ನಾಗರಿಕ ಸಂಸ್ಥೆ ಚುನಾವಣೆಗೆ ಭದ್ರತೆ ಸರಿಯಾಗಿದೆಯೇ?: ತ್ರಿಪುರಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ನವದೆಹಲಿ, ನವೆಂಬರ್ 23: ತ್ರಿಪುರಾದಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಪ್ರಚಾರ ನಿರ್ಬಂಧಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು. ನವೆಂಬರ್ 25ರಂದು ನಡೆಯಲಿರುವ ನಾಗರಿಕ ಸಂಸ್ಥೆ ಚುನಾವಣೆಗೆ ಪ್ರಚಾರ ನಡೆಸಲು ನಿರ್ಬಂಧಗಳನ್ನು ಹೇರಲಾಗುತ್ತಿದೆ ಎಂದು ಟಿಎಂಸಿ ಆಪಾದಿಸಿದೆ.
ಟಿಎಂಸಿ ಮತ್ತು ತ್ರಿಪುರಾ ಸರ್ಕಾರವು ಮೊದಲ ಹಂತದಲ್ಲಿ ವಾದಗಳನ್ನು ಮಂಡಿಸಿದ ನಂತರ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ತ್ರಿಪುರಾ ಸರ್ಕಾರವನ್ನು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವುದಕ್ಕಾಗಿ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ತ್ರಿಪುರಾ ಸರ್ಕಾರವನ್ನು ಕೇಳಿದರು.
ತ್ರಿಪುರಾ ಚುನಾವಣೆ: ಟಿಎಂಸಿಯು ಬಿಜೆಪಿಯನ್ನು ಸೋಲಿಸಲಿದೆ ಎಂದ ಅಭಿಷೇಕ್
ರಾಜ್ಯದಲ್ಲಿ ಇತ್ತೀಚಿನ ಹಿಂಸಾಚಾರ ಮತ್ತು ರಾಜಕೀಯ ಉದ್ವಿಗ್ನತೆಯ ಕಾರಣದಿಂದ ನಾಗರಿಕ ಸಂಸ್ಥೆಗಳ ಚುನಾವಣೆಯನ್ನು ಮರು ನಿಗದಿಗೊಳಿಸಲು ಪರಿಗಣಿಸುವಂತೆ ಟಿಎಂಸಿ ಪರ ವಕೀಲರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿಕೊಂಡರು.
ತ್ರಿಪುರಾ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ:
"ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡುತ್ತಿದ್ದೀರಿ ಎಂದು ತಿಳಿಯಲು ನಾವು ಬಯಸುತ್ತೇವೆ. ಇಂದು ಮತ್ತು ಮತ ಎಣಿಕೆ ದಿನದ ನಡುವೆ ಯಾವುದೇ ಉದ್ವಿಗ್ನ ಘಟನೆಗಳು ನಡೆಯದಂತೆ ನೀವು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ?,'' ಎಂದು ನ್ಯಾಯಾಧೀಶರು ತ್ರಿಪುರಾ ಸರ್ಕಾರವನ್ನು ಪ್ರಶ್ನಿಸಿದರು. ಮತದಾನದ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಲು ತೆಗೆದುಕೊಳ್ಳುತ್ತಿರುವ ಭದ್ರತಾ ಕ್ರಮಗಳ ಬಗ್ಗೆ ವಿವರವಾದ ಹೇಳಿಕೆಯನ್ನು ತಯಾರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಲಾಗಿದ್ದು, ವಿಚಾರಣೆಯನ್ನು ಒಂದೂವರೆ ಗಂಟೆಗಳ ಕಾಲ ಮುಂದೂಡಲಾಯಿತು.
ಟಿಎಂಸಿ ವಾದ ಮಂಡನೆ:
ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಟಿಎಂಸಿ ಕೌನ್ಸಿಲ್, ತ್ರಿಪುರಾದಲ್ಲಿ ನಡೆದಿದೆ ಎನ್ನಲಾದ ಹಲವಾರು ಹಿಂಸಾಚಾರದ ಘಟನೆಗಳ ದಿನಾಂಕ ಮತ್ತು ಸ್ಥಳವನ್ನು ಉಲ್ಲೇಖಿಸಿದ್ದು, "ಸ್ಕ್ರೀನ್ ಶಾಟ್ಗಳಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಪೊಲೀಸರು ಸ್ಥಳದಲ್ಲೇ ನಿಂತಿದ್ದರು. ಹಾಗಿದ್ದರೂ ಏನೂ ಮಾಡದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿರುವುದನ್ನು ನೀವು ನೋಡಬಹುದು," ಎಂದು ಹೇಳಿದೆ.
ತ್ರಿಪುರಾದಲ್ಲಿ ನಾಗರಿಕ ಸಂಸ್ಥೆಗಳ ಚುನಾವಣೆಗೆ ದಿನಾಂಕವನ್ನು ಮರು ನಿಗದಿಗೊಳಿಸಬೇಕು. ಇದರ ಜೊತೆಗೆ ವೀಕ್ಷಕರ ಸಮಿತಿಯನ್ನು ನೇಮಿಸಲು ಪರಿಗಣಿಸುವಂತೆ ಟಿಎಂಸಿ ಸುಪ್ರೀಂ ಕೋರ್ಟ್ಗೆ ಕೋರಿದೆ.
