ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ?
ಭೂಸೇನೆ ಮತ್ತು ವಾಯುಸೇನೆಯನ್ನು ಸನ್ನದ್ದ ಸ್ಥಿತಿಯಲ್ಲಿ ಇಡಲಾಗಿದೆ ಎನ್ನುವ ಸುದ್ದಿಗಳು, ಹತ್ತುದಿನಗಳ ಕಾಲ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲು ಸೂಚನೆ, ಕಳೆದ ಒಂದು ದಿನದಿಂದ ಹಾರಾಡುತ್ತಿರುವ ವಾಯುಪಡೆಯ ಫೈಟರ್ ವಿಮಾನಗಳು..
ರಾಜಧಾನಿ ಶ್ರೀನಗರದ ಆಯಕಟ್ಟಿನ ಪ್ರದೇಶಗಳನ್ನು ಆಪೋಸನ ತೆಗೆದುಕೊಂಡಂತೆ ಎಲ್ಲಿ ನೋಡಿದರಲ್ಲಿ ಮಿಲಿಟರಿ ಪಡೆಗಳು.. ಇದು ಕಣಿವೆ ರಾಜ್ಯದ ರಾಜಧಾನಿ ಶ್ರೀನಗರದ ಸದ್ಯದ ಪರಿಸ್ಥಿತಿ. ಕೇಂದ್ರ ಸರಕಾರ ಯಾವ ಕಾರಣಕ್ಕಾಗಿ ಈ ಮಟ್ಟಿನ ಭದ್ರತೆಯನ್ನು ನಿಯೋಜಿಸುತ್ತಿದೆ ಎನ್ನುವ ವಿಚಾರ ಸದ್ಯ ಅಲ್ಲಿ ಮನೆಮನೆ ಮಾತು.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಎರಡು ದಿನಗಳ ಕಾಶ್ಮೀರ ಭೇಟಿಯ ನಂತರ, ಭದ್ರತಾ ಪಡೆಗಳ ನಿಯೋಜನೆ ದಿನದಿಂದ ದಿನಕ್ಕೆ ಏರುತ್ತಿದೆ. ಭಾರೀ ಪ್ರಮಾಣದಲ್ಲಿ ಸೈನಿಕರು ಆಯಕಟ್ಟಿನ ಕಾಶ್ಮೀರದ ಭಾಗಗಳಲ್ಲಿ ಮತ್ತು ಗಡಿಭಾಗಗಳಲ್ಲಿ ಬೀಡುಬಿಟ್ಟಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಒಂದೇ ವಾರದಲ್ಲಿ ಮತ್ತೆ 28 ಸಾವಿರ ಸೈನಿಕರ ನಿಯೋಜನೆ
ಹತ್ತು ಸಾವಿರ ಯೋಧರನ್ನು ರವಾನಿಸಿ, ಒಂದು ವಾರ ಆಗುವಷ್ಟರಲ್ಲಿ ಇನ್ನೂ 25 ಸಾವಿರ ಅರೆಸೇನಾ ಸಿಬ್ಬಂದಿಗಳನ್ನು ಕಳುಹಿಸಿಕೊಡಲಾಗಿದೆ. ರಾಷ್ಟ್ರಪತಿ ಆಡಳಿತದಲ್ಲಿರುವ 'ಕಾಶ್ಮೀರದಲ್ಲಿ ಏನಾಗುತ್ತಿದೆ, ಇಲ್ಲಿ ಇಂತಹ ಬೆಳವಣಿಗೆ ತೀರಾ ಅಪರೂಪ', ಎಂದು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಟ್ವೀಟ್ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ನಿಯೋಗದಿಂದ ಮೋದಿ ಭೇಟಿ
ಈ ಎಲ್ಲಾ ಬೆಳವಣಿಗೆಗಳ ನಡುವೆ ನ್ಯಾಷನಲ್ ಕಾನ್ಫರೆನ್ಸಿನ ಮುಖಂಡರು, ಪ್ರಧಾನಿಯನ್ನು ಭೇಟಿಯಾಗಿ, ಯಾವುದೇ ರೀತಿಯ ಕಠಿಣ ಕ್ರಮಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ ಸೇರಿದ ನಿಯೋಗ, ಮೋದಿಯನ್ನು ಭೇಟಿಯಾಗಿ, 'ಯಾವುದೇ ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಡಿ. ಸಂವಿಧಾನದ 370 ಮತ್ತು 35A ರದ್ದತಿಗೆ ಮುಂದಾಗಬಾರದು' ಎಂದು ಮನವಿ ಮಾಡಲಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. (ಚಿತ್ರ: ಟ್ವಿಟ್ಟರ್)
ಹವಾಮಾನ ವೈಪರೀತ್ಯದ ಕಾರಣ ನೀಡಿ, ಅಮರನಾಥ್ ಯಾತ್ರೆ ಸ್ಥಗಿತ
