ಮೊದಲು ಓದಿ: ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಏರಿಕೆಗೆ ಕಾರಣವೇನು?
ನವದೆಹಲಿ, ಜುಲೈ 30: ಭಾರತದಲ್ಲಿ ಲಾಕ್ಡೌನ್ ಸಡಿಲಿಕೆ ನಂತರದಲ್ಲಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ದಿವ್ಯ ನಿರ್ಲಕ್ಷ್ಯವನ್ನು ವಹಿಸಿರುವುದು ಗೊತ್ತಾಗಿದೆ. ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುದಿರುವುದು ಹಾಗೂ ಇತರೆ ನಿಯಮಗಳ ಉಲ್ಲಂಘನೆಯಿಂದಾಗಿಯೇ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಗೆ ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಈ ಕುರಿತು ಲಿಖಿತ ಉತ್ತರವನ್ನು ನೀಡಿದ ಸಚಿವರು, ವಿಶ್ವ ಆರೋಗ್ಯ ಸಂಸ್ಥೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಹರಡುವಿಕೆಗೆ ಕೆಲವು ಪುರಾವೆಗಳು ಸಿಕ್ಕಿವೆ ಎಂದು ಹೇಳಿದ್ದಾರೆ.
ಅಲೆಗಳ ಆಟ: ಭಾರತದಲ್ಲಿ ಹೆಚ್ಚಾದ ಕೊರೊನಾವೈರಸ್ ಆತಂಕ!
ದೇಶದಲ್ಲಿ COVID-19 ಪ್ರಕರಣಗಳ ನಿರ್ವಹಣೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ವೈದ್ಯಕೀಯ ನಿರ್ವಹಣಾ ಶಿಷ್ಟಾಚಾರಗಳೇ ಸಾಕಾಗುತ್ತವೆ. ರೂಪಾಂತರ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಈಗಿನ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎಂದು ತಜ್ಞರೊಂದಿಗನ ಚರ್ಚೆಯ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ ಎರಡ್ಮೂರು ದಿನಗಳಲ್ಲಿ ಮತ್ತೆ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿರುವುದಕ್ಕೆ ಮೂಲ ಕಾರಣಗಳೇನು ಎಂಬುದರ ಕುರಿತು ಸಚಿವರು ನೀಡಿರುವ ಉತ್ತರ ಹಾಗೂ ದೇಶದಲ್ಲಿನ ಪರಿಸ್ಥಿತಿಯ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.
ಕೊವಿಡ್-19 ಏರಿಕೆ ಹಾಗೂ ಲಾಕ್ಡೌನ್ ಸಡಿಲಿಕೆ
"ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಲಾಕ್ಡೌನ್ ಸಡಿಲಗೊಳಿಸಲಾಯಿತು. ಈ ಹಂತದಲ್ಲಿ ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಸಾರಾಸಗಟಾಗಿ ಶಿಷ್ಟಾಚಾರ ಉಲ್ಲಂಘಿಸಿದರು. ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರದ ಪ್ರಜ್ಞೆಯಿಲ್ಲದೇ ವರ್ತಿಸಿದ್ದು ಕೊವಿಡ್-19 ರೂಪಾಂತರ ತಳಿಗಳ ಹರಡುವಿಕೆಗೆ ದಾರಿ ಮಾಡಿ ಕೊಟ್ಟಿತು. ಇದರಿಂದಾಗಿಯೇ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕಿತ ಪ್ರಕರಣಗಳು ಏರಿಕೆಯಾಗಿವೆ," ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.
ಕೊವಿಡ್-19 ಪ್ರಕರಣಗಳ ಏರಿಕೆ ಕುರಿತು ಪ್ರಶ್ನೆಗೆ ಉತ್ತರ
ಭಾರತದ ಕೇರಳ, ಅರುಣಾಚಲ ಪ್ರದೇಶ, ತ್ರಿಪುರಾ, ಒಡಿಶಾ, ಛತ್ತೀಸ್ ಗಢ್ ಮತ್ತು ಮಣಿಪುರ ಸೇರಿದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಏರಿಕೆಗೆ ಡೆಲ್ಟಾ ಮತ್ತು ಲ್ಯಾಂಬ್ಡಾ ರೂಪಾಂತರ ತಳಿಗಳೇ ಮುಖ್ಯ ಕಾರಣವೇ ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಉತ್ತರ ನೀಡಿದರು. "ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಸಲಿಗೆ ಆರೋಗ್ಯ ಇಲಾಖೆಯು ರಾಜ್ಯದ ವ್ಯಾಪ್ತಿಗೆ ಸಂಬಂಧಿಸಿದ್ದಾಗಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ತಂತ್ರಜ್ಞಾನ, ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ನೆರವು ನೀಡುವುದರ ಮೂಲಕ ಕೇಂದ್ರ ಸರ್ಕಾರವು ಕೊವಿಡ್-19 ನಿಯಂತ್ರಣಕ್ಕೆ ಸಹಕರಿಸಲಿದೆ," ಎಂದರು.
ದೇಶದಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಮೂರು ವ್ಯವಸ್ಥೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರು ಮತ್ತು ಸೋಂಕು ಇಲ್ಲದ ಸಾಮಾನ್ಯರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಕೊವಿಡ್-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮೂರು ರೀತಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೊವಿಡ್-19 ಆರೈಕೆ ಕೇಂದ್ರ (ಸಿಸಿಸಿ), ಕೊವಿಡ್-19 ಮೀಸಲು ಆರೋಗ್ಯ ಕೇಂದ್ರ (ಡಿಸಿಹೆಚ್ ಸಿ) ಮತ್ತು ಕೊವಿಡ್-19 ಮೀಸಲು ಆಸ್ಪತ್ರೆ (ಡಿಸಿಹೆಚ್) ಅನ್ನು ಅನುಷ್ಠಾನಗೊಳಿಸಲಾಗುವುದು. ಇದರ ಹೊರತಾಗಿ ಆಯಾ ಸಚಿವಾಲಯದ ಅಡಿಯಲ್ಲಿ ಆಸ್ಪತ್ರೆ ವ್ಯವಸ್ಥೆಗೆ ಪೂರಕವಾದ ತೃತೀಯ ಆರೈಕೆಯ ಆಸ್ಪತ್ರೆಗಳನ್ನು ಪುನಾರಂಭಿಸಲು ಚಿಂತಿಸಲಾಗುತ್ತದೆ. ಅಲ್ಲದೇ, ಕೊರೊನಾವೈರಸ್ ಏರಿಕೆಯ ನಿರ್ವಹಣೆಗೆ ಡಿಆರ್ ಡಿಓ ವತಿಯಿಂದ ತಾತ್ಕಾಲಿಕ ಚಿಕಿತ್ಸಾ ಸೌಲಭ್ಯಗಳನ್ನು ತೆರೆಯಲಾಗುವುದು," ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಬೆಡ್, ಆಕ್ಸಿಜನ್ ಸಮಸ್ಯೆ ಸೃಷ್ಟಿಯಾಗದಂತೆ ಕ್ರಮ
"ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಅತಿಹೆಚ್ಚು ಸೋಂಕಿತರು ಉಸಿರಾಟ ಸಮಸ್ಯೆಯಿಂದಲೇ ಪ್ರಾಣ ಕಳೆದುಕೊಂಡಿದ್ದರು. ಲಕ್ಷಾಂತರ ಜನರು ಆಮ್ಲಜನಕ ವ್ಯವಸ್ಥೆ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಅಭಾವ ಸೃಷ್ಟಿಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೈಗಾರಿಕೆಗಳಿಗೆ ಆಕ್ಸಿಜನ್ ಬಳಕೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 39,000 ಆಮ್ಲಜನಕ ಸಾಂದ್ರಕಗಳನ್ನು ರವಾನಿಸಲಾಗಿದೆ. ಜೀವ ರಕ್ಷಕಕ ಅನಿಲ ಆಮ್ಲಜನಕದ ವ್ಯರ್ಥವಾಗದಂತೆ ಉಪಯೋಗಿಸುವುದಕ್ಕೆ ಅಗತ್ಯವಾದ ಮಾರ್ಗಸೂಚಿ ರೂಪಿಸಲಾಗಿದೆ. ವೈದ್ಯಕೀಯ ಆಮ್ಲಜನಕ ಕೊರತೆ ಸೃಷ್ಟಿಯಾಗದ ರೀತಿಯಲ್ಲಿ ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಕೇಂದ್ರವನ್ನು ಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡಿದೆ," ಎಂದು ಹೇಳಿದ್ದಾರೆ.