ಟಿಎಂಸಿ ಪರ ವಕೀಲರು, ''ರಾಜಕೀಯ ಕಾರ್ಯಕರ್ತರನ್ನು ಹೊರಗೆ ತಳ್ಳಲಾಗುತ್ತಿದೆ, ಮಕ್ಕಳು ಮತ್ತು ಮಹಿಳೆಯರನ್ನು ಅವರ ಮನೆಯಿಂದ ಹೊರಗೆ ಎಳೆದು ಹಾಕಲಾಗಿದೆ, ವಾಹನಗಳನ್ನು ಧ್ವಂಸಗೊಳಿಸಲಾಗಿದೆ, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲ. 17 ಹಿಂಸಾಚಾರದ ಘಟನೆಗಳು ನಡೆದಿವೆ ಮತ್ತು ಒಬ್ಬನನ್ನು ಬಂಧಿಸಿಲ್ಲ. ಮತದಾರರಾದರೂ ಮತ ಹಾಕಲು ಬರುತ್ತಾರೆಯೇ? ಚುನಾವಣೆಗಳನ್ನು ಕೊನೆಯದಾಗಿ 2020ರಲ್ಲಿ ನಡೆಸಲಾಯಿತು. ಅವುಗಳನ್ನು ಮರು ನಿಗದಿಪಡಿಸಿದರೆ ಸ್ವರ್ಗವೇನೂ ಕುಸಿಯುವುದಿಲ್ಲ, ಎಂದು ಟಿಎಂಸಿ ವಾದ ಮಂಡಿಸಿದೆ.
ತ್ರಿಪುರಾ ಸರ್ಕಾರದ ಪರ ವಾದವೇನು?:
ತ್ರಿಪುರಾ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ಮಹೇಶ್ ಜೇಠ್ಮಲಾನಿ, "ಇದು ರಾಜಕೀಯವಾಗಿ ಯೋಜಿತ ಅರ್ಜಿಯಾಗಿದೆ. ಇಂದು ಪ್ರಚಾರದ ಕೊನೆಯ ದಿನವಾಗಿದೆ. ಇದ್ದಕ್ಕಿದ್ದಂತೆ, ಅವರು ಘಟನೆಗಳ [ಹಿಂಸಾಚಾರದ] ಸರಮಾಲೆಯೊಂದಿಗೆ ಬರುತ್ತಾರೆ. ಅವರು ಪ್ರಸ್ತಾಪಿಸಿದ ಪ್ರತಿಯೊಂದು ಘಟನೆಯಲ್ಲಿ, ಎಫ್ಐಆರ್ ದಾಖಲಿಸಲಾಗಿದೆ ಮತ್ತು ನಾವು ಎಲ್ಲವನ್ನೂ ತನಿಖೆ ಮಾಡುತ್ತಿದ್ದೇವೆ. "ಸುಪ್ರೀಂ ಕೋರ್ಟ್ ನಮಗೆ ಅನುಸರಣೆ ವರದಿಯನ್ನು ಸಲ್ಲಿಸಲು ಕೇಳಿದೆ. ನಾಳೆ ನಾವು ಅದನ್ನು ಸಲ್ಲಿಸಲಿದ್ದೇವೆ," ಎಂದು ಹೇಳಿದರು.
ತ್ರಿಪುರಾದಲ್ಲಿ ನಡೆದ ಘಟನೆ ಏನು?:
ತ್ರಿಪುರಾದಲ್ಲಿ ಕೊಲೆ ಯತ್ನದ ಆರೋಪದಡಿ ಭಾನುವಾರ ಟಿಎಂಸಿ ನಾಯಕಿ ಸಯೋನಿ ಘೋಷ್ ರನ್ನು ಬಂಧಿಸಲಾಗಿತ್ತು. ಪೊಲೀಸ್ ಠಾಣೆಗೆ ವಿಚಾರಣೆಗಾಗಿ ತೆರಳಿದ ವೇಳೆ ಟಿಎಂಸಿ ಕಾರ್ಯಕರ್ತರನ್ನು ಠಾಣೆಯೊಳಗೆ ಬಿಜೆಪಿ ಸದಸ್ಯರು ಪೊಲೀಸರ ಸಮ್ಮುಖದಲ್ಲಿಯೇ ಥಳಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಕಳೆದ ಭಾನುವಾರ ಬೆಳಗ್ಗೆ ಸಯೋನಿ ಘೋಷ್ ಅವರನ್ನು ವಿಚಾರಣೆಗೆ ಕರೆದೊಯ್ದ ನಂತರ ಟಿಎಂಸಿ ಸದಸ್ಯರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು. ಅಗರ್ತಲಾದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರನ್ನು ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಟಿಎಂಸಿ ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿತ್ತು.
ಅಗರ್ತಲಾದ ಭಗಬನ್ ಠಾಕೂರ್ ಚೌಮುನಿ ಪ್ರದೇಶದಲ್ಲಿರುವ ಟಿಎಂಸಿ ರಾಜ್ಯ ಘಟಕದ ಸ್ಟೀರಿಂಗ್ ಕಮಿಟಿ ಮುಖ್ಯಸ್ಥ ಸುಬಾಲ್ ಭೌಮಿಕ್ ನಿವಾಸದ ಮೇಲೆ ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಮಾಧ್ಯಮಗಳ ಸದಸ್ಯರನ್ನು ಸಹ ಕಟ್ಟಿ ಹಾಕಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಪೊಲೀಸರು ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.