ಭಾರತ್ ಬಂದ್: ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ಆದ ಲಾಭ ಇದೊಂದೇ!
ಸೋಮವಾರ (ಸೆ 10) ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಕರೆದಿದ್ದ ಭಾರತ್ ಬಂದ್, ಕರ್ನಾಟಕ ಸೇರಿದಂತೆ ಕೆಲವಡೆ ಯಶಸ್ವಿಯಾಗಿದ್ದರೆ, ಮತ್ತಷ್ಟು ಕಡೆ ವಿಫಲವಾಗಿದೆ. ಪ್ರಮುಖವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂದ್ ಕೇವಲ ಪ್ರತಿಭಟನೆಗಷ್ಟೇ ಸೀಮಿತವಾಯಿತು.
ಒಂದು ದಿನದ ಹಿಂದೆ ಯಾವ ಕಾರಣಕ್ಕಾಗಿ ಬಂದ್ ಗೆ ಕರೆನೀಡಲಾಗಿತ್ತೋ. ಅದರ ಮರುದಿನವೇ ತೈಲ ಬೆಲೆ ಏರಿಕೆಯಾಗಿದೆ. ಸೆಂಟ್ರಲ್ ಎಕ್ಸೈಸ್ ಡ್ಯೂಟಿ ಕಮ್ಮಿ ಮಾಡಲು ಸಾಧ್ಯವೇ ಇಲ್ಲ, ತೈಲ ಬೆಲೆ ಏರಿಕೆ/ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎಂದು ಕೇಂದ್ರ ಸರಕಾರ ಕೈಚೆಲ್ಲಿದೆ.
ಒಂದು ದಿನದ ಭಾರತ್ ಬಂದ್ ನಿಂದ ಸಾರ್ವಜನಿಕರ ಬೇಡಿಕೆ ಈಡೇರಲು ಸಾಧ್ಯವೇ? ಇಲ್ಲ ಎನ್ನುವ ವಿಚಾರ ಬಂದ್ ಗೆ ಕರೆನೀಡಿದವರಿಗೂ ಗೊತ್ತಿರುವ ವಿಚಾರವೇ. ಆದರೆ, ಯಾವ ಕಾರಣಕ್ಕಾಗಿ ಕಾಂಗ್ರೆಸ್ ಬಂದ್ ಗೆ ಕರೆನೀಡಿತ್ತೋ, ಅದರಲ್ಲಿ ಯಶಸ್ಸು ಪಡೆದುಕೊಳ್ಳುವಲ್ಲಿ ಸಫಲವಾಗಿದೆ.
ಭಾರತ್ ಬಂದ್ ರೌಂಡ್ ಅಪ್: ಬಿಜೆಪಿ ವಿರುದ್ಧ 'ಕೈ', ಕಾಲು, ಮೆದುಳು
ಬಂದ್ ಹೆಸರಿನಲ್ಲಿ ಕಾಂಗ್ರೆಸ್ ತನ್ನ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವಲ್ಲಿ ಯಶಸ್ವಿಯಾಗಿದೆ. ಪ್ರಮುಖವಾಗಿ, ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವ ವೇಳೆ, ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಬಂದ್ ಅನ್ನು ವೇದಿಕೆ ಮಾಡಿಕೊಂಡ ಕಾಂಗ್ರೆಸ್, ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದೆ.
ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕಾಂಗ್ರೆಸ್ ಕಾರ್ಯಕರ್ತರು ಕಾಟಾಚಾರಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದನ್ನು ಬಿಟ್ಟರೆ, ಪಕ್ಷ ನಿರೀಕ್ಷಿಸಿದ ಮಟ್ಟಕ್ಕೆ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿರಲಿಲ್ಲ. ಇದಕ್ಕೆ, ಜೆಡಿಎಸ್ ಜೊತೆ ಕೈಜೋಡಿಸಿದ್ದೂ ಒಂದು ಕಾರಣ ಎನ್ಜುವುದು ಅತ್ಯಂತ ಸ್ಪಷ್ಟ.
