Stories Of Strength: "ದಯವಿಟ್ಟು ಈ ತಪ್ಪು ಮಾಡಬೇಡಿ ಕೊರೊನಾವೈರಸ್ ಅಂಟುತ್ತೆ"
ಅಹ್ಮದಾಬಾದ್, ಜೂನ್ 6: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಕೆಲವರು ತೆಗೆದುಕೊಂಡ ಆತುರದ ನಿರ್ಧಾರ, ತಪ್ಪು ಹೆಜ್ಜೆ, ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯಗಳೇ ಸೋಂಕು ಹರಡುವುದಕ್ಕೆ ಕಾರಣವಾಗಿ ಬಿಡುತ್ತಿದೆ. ಇಂಥ ತಪ್ಪಿನಿಂದ ಪಾಠ ಕಲಿತ ಮಹಿಳೆಯೊಬ್ಬರು ತಮ್ಮ ನೋವಿನ ಕಥೆಯನ್ನು ತೆರೆದಿಟ್ಟಿದ್ದಾರೆ.
ಕೊರೊನಾವೈರಸ್ ಸೋಂಕು ಅಂಟಿಕೊಳ್ಳುವುದಕ್ಕೆ ಕಾರಣವಾದ ತಪ್ಪು ನಡೆ ಯಾವುದು. ಸೋಂಕು ಅಂಟಿಕೊಂಡ ಸಂದರ್ಭದಲ್ಲಿ ಎದುರಿಸಿದ ಸವಾಲುಗಳು ಯಾವ ರೀತಿಯಲ್ಲಿದ್ದವು. ಕೊವಿಡ್-19 ಮಹಾಮಾರಿ ವಿರುದ್ಧ ಸೆಣಸಾಟ ನಡೆಸಿದ ಮಹಿಳೆ ಗೆದ್ದು ಬಂದಿದ್ದು ಹೇಗೆ. ಇಂಥ ಸಾಕಷ್ಟು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
ಒಂದು ಬಾರಿ ಕೊರೊನಾವೈರಸ್ ಬಂದು ಹೋಗುವುದು ಒಳ್ಳೆಯದ್ದೇ!?
ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗು ಕಟ್ಟಿ ಹಾಕುವುದಕ್ಕೆ ಸರ್ಕಾರದ ಪ್ರಯತ್ನದ ಜೊತೆಗೆ ಸಾರ್ವಜನಿಕರ ಸಹಕಾರವೂ ಬಲುಮುಖ್ಯವಾಗಿರುತ್ತದೆ. ಸಾರ್ವಜನಿಕರು ತೆಗೆದುಕೊಳ್ಳುವ ಒಂದೇ ಒಂದು ತಪ್ಪು ನಿರ್ಧಾರ ವ್ಯಕ್ತಿಯ ಜೊತೆಗೆ ಕುಟುಂಬ, ಪ್ರದೇಶ ಹಾಗೂ ಹಳ್ಳಿಯನ್ನೇ ಕೊರೊನಾವೈರಸ್ ಕೂಪಕ್ಕೆ ತಳ್ಳುವ ಅಪಾಯವಿರುತ್ತದೆ. ದೇಶ ಎದುರಿಸುತ್ತಿರುವ ಸಂದಿಗ್ಧಿ ಪರಿಸ್ಥಿತಿಯಿಂದ ಹೊರ ಬರುವುದಕ್ಕೆ ಯಾವ ರೀತಿ ಜೀವನ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ಮಹಿಳೆಯ ಅನುಭವದ ಮಾತುಗಳಿಂದಲೇ ಅರಿತುಕೊಳ್ಳೋಣ.
