ಮಕ್ಕಳ ಕಳ್ಳಸಾಗಣಿಕೆ: 12 ದಿನಗಳ ನ್ಯಾಯಾಂಗ ಬಂಧನಕ್ಕೆ ಬಿಜೆಪಿ ನಾಯಕಿ
ಮಕ್ಕಳ ಕಳ್ಳಸಾಗಣಿಕೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ನಾಯಕಿ ಜೂಹಿ ಚೌಧರಿಗೆ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಿಲಿಗುರಿ, ಮಾರ್ಚ್ 1: ಮಕ್ಕಳ ಕಳ್ಳಸಾಗಣಿಕೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ನಾಯಕಿ ಜೂಹಿ ಚೌಧರಿಗೆ 12 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಂಗಳವಾರ ರಾತ್ರಿ ಭಾರತ-ನೇಪಾಳ ಗಡಿಯಲ್ಲಿರುವ ದಾರ್ಜಲಿಂಗ್ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯ ಮಹಿಳಾ ಘಟಕದ ಜೂಹಿ ಚೌಧರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಅವರನ್ನು ಬುಧವಾರ ಪೊಲೀಸರು ಜಲ್ಪಗುರಿ ಕೋರ್ಟಿಗೆ ಹಾಜರು ಪಡಿಸಿದಾಗ, ನ್ಯಾಯಾಧೀಶರು 12 ದಿನಗಳ ಸಿಐಡಿ ಕಸ್ಟಡಿಗೆ ಒಪ್ಪಿಸಿದ್ದಾರೆ.
ಸಿಲಿಗುರಿ ವ್ಯಾಪ್ತಿಯಲ್ಲಿ ನಡೆದಿರುವ ಕನಿಷ್ಟ 17 ಮಕ್ಕಳ ಕಳ್ಳ ಸಾಗಣೆ ಪ್ರಕರಣದಲ್ಲಿ ಜೂಹಿ ಹೆಸರು ಕೇಳಿ ಬಂದಿತ್ತು. ಆರೋಪಿಗಳ ಪಟ್ಟಿಯಲ್ಲಿ ಹೆಸರು ಕೇಳಿ ಬರುತ್ತಿದ್ದಂತೆ ಆಕೆ ಆಕೆ ತಲೆ ಮರೆಸಿಕೊಂಡಿದ್ದರು.[ಗೀತಾ ಮಹದೇವ ಪ್ರಸಾದ್ ಮನೆಯಲ್ಲಿ ದಿಗ್ವಿಜಯ್, ಚುನಾವಣೆ ತಯಾರಿ?]
17 ಮಕ್ಕಳ ಕಳ್ಳ ಸಾಗಣೆ
ಸರಿಯಾಗಿ ಒಂದು ತಿಂಗಳ ಹಿಂದೆ ಇದೇ ಮಕ್ಕಳ ಕಳ್ಳ ಸಾಗಣೆ ಪ್ರಕರಣದಲ್ಲಿ ಚಂದನ ಚಕ್ರವರ್ತಿಯನ್ನು ಬಂಧಿಸಲಾಗಿತ್ತು. ಚಂದನ ಜಲ್ಪಗುರಿಯಲ್ಲಿರುವ ಮಕ್ಕಳನ್ನು ದತ್ತು ತೆಗೆದುಕೊಳ್ಳುವ 'ಬಿಮಲಾ ಶಿಶು ಗೃಹ'ದ ಅಧ್ಯಕ್ಷೆಯಾಗಿದ್ದಾರೆ. ಈಕೆಯನ್ನು ಮುಖ್ಯ ದತ್ತು ಅಧಿಕಾರಿ ಸೊನಾಲಿ ಮೊಂಡಲ್ ಜತೆ ಬಂಧಿಸಲಾಗಿತ್ತು. ಇವರಿಬ್ಬರು 17 ಮಕ್ಕಳನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ನಂತರ ಮನಾಸ್ ಭೌಮಿಕ್ ಹಾಗೂ ಈಗ ಜೂಹಿ ಚೌಧರಿಯಮನ್ನು ಸಿಐಡಿ ಬಂಧಿಸಿದೆ.[ಚಪ್ಪಲಿಯಿಂದ ಹೊಡೆಯಬೇಕೆಂದಿದ್ದ ಸಚಿವ ಖಾದರ್ ಕ್ಷಮೆಯಾಚನೆ]
ಜೂಹಿಯದ್ದೇ ತಪ್ಪು
ಚಂದನ ಚಕ್ರವರ್ತಿ ಹೇಳಿಕೆ ನೀಡಿದ್ದು, ಕಳೆದ ಮೂರು ವರ್ಷಗಳಿಂದ ಮಕ್ಕಳ ದತ್ತು ಕೇಂದ್ರದ ಜತೆ ಜೂಹಿ ಚೌಧರಿ ಕೈಜೋಡಿಸಿದ್ದಾರೆ. ಏನಾದರೂ ತಪ್ಪು ಮಾಡಿದ್ದರೆ ಅದು ಆಕೆ ಮಾಡಿದ್ದು; ನಾನಲ್ಲ. ನನಗೂ ಇದಕ್ಕೂ ಸಂಬಂಧ ಇಲ್ಲ," ಮಂಗಳವಾರ ಹೇಳಿದ್ದಾರೆ.
