ಮಾನವ ಕಳ್ಳಸಾಗಾಣಿಕೆದಾರರ 'ತಿಥಿ'ಮಾಡಿದ ಮೋದಿ ನೋಟ್ ಬ್ಯಾನ್
ಅಪನಗದೀಕರಣ ಮಾನವ ಕಳ್ಳಸಾಗಾಣಿಕೆ ದಂಧೆಯನ್ನು ಯಾವ ಮಟ್ಟದಲ್ಲಿ ನಲುಗಿಹೋಗುವಂತೆ ಮಾಡಿದೆ ಎನ್ನುವುದರ ಬಗ್ಗೆ ಒಂದು ನೋಟ.
ಮಾನವ ಕಳ್ಳಸಾಗಾಣಿಕೆ ಎನ್ನುವುದು ಕರ್ನಾಟಕ ಸೇರಿದಂತೆ ದೇಶದೆಲ್ಲಡೆ ವ್ಯಾಪಕವಾಗಿ ನಡೆಯುತ್ತಿರುವ ದಂಧೆ. ಪ್ರಮುಖವಾಗಿ ಯುವತಿಯರ ಮೇಲೆ ಕಣ್ಣಿಡುವ ಈ ದಂಧೆಕೋರರು ಹಣದಾಸೆಗೆ ಯಾವ ಮಟ್ಟಕ್ಕೂ ಇಳಿಯಲು ಹೇಸದವರು. ದೊಡ್ಡ ಮೊತ್ತದ ನೋಟು ನಿಷೇಧದಿಂದ ಈ ದಂಧೆಗೆ ಸದ್ಯ ಹೆಚ್ಚುಕಮ್ಮಿ ಸಂಪೂರ್ಣ ಬ್ರೇಕ್ ಬಿದ್ದಿದೆ.
ಹೌದು, ಮಾನವ ಕಳ್ಳಸಾಗಾಣಿಕೆದಾರರ ಸುಳಿಗೆ ಸಿಕ್ಕ ಅಮಾಯಕರ ಬಾಳಿಗೆ ಮೋದಿಯವರ ನೋಟ್ ಬ್ಯಾನ್ ನಿರ್ಧಾರ ಹೊಸ ಆಶಾಕಿರಣವನ್ನು ಮೂಡಿಸಿದೆ. ಈ ದಂಧೆ ಸದ್ಯದ ಮಟ್ಟಿಗೆ ನೆಲಕಚ್ಚಿದೆ ಎಂದು ವಿವಿಧ ಅಧ್ಯಯನದ ವರದಿಯನ್ನಾಧರಿಸಿ ಪೋಸ್ಟ್ ಕಾರ್ಡ್ ನ್ಯೂಸ್ ಅಂತರ್ಜಾಲ ವರದಿ ಮಾಡಿದೆ. (ಪಕ್ಷಗಳು ದೇಣಿಗೆ ಪಡೆಯುವುದನ್ನು ನಿಲ್ಲಿಸಬೇಕು, ಮೋದಿ)
ಅಕೌಂಟ್ ನಲ್ಲಿ ದುಡ್ದಿದ್ದರೂ, ಜೇಬಿನಲ್ಲಿ ಕಾಸಿಲ್ಲ.. ಪರ್ಸ್ ತುಂಬಿಸಿಕೊಳ್ಳೋಣ ಎಂದರೆ ಎಟಿಎಂ ಇಲ್ಲಾ.. ಬ್ಯಾಂಕಿಗೆ ಹೋಗಿ ದುಡ್ಡು ತೆಗೆದುಕೊಳ್ಳೋಣ ಎಂದರೆ ಮಾರುದ್ದ ಕ್ಯೂ ಎನ್ನುವ ಸಾರ್ವಜನಿಕರ ಮಾತಿನ ನಡುವೆ, ಮೋದಿ ಸರಕಾರದ ಕ್ರಾಂತಿಕಾರಿ ನೋಟು ನಿಷೇಧದ ನಿರ್ಧಾರದಿಂದ ಅಕ್ಷರಶಃ ನೆಲಕಚ್ಚಿದ್ದು ಮಾನವೀಯತೆಯನ್ನೇ ಮರೆತಿರುವ 'ಮಾನವ ಕಳ್ಳಸಾಗಾಣಿಕೆ' ದಂಧೆ.
