ಕೊರೊನಾ ಹೊಡೆತ: ಪಶ್ಚಿಮ ವಿಭಾಗದ ರೈಲ್ವೆಗೆ 5,000 ಕೋಟಿ ರೂ. ನಷ್ಟ
ನವದೆಹಲಿ, ಫೆಬ್ರವರಿ.24: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಪಶ್ಚಿಮ ರೈಲ್ವೆ ವಿಭಾಗವೊಂದಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 5000 ಕೋಟಿ ರೂಪಾಯಿ ಆದಾಯ ನಷ್ಟವಾಗಿದೆ ಎಂದು ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಇಂದಿಗೂ ಪ್ರಯಾಣಿಕರು ಕೊರೊನಾವೈರಸ್ ಸೋಂಕಿಗೆ ಹೆದರಿ ರೈಲುಗಳಲ್ಲಿ ಪ್ರಯಾಣಿಸುವುದರಿಂದ ದೂರ ಉಳಿಯುತ್ತಿದ್ದಾರೆ ಎಂದು ಪಶ್ಚಿಮ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಾಲ್ ಮಾಹಿತಿ ನೀಡಿದ್ದಾರೆ.
ರೈಲ್ವೆಯಲ್ಲಿ ಮಾಸ್ಕ್ ಧರಿಸದ 2,200 ಪ್ರಯಾಣಿಕರಿಗೆ 3,21,000 ರೂ. ದಂಡ
ಕೊರೊನಾವೈರಸ್ ಬಿಕ್ಕಟ್ಟಿನಿಂದಾಗಿ ಪಶ್ಚಿಮ ವಿಭಾಗದ ಪ್ಯಾಸೆಂಜರ್ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕೆಲವು ರೈಲುಗಳಲ್ಲಿ ಶೇ.10ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ ಈ ವರ್ಷದಲ್ಲಿ ಬರೋಬ್ಬರಿ 5000 ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಅಲೋಕ್ ಕನ್ಸಾಲ್ ತಿಳಿಸಿದ್ದಾರೆ.
ದೇಶಾದ್ಯಂತ ಪ್ಯಾಸೆಂಜರ್ ರೈಲು ಸಂಚಾರ ಬಂದ್
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವುದಕ್ಕೂ ಮೊದಲು ಭಾರತದ ಪಶ್ಚಿಮ ವಿಭಾಗದಲ್ಲಿ ಸುಮಾರು 300 ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿದ್ದರು. ಆದರೆ ಕಳೆದ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಎಲ್ಲ ವಿಭಾಗಗಳಲ್ಲಿ ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಇದರಿಂದ ಭಾರತೀಯ ರೈಲ್ವೆಗೆ ಭಾರೀ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮದಲ್ಲಿ 145 ರೈಲುಗಳ ಸಂಚಾರಕ್ಕೆ ಷರತ್ತುಬದ್ಧ ಅನುಮತಿ
ಕಳೆದ 11 ತಿಂಗಳಲ್ಲಿ ಪಶ್ಚಿಮ ರೈಲ್ವೆ ವಿಭಾಗದ 300 ಪ್ಯಾಸೆಂಜರ್ ರೈಲುಗಳ ಪೈಕಿ 145 ರೈಲುಗಳ ಸಂಚಾರವನ್ನು ಕ್ರಮೇಣ ಆರಂಭಿಸಲಾಗುತ್ತಿದೆ. ಈ 145 ಪ್ಯಾಸೆಂಜರ್ ರೈಲುಗಳಲ್ಲಿ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂದಿನ ಏಳು ದಿನಗಳಲ್ಲಿ ಮಧ್ಯ ಪ್ರದೇಶದಲ್ಲಿ 6 ಹೊಸ ರೈಲುಗಳ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಅಲೋಕ್ ಕನ್ಸಾಲ್ ಮಾಹಿತಿ ನೀಡಿದ್ದಾರೆ.
ಪಶ್ಚಿಮದ ಪ್ಯಾಸೆಂಜರ್ ರೈಲುಗಳಲ್ಲೇ ವಿಶೇಷ ಸೌಲಭ್ಯ
ಪಶ್ಚಿಮ ರೈಲ್ವೆ ವಿಭಾಗದಲ್ಲಿ ಪ್ಯಾಸೆಂಜರ್ ರೈಲುಗಳೇ ಪ್ರಸ್ತುತ ವಿಶೇಷ ಸೌಲಭ್ಯಗಳೊಂದಿಗೆ ವಿಶೇಷ ರೈಲುಗಳಾಗಿ ಸಂಚರಿಸುತ್ತಿವೆ. ಪ್ರತಿಯೊಂದು ರೈಲುಗಳಲ್ಲಿ ಕೊರೊನಾವೈರಸ್ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದ್ದು, ಶಿಸ್ತುಬದ್ಧವಾಗಿ ನಿಯಮಗಳನ್ನು ಪಾಲಿಸಲಾಗುತ್ತಿದೆ. ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಮಾತ್ರ ಈ ರೈಲುಗಳಲ್ಲಿ ಪ್ರಯಾಣಿಸುವುದಕ್ಕೆ ಅವಕಾಶವಿದೆ ಎಂದು ಪಶ್ಚಿಮ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಅಲೋಕ್ ಕನ್ಸಾಲ್ ಹೇಳಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಶ್ರಮಿಕ್ ರೈಲು
ಕಳೆದ ಮಾರ್ಚ್ ತಿಂಗಳಿನಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಭಾರತ ಲಾಕ್ ಡೌನ್ ಘೋಷಿಸಲಾಗಿತ್ತು. ಇದಾಗಿ ಎರಡು ತಿಂಗಳಿನಲ್ಲಿ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಪಶ್ಚಿಮ ವಿಭಾಗದಲ್ಲೂ ಶ್ರಮಿಕ್ ರೈಲುಗಳನ್ನು ಬಿಡಲಾಗಿತ್ತು. ಮೇ.1 ರಿಂದ ಮೇ. 31ರವರೆಗೂ ಪಶ್ಚಿಮ ವಿಭಾಗದಲ್ಲಿ 1234 ಶ್ರಮಿಕ್ ರೈಲುಗಳು ಸಂಚರಿಸಿದ್ದವು ಎಂದು ತಿಳಿಸಿದ್ದಾರೆ.
ಭಾರತದ ಕೊವಿಡ್-19 ಸೋಂಕಿತರ ಅಂಕಿ-ಸಂಖ್ಯೆ
ಭಾರತದಲ್ಲಿ ಒಂದೇ ದಿನ 13742 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕೊವಿಡ್-19 ಸೋಂಕಿತರ ಜೊತೆಗೆ ಗುಣುಖರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 14,037 ಸೋಂಕಿತರು ಗುಣಮುಖರಾಗಿದ್ದು, 104 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಒಟ್ಟು 1,10,30,176 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿದ್ದು, ಈಗಾಗಲೇ 1,07,26,702 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾಮಾರಿಯಿಂದ ಇದುವರೆಗೂ 1,56,567 ಜನರು ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ಭಾರತದಲ್ಲಿ 1,46,907 ಸಕ್ರಿಯ ಪ್ರಕರಣಗಳಿವೆ.