ಸುಪ್ರೀಂ ನ್ಯಾಯಮೂರ್ತಿಗಳು ಬರೆದಿರುವ ಪತ್ರದಲ್ಲಿ ಏನಿದೆ?
ನವದೆಹಲಿ, ಜನವರಿ 12 : ನ್ಯಾಯಾಂಗ - ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳಲ್ಲಿ ಒಂದು. ಈಗ ಆ ಒಂದು ಸ್ತಂಭವೇ ಅಲುಗಾಡಲು ಆರಂಭಿಸಿದೆ. ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೇ ಭುಗಿಲೆದಿದ್ದಾರೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ. ನ್ಯಾಯಾಂಗ ವ್ಯವಸ್ಥೆ ಅಪಾರದರ್ಶಕವಾಗಿರದಿದ್ದರೆ ದೇಶದ ಪ್ರಜಾಪ್ರಭುತ್ವಕ್ಕೇ ಮಾರಕವಾಗಲಿದೆ. ಕೆಲವಾರು ತಿಂಗಳುಗಳಲ್ಲಿ ಹಲವಾರು ಅನಿರೀಕ್ಷಿತ, ಅಹಿತಕರ ಘಟನೆಗಳು ನಡೆದಿವೆ. ಅವನ್ನು ಸರಿಪಡಿಸಿ ಎಂದು ಪತ್ರ ಬರೆದರೂ ಮುಖ್ಯ ನ್ಯಾಯಮೂರ್ತಿಗಳು ಸರಿಪಡಿಸಿಲ್ಲ ಎಂದು ನಾಲ್ವರು ನ್ಯಾಯಮೂರ್ತಿಗಳು ಗಂಭೀರ ಆರೋಪ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ಕರೆದಿದ್ದು ಏಕೆ?
ಮೇಲ್ನೋಟಕ್ಕೆ ನ್ಯಾಯಮೂರ್ತಿಗಳು ತಿರುಗಿಬಿದ್ದಿರುವ ಈ ವಿದ್ಯಮಾನ, ನ್ಯಾಯಾಂಗದ ಸರ್ವತೋಮುಖ ದುರಸ್ತಿಗಾಗಿ ಕಂಡರೂ, ಇದರ ಮೂಲ ನ್ಯಾಯಮೂರ್ತಿ ಲೋಯಾ ಅವರ ಅನಿರೀಕ್ಷಿತ ಮತ್ತು ಆಘಾತಕಾರಿ ಸಾವಿನ ಸುತ್ತವೇ ಸುತ್ತುತ್ತಿದೆ. ಇದನ್ನು ನ್ಯಾಯಮೂರ್ತಿಗಳು ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಅಷ್ಟಕ್ಕೂ, ನ್ಯಾ. ಕುರಿಯನ್ ಜೋಸೆಫ್, ನ್ಯಾ. ಜೆ ಚಲಮೇಶ್ವರ, ನ್ಯಾ. ರಂಜನ್ ಗೊಗೊಯ್ ಮತ್ತು ನ್ಯಾ. ಮದನ್ ಲೋಕೂರ್ ಅವರು ಬರೆದಿರುವ 7 ಪುಟಗಳ ಪತ್ರದಲ್ಲಿ ಏನಿದೆ? ಅದರಲ್ಲಿ ಯಾವ್ಯಾವ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ, ಏನೇನು ಆರೋಪಗಳನ್ನು ಮಾಡಿದ್ದಾರೆ? ಮುಖ್ಯಾಂಶಗಳನ್ನು ಮುಂದೆ ಓದಿರಿ.
ಆತಂಕ ಮತ್ತು ಕಾಳಜಿಯಿಂದ ನಿಮಗೆ ಈ ಪತ್ರ
ಪ್ರೀತಿಯ ಮುಖ್ಯ ನ್ಯಾಯಮೂರ್ತಿಗಳೆ,
ಈ ನ್ಯಾಯಾಲಯ ನೀಡಿರುವ ಕೆಲ ಆದೇಶಗಳಿಂದಾಗಿ ನ್ಯಾಯದಾನ ವ್ಯವಸ್ಥೆಯನ್ನು ಕಲಕಿಹಾಕಿದೆ ಮತ್ತು ಹೈಕೋರ್ಟ್ ಗಳ ಸ್ವಾತಂತ್ರ್ಯವನ್ನು ಕಿತ್ತುಹಾಕಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ನ ಆಡಳಿತದ ಮೇಲೂ ವ್ಯತಿರಿಕ್ತ ಪ್ರಭಾವ ಬೀರಿದೆ. ಆ ಕಾರಣದಿಂದಾಗಿ, ತೀವ್ರ ಆತಂಕ ಮತ್ತು ಕಾಳಜಿಯಿಂದ ನಿಮಗೆ ಈ ಪತ್ರ ಬರೆಯಬೇಕೆಂದು ನಾವು ನಿರ್ಧರಿಸಿದೆವು.