ಮುಗ್ದ ಮಕ್ಕಳು, ಮಹಿಳೆಯರನ್ನು ದಳ್ಳಾಳಿಗಳ ಮೂಲಕ ಅಥವಾ ವಾಮಮಾರ್ಗದಲ್ಲಿ ತಮ್ಮ ದಂಧೆಯ ಕರಾಳ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುವ ದಂಧೆಕೋರರು, ನಂತರ ಅವರುಗಳನ್ನು ಹೆಚ್ಚಾಗಿ ದೂಡುವುದು ವೇಶ್ಯಾವಾಟಿಕೆಗೆ. ಈ ದಂಧೆಗೆ ಖಾಕಿ, ಖಾದಿಯ ಬೆಂಬಲವಿರುವುದೂ ಗೊತ್ತಿರುವ ವಿಚಾರ.
ಕಳೆದ ನವೆಂಬರ್ ತಿಂಗಳ ನಂತರ ಈ ದಂಧೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ ಎಂದು ಅಧ್ಯಯನವೊಂದರಿಂದ ಬಂದ ಮಾಹಿತಿ. ನವೆಂಬರ್ ಹತ್ತರ ನಂತರ ಈ ದಂಧೆಗೆ ಯಾವೊಂದೂ ಮಕ್ಕಳು ಅಥವಾ ಮಹಿಳೆಯರು ಸಿಲುಕಿಲ್ಲ ಎನ್ನುವುದು ನಿಟ್ಟುಸಿರು ಬಿಡುವ ಸಂಗತಿ. ನೋಟು ನಿಷೇಧ ಈ ವ್ಯವಹಾರಕ್ಕೆ ಅಷ್ಟರ ಮಟ್ಟಿಗೆ ಬಲವಾದ ಪೆಟ್ಟನ್ನು ನೀಡಿದೆ. ಮುಂದೆ ಓದಿ
ನೋಟು ನಿಷೇಧ
ಈ ದಂಧೆಯ ಕರಾಳ ಮುಖದಿಂದ ತಪ್ಪಿಸಿಕೊಂಡು ಬಂದಿರುವವರ ಪ್ರಕಾರ ನೋಟು ನಿಷೇಧ, ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಈ ವ್ಯಾಪಾರಕ್ಕೆ ಏಟು ನೀಡಿದೆ, ಮೋದಿ ಸರಕಾರದ ಅಪನಗದೀಕರಣದ ನಿರ್ಧಾರ ಇಷ್ಟರ ಮಟ್ಟಿಗೆ ನಮ್ಮಂತವರ ಪಾಲಿಗೆ ಸಹಾಯವಾಗಲಿದೆ ಎನ್ನುವುದು ನಂಬಲೂ ಅಸಾಧ್ಯವಾದದ್ದು ಎನ್ನುವುದು ಇವರ ಮನದಾಳದ ಮಾತು.
ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ
ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆಗಳಿರುವುದರಿಂದ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಈ ದಂಧೆಗೆ ಬೇಡಿಕೆ ಹೆಚ್ಚು. ಆದರೆ ನೋಟು ನಿಷೇಧದ ನಂತರ ಯಾವನೊಬ್ಬ ದಳ್ಳಾಳಿಯೂ ಕಾಣಸಿಗುತ್ತಿಲ್ಲ. ಈ ಮಾಫಿಯಾದವರಿಗೆ ಮಧ್ಯವರ್ತಿಗಳಿಗೆ ನೀಡಲೂ ದುಡ್ಡಿಲ್ಲದೇ ಪರದಾಡುತ್ತಿದ್ದಾರೆ ಎನ್ನುವುದು ಅಧ್ಯಯನದ ವರದಿ.