ವಿದೇಶ ಪ್ರವಾಸದಿಂದ ಅಂಟಿಕೊಂಡ ಕೊರೊನಾವೈರಸ್
ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ 34 ವರ್ಷದ ಮಹಿಳೆಗೆ ಸೋಂಕು ಅಂಟಿಕೊಳ್ಳುವುದಕ್ಕೆ ವಿದೇಶ ಪ್ರವಾಸ ತೆರಳಿದ್ದೇ ಕಾರಣವಾಗಿತ್ತು. ಅಹ್ಮದಾಬಾದ್ ಅಂಬಾವಾಡಿ ಪ್ರದೇಶದ ನಿವಾಸಿ ಆಗಿರುವ ಮಹಿಳೆ ಮಾರ್ಚ್ ತಿಂಗಳಿನಲ್ಲಿ ಫಿನ್ ಲ್ಯಾಂಡ್ ದೇಶದಿಂದ ಸ್ವದೇಶಕ್ಕೆ ವಾಪಸ್ ಆಗಿದ್ದರು. ಈ ವೇಳೆ ಕೊವಿಡ್-19 ಲಕ್ಷಣಗಳು ಕಂಡು ಬಂದ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಮಹಿಳೆಯಲ್ಲಿ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿತ್ತು. ಕಳೆದ ಮಾರ್ಚ್ 18ರಂದು ಸೋಂಕಿತ ಮಹಿಳೆಯನ್ನು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೊರೊನಾದಿಂದಗುಣಮುಖರಾಗಿ ಮರಳಿದ ಮಹಿಳೆಗೆ ಸ್ವಾಗತ
ಕೊರೊನಾವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯಲು ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಆಸ್ಪತ್ರೆಗೆ ದಾಖಲಾದ ಮಹಿಳೆಯು ಸೋಂಕಿನಿಂದ ಗುಣಮುಖರಾಗಿ ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. ಕೊವಿಡ್-19 ಮಹಾಮಾರಿಯನ್ನು ಗೆದ್ದಿರುವ ಮಹಿಳೆಗೆ ಮನೆ ಮಂದಿ ಹಾಗೂ ಮನೆ ಸುತ್ತಮುತ್ತಲಿನ ಜನರು ಚಪ್ಪಾಳೆ ತಟ್ಟುವ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಸಾಂಕ್ರಾಮಿಕ ಪಿಡುಗಿನ ಮಧ್ಯೆ ವಿಮಾನ ಪ್ರಯಾಣ ಮಾಡಿರುವುದು ಸೋಂಕು ಹರಡುವುದಕ್ಕೆ ಮೂಲವಾಗಿದ್ದು, ಸಾರ್ವಜನಿಕರು ಸಾಧ್ಯವಾದಷ್ಟು ಮನೆಯೊಳಗೆ ಸುರಕ್ಷಿತವಾಗಿರುವುದೇ ಒಳಿತು ಎಂದು ಮಹಿಳೆ ಸಲಹೆ ನೀಡಿದ್ದಾರೆ.
"ನಿಮ್ಮ ನಿಮ್ಮ ಮನೆಗಳಲ್ಲಿ ನೀವು ಇರುವುದೇ ಸುರಕ್ಷಿತ"
"ನನ್ನ ವೈಯಕ್ತಿಕ ಅನುಭವದ ಪ್ರಕಾರ, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆಯೂ ವಿದೇಶ ಪ್ರವಾಸ ಮಾಡಿರುವುದು ನನ್ನ ಮೊದಲ ಹಾಗೂ ಬಹುಮುಖ್ಯ ತಪ್ಪು ನಿರ್ಧಾರವಾಗಿತ್ತು. ನೀವು ಎಷ್ಟು ಅವಧಿವರೆಗೆ ನಿಮ್ಮ ನಿಮ್ಮ ಮನೆಗಳಲ್ಲಿ ಇರುತ್ತೀರೋ, ಅಷ್ಟು ಅವಧಿಯವರೆಗೂ ನೀವು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ನಾನು ವಿದೇಶಕ್ಕೆ ತೆರಳಿದ ವೇಳೆಯಲ್ಲಿ ಎಲ್ಲ ರೀತಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದ್ದೆನು. ಎನ್-95 ಮಾಸ್ಕ್ ಧರಿಸಿದ್ದೆ, ಆಗಾಗ ಸ್ಯಾನಿಟೈಸರ್ ಬಳಕೆ ಜೊತೆಗೆ ಸಾಮಾಜಿಕ ಅಂತರದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿದ್ದೆನು. ಅದಾಗ್ಯೂ, ನನಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿತು. ಈ ಹಿನ್ನೆಲೆ ನಾನು ಜನರಿಗೆ ನೀಡುವ ಸಲಹೆಯೊಂದೇ. ಸದಾ ಮನೆಗಳಲ್ಲೇ ಇರಿ, ಸುರಕ್ಷಿತವಾಗಿರಿ. ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಗೋಚರಿಸಿದ್ದೇ ಆದರೆ ಸರ್ಕಾರಿ ವೈದ್ಯರು ಮತ್ತು ಆಸ್ಪತ್ರೆಗಳನ್ನು ಸಂಪರ್ಕಿಸಿ" ಎಂದು ಕೊವಿಡ್-19 ಸೋಂಕಿನಿಂದ ಗುಣಮುಖರಾದ ಮಹಿಳೆಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮೊದಲಿನಂತಿಲ್ಲ ಕೊರೊನಾವೈರಸ್ ಮಹಾಮಾರಿ
ದೇಶದಲ್ಲಿ ಒಂದೇ ದಿನ 1,14,460 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,89,232 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದೇ ದಿನ ಕೊರೊನಾವೈರಸ್ ಮಹಾಮಾರಿಗೆ 2677 ಮಂದಿ ಪ್ರಾಣ ಬಿಟ್ಟಿದ್ದಾರೆ.
ಭಾರತದಲ್ಲಿ ಒಟ್ಟು 2,88,09,339 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,69,84,781 ಸೋಂಕಿತರು ಗುಣಮುಖರಾಗಿದ್ದು, ಮಹಾಮಾರಿಯಿಂದ ಒಟ್ಟು 3,46,759 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ 14,77,799 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.