ದೇಶದಲ್ಲಿ ಕೊವಿಡ್-19 ಮೂರನೇ ಅಲೆಯ ಆತಂರ ಶುರು
ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಳಿತ ಶುರುವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕಿನ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಕಳೆದ ಒಂದೇ ದಿನ 44,230 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 42,360 ಸೋಂಕಿತರು ಗುಣಮುಖರಾಗಿದ್ದರೆ, 555 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,15,72,344ಕ್ಕೆ ಏರಿಕೆಯಾಗಿದ್ದು, 3,07,43,972 ಸೋಂಕಿತರು ಗುಣಮುಖರಾಗಿದ್ದಾರೆ. ಈವರೆಗೂ 4,23,217 ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದು, 4,05,155 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಇಂಥ ಸಂದರ್ಭದಲ್ಲಿ ಆನ್ಲೈನ್ ವೈದ್ಯರಿಗೆ ಬೇಡಿಕೆ ಹೆಚ್ಚುವುದಕ್ಕೆ ಕಾರಣ ಮತ್ತು ಈ ಕುರಿತು ಪ್ರಮುಖ ಅಂಶಗಳ ಮೇಲೆ ಗಮನ ಹರಿಸಬೇಕಾಗಿದೆ.
ಆಗಸ್ಟ್ ತಿಂಗಳಾಂತ್ಯದ ವೇಳೆಗೆ 135 ಕೋಟಿ ಡೋಸ್ ಲಸಿಕೆ
ಭಾರತದಲ್ಲಿ 2021ರ ಆಗಸ್ಟ್ ತಿಂಗಳಾಂತ್ಯದ ವೇಳೆಗೆ 135 ಕೋಟಿ ಡೋಸ್ ಕೊರೊನಾವೈರಸ್ ಲಸಿಕೆಯು ಲಭ್ಯವಾಗಿರಲಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಡಿಸೆಂಬರ್ ಅಂತ್ಯದ ವೇಳೆಗೆ ಲಸಿಕೆ ವಿತರಿಸುವ ಉದ್ದೇಶವನ್ನು ಹೊಂದಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದ್ದು, ಇಷ್ಟು ದಿನಗಳಲ್ಲೇ ಲಸಿಕೆ ವಿತರಣೆ ಅಭಿಯಾನ ಪೂರ್ಣಗೊಳ್ಳಬೇಕು ಎಂಬ ಯಾವುದೇ ಷರತ್ತುಗಳಿಲ್ಲ. ಅದಾಗ್ಯೂ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಡಿಸೆಂಬರ್ ತಿಂಗಳಾಂತ್ಯದ ವೇಳೆಗೆ ಲಸಿಕೆಯನ್ನು ನೀಡುವ ಗುರಿಯನ್ನು ಹೊಂದಲಾಗಿದೆ. ಕೊರೊನಾವೈರಸ್ ಲಸಿಕೆ ಖರೀದಿ, ಸರಬರಾಜು ಮತ್ತು ಪೂರೈಕೆ ಜೊತೆಗೆ ವಿತರಣೆ ಅಭಿಯಾನಕ್ಕಾಗಿ ಈವರೆಗೂ 9,725.15 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ರಾಜ್ಯ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.
ದೇಶದಲ್ಲಿ 46 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾವೈರ್ ಲಸಿಕೆ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿಯು ಲಸಿಕೆ ವಿತರಣೆ ನಡುವೆಯೂ ಹೆಚ್ಚಾಗುತ್ತಿರುವ ಲಕ್ಷಣ ಗೋಚರಿಸುತ್ತಿದೆ. ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 195 ದಿನಗಳೇ ಕಳೆದಿದ್ದು, ಈವರೆಗೂ 45 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಗುರುವಾರ ರಾತ್ರಿ 7 ಗಂಟೆ ವೇಳೆಗೆ 46,52,914 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 45,55,02,438 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ. ಒಂದೇ ದಿನ 18 ರಿಂದ 44 ವಯೋಮಾನದ 22,83,018 ಜನರಿಗೆ ಮೊದಲ ಡೋಸ್ ಹಾಗೂ 4,34,990 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 14,66,22,393 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 76,51,261 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ದೇಶದಲ್ಲಿ ಕೊವಿಡ್-19 ಲಸಿಕೆ ಪ್ರಮಾಣ ಎಷ್ಟಿದೆ?
2021ರ ಜುಲೈ 29ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 47,48,77,490 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 47,48,77,490
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 53,05,260
* ಬಳಕೆ ಆಗಿರುವ ಲಸಿಕೆ ಪ್ರಮಾಣ - 44,74,97,240
* ಕೊವಿಡ್-19 ಲಸಿಕೆಯ ಲಭ್ಯತೆ - 2,88,55,050
Recommended Video