ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ' ಬಳಕೆ ಹೇಗೆ?
ನವದೆಹಲಿ, ಆ.4 : ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ' ಬಳಕೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಗುಜರಾತ್ ರಾಜ್ಯಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಿಗೆ ನೋಟಾ ಬಳಕೆ ಮಾಡಲು ಅವಕಾಶ ನೀಡಲಾಗುತ್ತದೆ.
ಕಾಂಗ್ರೆಸ್ ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಬಳಕೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ತಡೆ ನೀಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ.
2017ರಲ್ಲಿ ಹತ್ತು ಸಂಸದರು ರಾಜ್ಯಸಭೆಯಿಂದ ನಿವೃತ್ತರಾಗುತ್ತಿದ್ದಾರೆ. ಗೋವಾದಿಂದ 1, ಗುಜರಾತ್ ನಿಂದ 3, ಪಶ್ಚಿಮ ಬಂಗಾಳದಿಂದ 6 ಸದಸ್ಯರು ನಿವೃತ್ತರಾಗುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದ ಮೂಲಕ ಗೋವಾದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಶಾಂತರಾಮ್ ನಾಯಕ್ ಜುಲೈನಲ್ಲಿ ನಿವೃತ್ತಿ ಹೊಂದಿದ್ದು, ಆ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿಜಯ್ ತೆಂಡೂಲ್ಕರ್ ಗೆಲುವು ಸಾಧಿಸಿದ್ದಾರೆ.
ಗುಜರಾತ್ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್ ನ ಅಹಮದ್ ಪಟೇಲ್, ಬಿಜೆಪಿಯ ಸ್ಮೃತಿ ಇರಾನಿ, ದಿಲೀಪ್ ಪಾಂಡ್ಯ ಮತ್ತು ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ಆರು ಸದಸ್ಯರು ಆಗಸ್ಟ್ 18, 2017 ರಂದು ನಿವೃತ್ತರಾಗಲಿದ್ದಾರೆ. ಈ ಸ್ಥಾನಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಆ.8ರಂದು ಚುನಾವಣೆ ನಡೆಯಲಿದೆ.
ನೋಟಾ ಬಳಕೆ ಹೇಗೆ? : 2014ರ ಜನವರಿಯಲ್ಲಿ ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯಲ್ಲಿ ನೋಟಾ ಬಳಕೆ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಪ್ರಕಟಿಸಿತು. ನಂತರ 16 ರಾಜ್ಯಗಳಲ್ಲಿ ಚುನಾವಣೆಗಳು ನಡೆದಿದ್ದು, ನೋಟಾ ಬಳಕೆ ಮಾಡಲಾಗಿದೆ.
ಮತದಾನ ಮಾಡುವ ಶಾಸಕರು ಮತ ಪತ್ರವನ್ನು ಬ್ಯಾಲೆಟ್ ಬಾಕ್ಸ್ ಗೆ ಹಾಕುವ ಮುನ್ನ ಪಕ್ಷದ ಅಧಿಕೃತ ಏಜೆಂಟರಿಗೆ ತೋರಿಸಬೇಕು. ಯಾವುದೇ ಶಾಸಕ ನೋಟಾ ಮತವನ್ನು ಆಯ್ಕೆ ಮಾಡಿದ್ದರೆ ಅವರ ಮತವನ್ನು ಪರಿಗಣಿಸಲಾಗುವುದಿಲ್ಲ.
ಪಕ್ಷ ಆ ಶಾಸಕನ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳಬಹುದು. ಆದರೆ, ಆತ ಶಾಸಕನಾಗಿ ಮುಂದುವರೆಯಲು ಅವಕಾಶವಿದೆ. ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಆ ಶಾಸಕನ ಮತವನ್ನು ಪರಿಗಣನೆ ಮಾಡಲಾಗುವುದಿಲ್ಲ.
ಆಗಸ್ಟ್ 8ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಸ್ಪರ್ಧೆಯಿಂದಾಗಿ ಈ ಚುನಾವಣೆ ದೇಶದ ಗಮನ ಸೆಳೆದಿದೆ.