ಸೈನಿಕರ ಓಡಾಟ ಕಣಿವೆ ರಾಜ್ಯದಲ್ಲಿ ಮಾಮೂಲಾಗಿದ್ದರೂ, ಕೇಂದ್ರ ಸರಕಾರ ಈ ಮಟ್ಟಿಗೆ ಸೈನಿಕರನ್ನು ಜಮಾಯಿಸುತ್ತಿರುವುದು ಯಾವ ಕಾರಣಕ್ಕಾಗಿ ಎನ್ನುವುದು ಭಾರೀ ಚರ್ಚೆಯ ವಿಷಯವಾಗಿದೆ. ಹವಾಮಾನ ವೈಪರೀತ್ಯದ ಕಾರಣ ನೀಡಿ, ಅಮರನಾಥ್ ಯಾತ್ರೆಯನ್ನು ಆಗಸ್ಟ್ ನಾಲ್ಕವರೆಗೆ ಸ್ಥಗಿತಗೊಳಿಸಿರುವುದು, ಮತ್ತು ಯಾತ್ರೆಯ ಭದ್ರತೆಗೆ ನಿಯೋಜಿತರಾಗಿದ್ದ ಸೈನಿಕರನ್ನು ಕಾಶ್ಮೀರದ ಆಯಕಟ್ಟಿನ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. (ಚಿತ್ರ:ಪಿಟಿಐ)
ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ಸುಧಾರಿತ ಬಾಂಬ್ ಸ್ಫೋಟ
'ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿರಿ' ಎನ್ನುವ ಸಂದೇಶ
'ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿರಿ' ಎನ್ನುವ ಸಂದೇಶವನ್ನು ಭದ್ರತಾ ಪಡೆಗಳಿಗೆ ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಉಗ್ರರ ನುಸುಳುವಿಕೆಗೆ ಶಾಸ್ವತ ಪರಿಹಾರ ಕಂಡುಕೊಳ್ಳಲು ಈ ಭಾರೀ ಭದ್ರತಾ ನಿಯೋಜನೆ ಮಾಡಲಾಗಿದೆಯಾ, ಅಥವಾ ಸಂವಿಧಾನದ 370 ಮತ್ತು 35A ರದ್ದತಿಗೆ ಕೇಂದ್ರ ಸರಕಾರ ಮುಂದಾಗಿದೆಯಾ, ಇದೂ ಇಲ್ಲದಿದ್ದರೆ ಕ್ಷೇತ್ರ ವಿಂಗಡಣೆ ಕೆಲಸವನ್ನು ಕೈಗೆತ್ತಿಕೊಳ್ಳುತ್ತಿದೆಯಾ ಎನ್ನುವುದು ಇಲ್ಲಿ ಪ್ರಶ್ನೆ. (ಚಿತ್ರ:ಪಿಟಿಐ)
ಸಾರ್ವಜನಿಕರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ
'ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯವಾಗಿ ಬೇಕಾಗಿರುವ ಭದ್ರತೆ ಇಲ್ಲದಿದ್ದರಿಂದ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗುತ್ತಿದೆ' ಎಂದು ರಾಜ್ಯ ಪೊಲೀಸ್ ವರಿಷ್ಠ ದಿಲ್ಬಾಗ್ ಸಿಂಗ್ ಹೇಳಿದ್ದಾರೆ. 'ಕಾಶ್ಮೀರದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಪಾಕಿಸ್ತಾನ ಮುಂದಾಗಿದೆ' ಎಂದು ಲೆ.ಜ.ಧಿಲ್ಲಾನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮಹತ್ತರವಾದ ಬೆಳವಣಿಗೆಗಳು ನಡೆಯಲಿದೆ ಎಂದು ಸಾರ್ವಜನಿಕರು ದಿನಬಳಕೆಯ ವಸ್ತುಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. (ಚಿತ್ರ:ಪಿಟಿಐ)
ಸಂವಿಧಾನದ 370 ಮತ್ತು 35A ರದ್ದತಿಗೆ ಕೇಂದ್ರದ ನಿರ್ಧಾರ?
ಫೈಟರ್ ವಿಮಾನಗಳು ಇದ್ದಕ್ಕಿದ್ದಂತೆ ಗಸ್ತು ತಿರುಗುತ್ತಿರುವುದು, ರಾಜಧಾನಿ ಶ್ರೀನಗರದ ಎಲ್ಲಾ ಪ್ರಮುಖ ಪ್ರದೇಶಗಳನ್ನು ಮಿಲಿಟರಿ ತನ್ನ ಸುಪರ್ದಿಗೆ ತೆಗೆದುಕೊಂಡಿರುವುದು, ಸಿ17 ಗ್ಲೋಬ್ ಮಾಸ್ಟರ್ ಹೆವಿಲಿಫ್ಟ್ ವಿಮಾನಗಳ ನಿಯೋಜನೆ, ರಾಷ್ಟ್ರೀಯ ರೈಫಲ್ಸ್ ಪಡೆಗಳು ಗಡಿಯಲ್ಲಿ ಗಸ್ತು ತಿರುಗುತ್ತಿರುವುದು, ಈ ರೀತಿಯ ಎಲ್ಲಾ ವಿದ್ಯಮಾನಗಳು ಕಣಿವೆ ಭಾಗದಲ್ಲಿ ನಡೆಯುತ್ತಿರುವುದರಿಂದ, ಸಂವಿಧಾನದ 370 ಮತ್ತು 35A ರದ್ದತಿಗೆ ಕೇಂದ್ರ ಸದ್ಯದಲ್ಲೇ ಮುಂದಾಗಲಿದೆ ಎನ್ನುವುದು ಸ್ಥಳೀಯ ಮುಖಂಡರ, ಸಾರ್ವಜನಿಕರ ಗುಮಾನಿ. (ಚಿತ್ರ:ಪಿಟಿಐ)