ಕಾಂಗ್ರೆಸ್ ಲೆಕ್ಕಾಚಾರವೂ ಕೈಗೂಡಿದೆ
ರಾಷ್ಟ ಮಟ್ಟದಲ್ಲೂ ಬಂದ್ ಹೆಸರಿನಲ್ಲಿ ಮಿತ್ರ ಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ಕರೆತರುವ ಕಾಂಗ್ರೆಸ್ ಲೆಕ್ಕಾಚಾರವೂ ಕೈಗೂಡಿದೆ. ಕಾಂಗ್ರೆಸ್ ಆಯೋಜಿಸಿದ್ದ ಧರಣಿಯಲ್ಲಿ ಪಕ್ಷದ ಪ್ರಮುಖರ ಜೊತೆ, ಶರದ್ ಪವಾರ್, ಶರದ್ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಹಾಜರಿದ್ದರು. ದೇಶಕ್ಕೆ ಏನು ಬೇಕು? ಯುವಕರಿಗೆ ಏನು ಬೇಕು? ಎಂಬುದರ ಬಗ್ಗೆ ಪ್ರಧಾನಿ ಮೋದಿ ಅವರು ಮಾತನಾಡುತ್ತಿಲ್ಲ ಎನ್ನುವ ಮೂಲಕ, ರಾಹುಲ್ ಗಾಂಧಿ, ಪ್ರಧಾನಿ ವಿರುದ್ದ ವಿರೋಧ ಪಕ್ಷದವರನ್ನು ಜೊತೆಗೆ ಕರೆದುಕೊಂಡು ಹೋಗುವತ್ತ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದಾರೆ. (ಚಿತ್ರ: ಪಿಟಿಐ)
ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮುಸುಕಿನ ಗುದ್ದಾಟ ಬಯಲಿಗೆಳೆದ ಬಂದ್
ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು
ಅಸೆಂಬ್ಲಿ ಚುನಾವಣೆಗೆ ಮುನ್ನ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು, ತಮ್ಮ ನಾಯಕರು ಅಧಿಕಾರಕ್ಕಾಗಿ ಕೈಜೋಡಿಸಿದ್ದರಿಂದ ತೀವ್ರ ಮುಜುಗರಕ್ಕೀಡಾಗಿದ್ದರು. ಹಾಗಾಗಿ, ಎರಡೂ ಪಕ್ಷಗಳಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ, ಕಾರ್ಯಕರ್ತರು ಹುರುಪಿನಿಂದ ಕೆಲಸ ಮಾಡುತ್ತಿರಲಿಲ್ಲ. ಇದು ಎರಡೂ ಪಕ್ಷದ ನಾಯಕರಿಗೆ ತೀವ್ರ ತಲೆನೋವಾಗಿ ಪರಿಣಮಿಸಿತ್ತು.
ಮೋದಿ ನೇತೃತ್ವದ ಸರಕಾರ ಎಲ್ಲ ಮಿತಿಯನ್ನೂ ಮೀರಿದೆ: ಮನ್ ಮೋಹನ್ ಸಿಂಗ್
ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಯಶಸ್ವಿ
ಹಾಗಾಗಿ, ಬಂದ್ ಕೇಂದ್ರ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ರಾಜ್ಯ ಕಾಂಗ್ರೆಸ್ ಸಂಘಟನೆಗೆ ಹೊಸ ಹುರುಪು ನೀಡಿದ್ದಂತೂ ಹೌದು. ಪ್ರಮುಖವಾಗಿ ಸಮ್ಮಿಶ್ರ ಸರಕಾರದ ಭಾಗಿಯಾಗಿದ್ದಕ್ಕೆ ಒಳಗೊಳಗೆ ಬೇಸರಗೊಂಡಿದ್ದ ಕೈಪಡೆ, ಮೆತ್ತೆ ಒಗ್ಗಟ್ಟನ್ನು ಪ್ರದರ್ಶಿಸಲು ಬಂದ್ ಕರೆಯ ಲಾಭವನ್ನು ಚೆನ್ನಾಗಿ ಪಡೆದುಕೊಂಡಿತು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದನ್ನು ಸೋಮವಾರದ ಬಂದ್ ವೇಳೆ ನೋಡಬಹುದಾಗಿತ್ತು. (ಚಿತ್ರ: ಪಿಟಿಐ)
ಇಂಧನ ಪುಗಸಟ್ಟೆ ಕೊಡಲು ಇರಾನ್ನಲ್ಲಿ ನಮ್ಮ ಮಾವಂದಿರು ಇಲ್ಲ: ಸಿಟಿ.ರವಿ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
ಕೇಂದ್ರದ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ದುಬಾರಿ ಇಂಧನ ಬೆಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ಒಂದು ಮಟ್ಟಿಗೆ ಯಶಸ್ವಿಯಾಗಿದೆ, ಗಣೇಶ ಹಬ್ಬದ ಬಳಿಕ ತೈಲಬೆಲೆ ಏರಿಕೆ ಹಾಗೂ ಕೇಂದ್ರ ಸರಕಾರದ ವೈಫಲ್ಯದ ವಿರುದ್ಧ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಚಿತ್ರ: ಟ್ವಿಟ್ಟರ್)
ಪಕ್ಷ ಸಂಘಟನೆ ಮತ್ತು ಮೋದಿ ವಿರೋಧಿ ಮಂಚವನ್ನು ಇನ್ನಷ್ಟು ಬಲಪಡಿಸಿದ್ದು
ಇನ್ನು, ಮಾನಸ ಸರೋವರ ಯಾತ್ರೆಯಲ್ಲಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಬಂದ್ ವೇಳೆ, ಪಕ್ಷವನ್ನು ಮುನ್ನಡೆಸಲು ಆಗಮಿಸಿದ್ದರು. ನರೇಂದ್ರ ಮೋದಿಯವರನ್ನು ಇನ್ನೊಂದು ಅವಧಿಗೆ ಪ್ರಧಾನಿಯಾಗಲು ಬಿಡಬಾರದು ಎನ್ನುವ ಸಮಾನ ಮನಸ್ಕರನ್ನು ಒಂದೇ ವೇದಿಕೆಯಲ್ಲಿ ಕರೆತರುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಹಾಗಾಗಿ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ಭಾರತ್ ಬಂದ್ ನಿಂದ ಆದ ಲಾಭವೇನಂದರೆ, ಪಕ್ಷ ಸಂಘಟನೆ ಮತ್ತು ಮೋದಿ ವಿರೋಧಿ ಮಂಚವನ್ನು ಇನ್ನಷ್ಟು ಬಲಪಡಿಸಿದ್ದು. (ಚಿತ್ರ: ಪಿಟಿಐ)