ಸಂಪ್ರದಾಯ ಪಾಲಿಸಿಕೊಂಡು ಬರಲಾಗುತ್ತಿದೆ.
ಕೋಲ್ಕತಾ, ಮದ್ರಾಸ್ ಮತ್ತು ಬಾಂಬೆ ಚಾರ್ಟರ್ಡ್ ಹೈಕೋರ್ಟ್ ಸ್ಥಾಪಿಸಿದಂದಿನಿಂದ ಕೆಲ ಸಂಪ್ರದಾಯ ಮತ್ತು ರೂಢಿಗಳನ್ನು ನ್ಯಾಯದಾನದಲ್ಲಿ ತಲತಲಾಂತರದಿಂದ ಅಳವಡಿಸಿಕೊಂಡು ಬರಲಾಗಿದೆ. ಶತಮಾನದ ನಂತರವೂ ಈ ನ್ಯಾಯಾಲಯ ಇದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದೆ. ಆಂಗ್ಲೋ ಸ್ಯಾಕ್ಸನ್ ಜುರಿಸ್ಪ್ರುಡೆನ್ಸ್ ನಲ್ಲಿ ಈ ಸಂಪ್ರದಾಯದ ಬೇರುಗಳು ಆಳವಾಗಿವೆ.
ನ್ಯಾಯದ ಮುಂದೆ ಎಲ್ಲರೂ ಸಮಾನರೆ
ದೇಶದ ಎಲ್ಲ ನ್ಯಾಯಾಲಯಗಳು, ತಮ್ಮ ಮುಂದಿರುವ ಯಾವುದೇ ಪ್ರಕರಣಗಳಲ್ಲಿ ಅತ್ಯಂತ ನೀತಿಬದ್ಧವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು ಮುಖ್ಯ ನ್ಯಾಯಮೂರ್ತಿಯ ಜವಾಬ್ದಾರಿಗಳಲ್ಲಿ ಒಂದು. ನ್ಯಾಯ, ಕಾನೂನಿನ ಮುಂದೆ ಎಲ್ಲವೂ ಸಮಾನವೆ. ಅದರಲ್ಲೂ ಮುಖ್ಯ ನ್ಯಾಯಮೂರ್ತಿಗಳು ಈ ಸಮಾನತೆಯ ವ್ಯಾಖ್ಯಾನದಲ್ಲಿ ಮೊದಲಿಗರು. ಯಾವುದು ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ.
ಹಸ್ತಕ್ಷೇಪ ಮಾಡುವುದು ಸರಿಯಲ್ಲ
ಪ್ರಕರಣಗಳನ್ನು ಇತರ ಕೋರ್ಟ್ ಗಳಿಗೆ ಹಂಚುವುದು ಮುಖ್ಯ ನ್ಯಾಯಮೂರ್ತಿಯ ಕರ್ತವ್ಯ. ಇತರ ನ್ಯಾಯಪೀಠ ನಿರ್ವಹಿಸಬೇಕಾದ ಪ್ರಕರಣಗಳಲ್ಲಿ ಈ ನ್ಯಾಯಾಲಯವಾಗಲಿ, ಮತ್ತಾವ ನ್ಯಾಯಾಲಯವಾಗಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ನಿಮಯಗಳನ್ನು ಮುರಿದರೆ ಅಹಿತಕರವಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ನ್ಯಾಯಾಂಗದ ಪ್ರಾಮಾಣಿಕತೆ, ಬದ್ಧತೆಯ ಮೇಲೆ ಸಂಶಯ ಬರುತ್ತದೆ. ಇದರಿಂದ ಆಗುವ ಗೊಂದಲಗಳ ಬಗ್ಗೆ ಮಾತನಾಡುವುದೇ ಬೇಡ.
ಮೇಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ
ದುರಾದೃಷ್ಟಕರ ಸಂಗತಿಯೆಂದರೆ, ಮೇಲಿನ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬುದನ್ನು ವಿಷಾದಕರವಾಗಿ ಹೇಳಬೇಕಾಗಿದೆ. ಕೆಲವೊಂದು ಪ್ರಕರಣಗಳಲ್ಲಿ ದೇಶದ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುವಂಥ ತೀರ್ಪುಗಳು ಹೊರಬಿದ್ದಿವೆ. ಇದು ನ್ಯಾಯಾಂಗ ಇಮೇಜನ್ನೇ ಹಾಳುಮಾಡಿದೆ. ಯಾವುದೇ ಆಧಾರವಿಲ್ಲದೆ ಕೆಲ 'ಆಯ್ಕೆ'ಯ ಪೀಠಗಳಿಗೆ ಪ್ರಕರಣಗಳನ್ನು ನೀಡಲಾಗಿದೆ. ಎಷ್ಟೇ ಖರ್ಚುವೆಚ್ಚವಾಗಲಿ ಇದು ನಿಲ್ಲಲೇಬೇಕು.
ಕೇಂದ್ರ ಒಪ್ಪಿಕೊಂಡಿದೆ ಎಂದೇ ತಿಳಿಯಬೇಕಾಗುತ್ತದೆ
ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯಗಳು ಪಾಲಿಸಬೇಕಾದ ಮೆಮೊರ್ಯಾಂಡಮ್ ಆಫ್ ಪ್ರೊಸೀಜರ್ (ಪಾಲಿಸಬೇಕಾದ ಪ್ರಕ್ರಿಯೆ)ಯನ್ನು ತಮ್ಮದೇ ನೇತೃತ್ವದ ಪೀಠ ಅಂತಿಮಗೊಳಿಸಿ ಅಂದಿನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳಿಸಿತ್ತು. ಇದಕ್ಕೆ ಕೇಂದ್ರದ ಮೌನವೇ ಉತ್ತರ. ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರದ ಹಿನ್ನೆಲೆಯಲ್ಲಿ, ಇದನ್ನು ಕೇಂದ್ರ ಒಪ್ಪಿಕೊಂಡಿದೆ ಎಂದೇ ತಿಳಿಯಬೇಕಾಗುತ್ತದೆ.
ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ
ಜಸ್ಟಿಸ್ ಸಿಎಸ್ ಕರ್ಣನ್ ಅವರ ಪ್ರಕರಣದಲ್ಲಿ, ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯನ್ನು ಮರುಪರಿಶೀಸಬೇಕು ಮತ್ತು ಪದಚ್ಯುತಿಗೆ ಹೊರತಾಗಿ ತಿದ್ದುಪಡಿಗಳನ್ನು ಜಾರಿಗೆ ತರಲು ವ್ಯವಸ್ಥೆಯನ್ನು ರೂಪಿಸಬೇಕೆಂದು ಇಬ್ಬರು ನ್ಯಾಯಮೂರ್ತಿಗಳು ತೀರ್ಮಾನಕ್ಕೆ ಬಂದಿದ್ದೆವು. ಆದರೆ, ಈ ಮೆಮೊರ್ಯಾಂಡಮ್ ಆಪ್ ಪ್ರೊಸೀಜರ್ ಬಗ್ಗೆ ಏಳು ನ್ಯಾಯಮೂರ್ತಿಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ. ಇಂಥ ಸಂಗತಿಗಳನ್ನು ಸಾಂವಿಧಾನಿಕ ಪೀಠವೇ ತೀರ್ಮಾನಿಸಬೇಕು.
ಮುಖ್ಯ ನ್ಯಾಯಮೂರ್ತಿಗಳ ಆದ್ಯ ಕರ್ತವ್ಯ
ಈ ಎಲ್ಲ ಬೆಳವಣಿಗಳನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಈ ಸಂದಿಗ್ಧ ಪರಿಸ್ಥಿತಿಯನ್ನು ಸರಿಪಡಿಸುವುದು, ಅವಶ್ಯಕತೆ ಬಿದ್ದರೆ ನ್ಯಾಯಮಂಡಳಿಯ ಸದಸ್ಯರ ಜೊತೆ ಮತ್ತು ಈ ನ್ಯಾಯಾಲಯದ ಇತರ ಸದಸ್ಯರ ಜೊತೆ ಚರ್ಚಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಆದ್ಯ ಕರ್ತವ್ಯ.