ಐರೋಮ್ ಶರ್ಮಿಳಾ ಉಪವಾಸ ಮಾಡುತ್ತಿದ್ದದ್ದು ಯಾಕೆ?
ಬೆಂಗಳೂರು, ಆಗಸ್ಟ್, 09: ಮಣಿಪುರದಲ್ಲಿ ಜಾರಿಯಲ್ಲಿರುವ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆಯ(AFSPA)(Armed Forces (Special Powers) Act)ನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಐರೋಮ್ ಶರ್ಮಿಳಾ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು 16 ವರ್ಷದ ನಂತರ ಅಂತ್ಯ ಮಾಡಿದ್ದಾರೆ.
ಹಾಗಾದರೆ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ ಎಂದರೆ ಏನು? ಭಾರತದ ಯಾವ ರಾಜ್ಯಗಳಲ್ಲಿ ಅಥವಾ ಯಾವ ಭಾಗದಲ್ಲಿ ಇದು ಜಾರಿಯಲ್ಲಿದೆ? ಇದು ಜಾರಿಯಲ್ಲಿ ಇದ್ದರೆ ನಾಗರಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಹಲವಾರು ಪ್ರಶ್ನೆಗಳು ನಮ್ಮ ಮುಂದೆ ನಿಲ್ಲುತ್ತವೆ. ಅದಕ್ಕೆಲ್ಲ ಉತ್ತರ ನೀಡುವ ಯತ್ನ ಇಲ್ಲಿದೆ.[ಹೋರಾಟದ ಹಾದಿಯ 16 ವರ್ಷದ ಶರ್ಮಿಳಾ ಉಪವಾಸ ಅಂತ್ಯ]
ಉಪವಾಸ ಅಂತ್ಯ ಮಾಡಿರುವ ಶರ್ಮಿಳಾ ರಾಜಕಾರಣಕ್ಕೆ ಇಳಿದು ಮುಂದಿನ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ. ಈ ಕಾನೂನು ಇಂದು ನಿಜಕ್ಕೂ ಬೇಕೆ? ಎಂಬುದನ್ನು ನೀವು ಕಾಮೆಂಟ್ ಮೂಲಕ ತಿಳಿಸಬಹುದು.
ಜಾರಿಯಾದ ದಿನಾಂಕ
ಭಾರತ ಸಂವಿಧಾನ ಸೇನಾ ಪಡೆಗಳಿಗೆ ನೀಡಿರುವ ವಿಶೇಷ ಅಧಿಕಾರ ಎಂದು ಇದನ್ನು ಕರೆಯಬಹುದು. ಸೆಪ್ಟೆಂಬರ್ 11, 1958ರಲ್ಲಿ ಅಂಗೀಕಾರವಾದ ಕಾನೂನು ಭಾರತದ ಹಲವೆಡೆ ಜಾರಿಯಲ್ಲಿದೆ.
ಯಾವ ರಾಜ್ಯಗಳಿಗೆ ಅನ್ವಯ
ಅರುಣಾಚಲ ಪ್ರದೇಶ ಅಸ್ಸಾಂ, ಮೇಘಾಲಯ, ಮಣಿಪುರ, ಮೀಝೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಕಾಯ್ದೆ ಜಾರಿಯಲ್ಲಿತ್ತು.
1983 ರಲ್ಲಿ ಬದಲಾವಣೆ
ಆದರೆ 1983 ರಲ್ಲಿ ತೆಗೆದುಕೊಂಡ ತಿದ್ದುಪಡಿ ಪ್ರಕಾರ ಪಂಜಾಬ್ ಮತ್ತು ಛತ್ತೀಸ್ ಘಡದಲ್ಲಿ ಕಾನೂನು ಹಿಂದಕ್ಕೆ ಪಡೆಯಲಾಯಿತು. ಆದರೆ ಇದು ಜಾರಿಗೆ ಬಂದಿದ್ದು 1997 ರಲ್ಲಿ.
ಜಮ್ಮು ಕಾಶ್ಮೀರದಲ್ಲಿ ಜಾರಿ
1990ರಲ್ಲಿ ಅಂಗೀಕಾರವಾದ ನಿಯಮಾವಳಿ ಪ್ರಕಾರ ಸಶಸ್ತ್ರ ಪಡೆಗಳಿಗೆ ವಿಶೇಷ ಅಧಿಕಾರ ಕಾಯ್ದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜಾರಿಗೆ ಬಂದಿತು.
ಸೇನೆಗೆ ಸಿಗುವ ಅಧಿಕಾರಗಳೇನು?
ವಾರಂಟ್ ಇಲ್ಲದೇ ಯಾರನ್ನು ಬೇಕಾದರೂ ದಸ್ತಗಿರಿ ಮಾಡುವ, ಬಂಧನ ಮಾಡುವ, ಅಗತ್ಯ ಬಿದ್ದರೆ ಗೋಲಿಬಾರ್ ನಡೆಸುವ ಅಧಿಕಾರವನ್ನು ಸೇನೆಗೆ ಕಾನೂನು ನೀಡುತ್ತದೆ.
ಮಾನವ ಹಕ್ಕು ಉಲ್ಲಂಘನೆ?
ಈ ಕಾನೂನನ್ನು ಮಾನವ ಹಕ್ಕುಗಳ ಹೋರಾಟಗಾರರು ಅನೇಕ ಸಾರಿ ಟೀಕೆ ಮಾಡಿದ್ದಾರೆ. ಮಾನವ ಹಕ್ಕು ಉಲ್ಲಂಘನೆ ಎಂಬ ಆರೋಪವೂ ಇದೆ. ಕಾಶ್ಮೀರದ ಕೆಲ ಘಟನೆಗಳ ಅವಲೋಕನ ಮಾಡಿದ ನಂತರ ವಿಶ್ವಸಂಸ್ಥೆ ಈ ವಿಶೇಷ ಅಧಿಕಾರ ಕಾನೂನನ್ನು ಹಿಂದಕ್ಕೆ ಪಡೆಯಬೇಕು ಎಂದು ಭಾರತ ಸರ್ಕಾರಕ್ಕೆ ಸಲಹೆ ನೀಡಿತ್ತು.
ಶರ್ಮಿಳಾ ಉಪವಾಸ ಆರಂಭಿಸಿದ್ದೇಕೆ?
ನವೆಂಬರ್ 1, 2000ರಂದು ಮಣಿಪುರದ ಇಂಫಾಲ್ ವಿಮಾನ ನಿಲ್ದಾಣದ ಸಮೀಪದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನ ಸಾರ್ವಜನಿಕರನ್ನು ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಇದನ್ನು ಪ್ರತಿಭಟಿಸಿ ಶರ್ಮಿಳಾ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.