಗಳ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.
ಧುಮಾಲ್ಗೂ ಮೊದಲು ಜೆಪಿ ನಡ್ಡಾ ಹೆಸರು ಸಿಎಂ ರೇಸ್ನಲ್ಲಿ ಕೇಳಿಬಂದಿತ್ತು. ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಾಯಿತು. ಸುಜಾನ್ಪುರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಾಜೇಂದ್ರ ಸಿಂಗ್ ರಾಣಾ ಗೆಲುವು ಸಾಧಿಸಿದ್ದಾರೆ.
ಕಾರಣ 1. ಸಿಎಂ ಅಭ್ಯರ್ಥಿ ಆಯ್ಕೆ
ಚುನಾವಣೆಗೆ ಒಂದು ವಾರ ಇರುವಾಗ ಮುಖ್ಯಮಂತ್ರಿಯ ಆಯ್ಕೆ ಮಾಡಿದ್ದು, ಬಿಜೆಪಿಗೆ ಮುಳುವಾಯಿತು. ಸಾಮಾನ್ಯವಾಗಿ ರಾಜ್ಯವೊಂದರ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಘೋಷಣೆ ವಿಷಯದಲ್ಲಿ ತಡ ಮಾಡದ ಬಿಜೆಪಿ, ಈ ಬಾರಿ ಎಡವಿದೆ. ಆಯ್ಕೆ ವಿಳಂಬವಾಗಿದ್ದು, ಧುಮಾಲ್ ಅವರ ಬಗ್ಗೆ ಹೊಸ ಕ್ಷೇತ್ರದಲ್ಲಿ ಸರಿಯಾದ ಪ್ರಚಾರಕ್ಕೆ ಅಡ್ಡಿಯಾಯಿತು.
ಕ್ಷೇತ್ರ ಬದಲಾವಣೆ
ಹಮೀರ್ ಪುರ್ ದ ಸ್ವಂತ ಕ್ಷೇತ್ರವನ್ನು ಬಿಟ್ಟು ಹೈಕಮಾಂಡ್ ಆದೇಶದಂತೆ ಸುಜಾನ್ ಪುರಕ್ಕೆ ಬಂದರು. ಕಾಂಗ್ರೆಸ್ಸಿನ ರಾಜೀಂದರ್ ರಾಣಾ ಅವರು ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಲ್ಲದೆ, ಜನಾನುರಾಗಿಯಾಗಿದ್ದಾರೆ. ಕ್ಷೇತ್ರ ಬದಲಾವಣೆ ಬಗ್ಗೆ ಕೂಡಾ ಅಪಸ್ವರ ಕೇಳಿ ಬಂದರೂ ಯಾರೂ ಸೊಲ್ಲೆತ್ತಲಿಲ್ಲ.
ಹೊಸ ಕ್ಷೇತ್ರ, ಮೋದಿ ಬೆಂಬಲ
ಧುಮಾಲ್ ಅವರಿಗೆ ಇದು ಹೊಸ ಕ್ಷೇತ್ರವಾಗಿತ್ತು. ಎಲ್ಲವನ್ನು ಮೊದಲಿಂದ ಆರಂಭಿಸಬೇಕಿತ್ತು. ಬ್ರಾಹ್ಮಣ ಮತ್ತು ರಜಪೂತ ಮತಗಳನ್ನು ಸೆಳೆಯಲು ಧುಮಾಲ್ ಆಯ್ಕೆ ಸಹಾಯಕವಾಗಲಿದೆ ಎಂಬುದು ಪಕ್ಷದ ಲೆಕ್ಕಾಚಾರವಾಗಿತ್ತು. ಆದರೆ, ಲೆಕ್ಕಾಚಾರ ಉಲ್ಟಾ ಹೊಡೆಯಿತು. ಠಾಕೂರ್ ಪಂಗಡದ ಹಿರಿಯ ನಾಯಕನನ್ನು ಜನ ಒಪ್ಪಿಕೊಳ್ಳಲಿಲ್ಲ. ಮೋದಿ ಆಪ್ತ ಎಂಬ ಟ್ಯಾಗ್ ವರ್ಕ್ ಆಗಲಿಲ್ಲ.
ಸಿಎಂ ಅಭ್ಯರ್ಥಿಯಾಗಿ ಆಯ್ಕೆ
ಅಭ್ಯರ್ಥಿಯಾಗಿ ಆಯ್ಕೆ ಬಗ್ಗೆ ಮಾಡಿದ್ದರ ಬಗ್ಗೆ ಅಸಮಾಧಾನ ಎದ್ದಿತ್ತು. ಆದರೆ, ಪ್ರಧಾನಿ ಮೋದಿ ಅವರ ಆಪ್ತ ವಲಯದವರಾದ ಧುಮಾಲ್ ಅವರ ವಿರೋಧ ಕಟ್ಟಿಕೊಳ್ಳಲು ಯಾರು ಸಿದ್ಧರಿರಲಿಲ್ಲ. ಜೆಪಿ ನಡ್ಡಾ ಪರ ಬೆಂಬಲಿಗರು ಭಾರಿ ಲಾಬಿ ನಡೆಸಿದ್ದರು. ಆದರೆ, ಕೊನೆಕ್ಷಣದಲ್ಲಿ ಅಭ್ಯರ್ಥಿ ಬದಲಾಗಿದ್ದು ಮುಳುವಾಯಿತು. 73 ವರ್ಷ ವಯಸ್ಸಿನ ಧುಮಾಲ್ ಅವರು ಸಿಎಂ ಆದರೂ ಎರಡು ವರ್ಷಗಳ ಮಾತ್ರ ಅಧಿಕಾರದಲ್ಲಿರಲು ಸಾಧ್ಯ ಎಂಬುದು ಬಿಜೆಪಿ ಅಲಿಖಿತ ನಿಯಮ.