ಬಿಜೆಪಿ ನಾಯಕರೂ ಭಾಗಿ?
ದೆಹಲಿಗೆ ಚೌಧರಿ ಜತೆ ನಾನು ತೆರಳುತ್ತಿದ್ದೆ. ಆದರೆ ನಾನು ಬೇರೆ ಕೋಣೆಯಲ್ಲಿದ್ದಾಗ ಚೌಧರಿ ಬಿಜೆಪಿ ನಾಯಕರ ಜತೆ ಡೀಲ್ ಕುದುರಿಸುತ್ತಿದ್ದರು. ಆಕೆ ನನ್ನ ಎಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ನಾನು ಯಾರ ಜತೆಗೂ ಮಾತುಕತೆ ನಡೆಸಿಲ್ಲ. ಆದರೆ ಆಕೆ ರೂಪಾ ಗಂಗೂಲಿ ಹಾಗೂ ಕೈಲಾಶ್ ವಿಜಯವರ್ಗಿಯ (ಇಬ್ಬರೂ ಬಿಜೆಪಿ ನಾಯಕರು) ಜತೆ ಮಾತುಕತೆ ನಡೆಸಿದ್ದಾರೆ. ಆಗ ನಾನು ಬೇರೆ ಕೋಣೆಯಲ್ಲಿದ್ದೆ ಎಂದು ಚಂದನ ಚಕ್ರವರ್ತಿ ಹೇಳಿದ್ದಾರೆ.
ದಿಲೀಪ್ ಘೋಷ್ ಹೇಳುವುದೇನು?
ನಾವು ಮುಗ್ಧರು ಮಾತ್ರವಲ್ಲ ತನಿಖೆಗೆ ಸಹಕಾರ ನೀಡುವುದಾಗಿಯೂ ಚಂದನ ಹೇಳಿದ್ದಾರೆ. ಜತೆಗೆ ಚೌಧರಿಯನ್ನು ರಾಜಕೀಯ ಷಡ್ಯಂತ್ರದ ಮೂಲಕ ಕೆಡವಲಾಗಿದೆ ಎಂಬ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಆರೋಪವನ್ನೂ ತಳ್ಳಿ ಹಾಕಿದ್ದಾರೆ.
ಈ ಹಿಂದೆ ದಿಲೀಪ್ ಘೋಷ್, " ಜೂಹಿ ಅವರ (ಮಕ್ಕಳ ದತ್ತು ಕೇಂದ್ರದ) ಸಮಿತಿಯಲ್ಲಿ ಇರಲಿಲ್ಲ. ದೆಹಲಿಗೆ ಆಕೆ (ಚಕ್ರವರ್ತಿ) ಯ ಜತೆ ಹೋಗಿದ್ದಕ್ಕೆ ಚೌಧರಿಯನ್ನು ಕೇಸಿನಲ್ಲಿ ಸಿಲುಕಿಸಲಾಗಿದೆ," ಎಂದು ಘೋಷ್ ಹೇಳಿದ್ದರು.
ರೂಪಾ ಗಂಗೂಲಿ ಏನು ಹೇಳ್ತಾರೆ?
ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಿ ಕಾರ್ಯದರ್ಶಿ ರೂಪಾ ಗಂಗೂಲಿಯ ಹೆಸರೂ ಕೇಳಿ ಬಂದಿದ್ದು ಆಕೆ ನಾವು ಈ ಪ್ರಕರಣದಿಂದ ಹೆದರುವುದಿಲ್ಲ ಎಂದು ಹೇಳಿದ್ದಾರೆ. "ನನ್ನನ್ನು ಪ್ರಕರಣದಲ್ಲಿ ಸಿಲುಕಿಸಲೆಂದೇ ಇಷ್ಟೆಲ್ಲಾ ಪ್ರಯತ್ನಪಡಲಾಗುತ್ತಿದೆ. ಆಕೆ (ಜೂಹಿ ಚೌಧರಿ) ಕೇವಲ ದಾಳ ಮಾತ್ರ. ಇದರಿಂದ ನಾನೇನೂ ಹೆದರುವುದಿಲ್ಲ," ಎಂದಿದ್ದಾರೆ.