ಜೈಲಿಗೆ ಸಿಂಗ್, ಕೋರ್ಟ್ ಕೊಟ್ಟ ಸೂಚನೆ ಏನು?
ಚಂಡೀಗಢ, ಆಗಸ್ಟ್ 29 : ಅವರಲ್ಲಿ ಏನಾದರೂ ವಿಶೇಷತೆ ಇದೆಯೇ?, ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಬೇಕು. ಸಿಬಿಐ ವಿಶೇಷ ಕೋರ್ಟ್ ನ್ಯಾಯಮೂರ್ತಿ ಜಗದೀಪ್ ಸಿಂಗ್ ರಾಮ್ ರಹೀಮ್ ಸಿಂಗ್ ಶಿಕ್ಷೆ ಪ್ರಕಟಿಸುವಾಗ ಜೈಲಿನ ಅಧಿಕಾರಿಗಳಿಗೆ ನೀಡಿದ ಸೂಚನೆ ಇದೆ.
Recommended Video
ಸಿಂಗ್ಗೆ 20 ವರ್ಷ ಜೈಲು : ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?
ಡೇರಾ ಸಚ್ಚಾ ಸೌಧ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಎರಡು ಅತ್ಯಾಚಾರ ಪ್ರಕರಣದಲ್ಲಿ ಅವರು ದೋಷಿಯಾಗಿದ್ದು, ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಸಿಂಗ್ಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರೋಹ್ಟಕ್ ಜೈಲಿನಲ್ಲಿ ನಡೆದ ನ್ಯಾಯಾಲಯದ ಕಲಾಪದ ವೇಳೆ ನ್ಯಾಯಮೂರ್ತಿಗಳು ಜೈಲಿನಲ್ಲಿ ಸಿಂಗ್ಗೆ ವಿಶೇಷ ಸವಲತ್ತು ನೀಡುವಂತಿಲ್ಲ ಎಂದು ಸೂಚನೆ ಕೊಟ್ಟಿದ್ದಾರೆ. ಜೈಲಿನ ಸಮವಸ್ತ್ರ ಕೊಡಿ, ಇತರ ಸಾಮಾನ್ಯ ಕೈದಿಯಂತೆ ನೋಡಿಕೊಳ್ಳಿ ಎಂದು ಕೋರ್ಟ್ ಆದೇಶ ನೀಡಿದೆ.
ನ್ಯಾಯಾಲಯದ ಕಲಾಪವ ವೇಳೆ ಹೈಡ್ರಾಮ ನಡೆದಿದೆ. ರಾಮ್ ರಹೀಮ್ ಸಿಂಗ್ ಶಿಕ್ಷೆ ಪ್ರಮಾಣ ಪ್ರಕಟವಾದ ಬಳಿಕ ಮಗುವಿನಂತೆ ಕಣ್ಣೀರು ಹಾಕಿದರು. ಹೊರ ಹೋಗಲು ಒಪ್ಪದ ಅವರನ್ನು ಪೊಲೀಸರು ಬಲವಂತವಾಗಿ ಕರೆದುಕೊಂಡು ಹೋದರು.
ರಾಮ್ ರಹೀಮ್ ಸಿಂಗ್ಗೆ 20 ವರ್ಷಗಳ ಶಿಕ್ಷೆಯಾಗಿದ್ದು ಹೇಗೆ?
ಶಿಕ್ಷೆ ಪ್ರಮಾಣ ಪ್ರಕಟಿಸುತ್ತಿದ್ದಂತೆ ಸ್ವಲ್ಪ ರಿಯಾಯಿತಿ ಕೊಡಿ, ಕರುಣೆ ತೋರಿ ನನ್ನನ್ನು ಉಳಿಸಿ ಎಂದು ನ್ಯಾಯಮೂರ್ತಿಗಳ ಮುಂದೆ ಸಿಂಗ್ ಅತ್ತರು. ನನಗೆ ಆರೋಗ್ಯದ ಸಮಸ್ಯೆ ಇದೆ. ಜೈಲಿನಲ್ಲಿ ಏನಾದರೂ ಆದರೆ, ಯಾರು ಹೊಣೆ ಎಂದು ಪ್ರಶ್ನಿಸಿದರು.
ತಕ್ಷಣ ವೈದ್ಯರನ್ನು ಜೈಲಿಗೆ ಕರೆಸಲಾಯಿತು. ವೈದ್ಯರು ರಾಮ್ ರಹೀಮ್ ಸಿಂಗ್ ಆರೋಗ್ಯ ತಪಾಸಣೆ ಮಾಡಿ, ಆರೋಗ್ಯದಿಂದ ಇದ್ದಾರೆ ಎಂದು ಖಚಿತಪಡಿಸಿದರು. ತಕ್ಷಣ ಅವರನ್ನು ಜೈಲಿನ ಸೆಲ್ಗೆ ಕರೆದುಕೊಂಡು ಹೋಗಲಾಯಿತು. ಸಿಂಗ್ ಯಾವುದೇ ಮನವಿಯನ್ನು ಕೋರ್ಟ್ ಒಪ್ಪಿಕೊಳ್ಳಲಿಲ್ಲ.