ವಿವಿಧ ರಾಜ್ಯಗಳಿಂದ ಬಂದವರು
ಈ ಜಾಲದಲ್ಲಿ ಸಿಲುಕುವ ಹೆಣ್ಣು ಮಕ್ಕಳು ಪ್ರಮುಖವಾಗಿ ಉತ್ತರ ಅಸ್ಸಾಂ, ಬಿಹಾರ, ಜಾರ್ಖಂಡ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದಿನವರು. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಆಮಿಷವೊಡ್ಡಿ ಈ ದಂಧೆಗೆ ನೂಕುವ ಮಧ್ಯವರ್ತಿಗಳಿಗೆ ಹಣ ಪಾವತಿಯಾಗುವುದು 500, 1000 ರೂಪಾಯಿ ನೋಟಿನಿಂದ. ಈಗ ಈ ದೊಡ್ಡ ಮುಖಬೆಲೆಯ ನೋಟುಗಳು ಬ್ಯಾನ್ ಆಗಿರುವ ಹಿನ್ನಲೆಯಲ್ಲಿ ಈ ದಂಧೆ ಸಂಪೂರ್ಣ ನಲುಗಿಹೋಗಿದೆ.
ಲಕ್ಷ ಲಕ್ಷ ಪಾವತಿ
ಮಧ್ಯವರ್ತಿಗಳಿಗೆ ಈ ದಂಧೆ ನಡೆಸುವವರು ಪ್ರತೀ ಹೆಣ್ಣುಮಕ್ಕಳಿಗೆ ನೀಡುವ ಹಣ ಲಕ್ಷ ಲಕ್ಷ ಲೆಕ್ಕದಲ್ಲಿ. ಹುಡುಗಿಯರ ವಯಸ್ಸನ್ನಾಧರಿಸಿ ಈ ದಂಧೆಯ ಮುಖ್ಯಸ್ಥ ಹಣ ನಿಗದಿ ಮಾಡುತ್ತಾನೆ. 10-12ವಯಸ್ಸಿನ ಮಕ್ಕಳಿಗೆ 4 ಲಕ್ಷ, 14 ರಿಂದ 18 ವಯಸ್ಸಿನವರಿಗೆ 5ಲಕ್ಷ ರೂಪಾಯಿವರೆಗೆ ದಂಧೆಯ ಮುಖ್ಯಸ್ಥ ಮಧ್ಯವರ್ತಿಗಳಿಗೆ ನೀಡುತ್ತಾನೆ.
ದಿನವೊಂದಕ್ಕೆ ಕನಿಷ್ಟ ಹತ್ತರಿಂದ ಹದಿನೈದು
ದಿನವೊಂದಕ್ಕೆ ಕನಿಷ್ಟ ಹತ್ತರಿಂದ ಹದಿನೈದು ಮಾನವ ಕಳ್ಳಸಾಗಾಣಿಕೆಯ ವರದಿಯಾಗುತ್ತಲೇ ಇರುತ್ತಿದ್ದವು. ಆದರೆ ಕಳೆದ 40 ದಿನಗಳಿಂದ ಕಳ್ಳಸಾಗಾಣಿಕೆಯ ಒಂದೇ ಒಂದು ಪ್ರಕರಣ ವರದಿಯಾಗದಿರುವುದು ಸಂತೋಷದ ವಿಚಾರ ಎನ್ನುತ್ತಾರೆ 'ಬಚ್ಪನ್ ಬಚಾವೋ ಆಂದೋಲನ' ಸಾಮಾಜಿಕ ಸಂಘಟನೆಯ ಕಾರ್ಯಕರ್ತ ರಾಕೇಶ್ ಸೆನೆಗರ್.
ದಂಧೆಯ ವಾರ್ಷಿಕ ಆದಾಯ
Global March against Child Labor ಸಂಸ್ಥೆ ನಡೆಸಿದ ಸರ್ವೇ ಪ್ರಕಾರ ಈ ದಂಧೆಯ ವಾರ್ಷಿಕ ಆದಾಯ 19 ಟ್ರಿಲಿಯನ್. ಲೆಕ್ಕಾಹಾಕಿ.. ಈ ದಂಧೆ ದೇಶದಲ್ಲಿ ಎಷ್ಟರ ಮಟ್ಟಿಗೆ ಬೇರೂರಿದೆ ಎಂದು. ನೋಟು ನಿಷೇಧ ಅಮಾಯಕ ಹೆಣ್ಣುಮಕ್ಕಳ ಪಾಲಿಗೆ ವರವಾಗಿ ಪರಿಣಮಿಸಿರುವುದು ಸಂತೋಷದ ವಿಚಾರ.