ಉತ್ತರ ಬಂಗಾಳ, ಸಿಕ್ಕಿಂನಲ್ಲಿ ಭಾರೀ ಮಳೆ, ಭೂಕುಸಿತ ಸಾಧ್ಯತೆ: IMD ಎಚ್ಚರಿಕೆ
ನವದೆಹಲಿ, ಜೂನ್ 18: ನೈಋತ್ಯ ಮುಂಗಾರು ಶನಿವಾರ ಮತ್ತಷ್ಟು ಮುಂದುವರೆದಿದ್ದು, ಕೋಲ್ಕತ್ತಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ, ಹೂಗ್ಲಿ, ಹೌರಾ ಮತ್ತು ಪೂರ್ವ ಮಿಡ್ನಾಪುರದಂತಹ ಜಿಲ್ಲೆಗಳನ್ನು ಒಳಗೊಂಡಂತೆ ದಕ್ಷಿಣ ಬಂಗಾಳದ ಪ್ರಮುಖ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ದೇಶದಲ್ಲಿ ಹಲವೆಡೆ ಮುಂಗಾರು ಆರಂಭವಾಗಿದೆ. ಅಸ್ಸಾಂನಲ್ಲಿ ಮಳೆಯಿಂದಾಗಿ ಹಲವಾರು ಪ್ರದೇಶಗಳು ಮುಳುಗಡೆಯಾಗಿದೆ. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ದೆಹಲಿಯಲ್ಲೂ ತಾಪಮಾನ ಇಳಿಕೆಯಾಗಿದೆ.
ಅಸ್ಸಾಂನಲ್ಲಿ ಮಳೆಗೆ 54 ಸಾವು- ಬೆಂಗಳೂರಿಗೆ ಮುಂಗಾರು- ದೆಹಲಿಯಲ್ಲಿ ಮಳೆ
ಭಾರತೀಯ ಹವಾಮಾನ ಇಲಾಖೆಯು ಉತ್ತರ ಬಂಗಾಳದಲ್ಲಿ ವಾರಾಂತ್ಯದಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಭೂಕುಸಿತ ಮತ್ತು ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುವ ಭೀತಿಯನ್ನು ಹೆಚ್ಚಿಸಿದೆ. ಸಿಕ್ಕಿಂನ ಅಧಿಕಾರಿಗಳು ಉತ್ತರ ಭಾಗದ, ಹಿಮಾಲಯ ರಾಜ್ಯದ ಕೆಲವು ಜನಪ್ರಿಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡದಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಪ್ರವಾಸಿಗರು ಮಳೆಯಿಂದ ತೊಂದರೆಗೆ ಸಿಲುಕಿದ್ದಾರೆ.
ಉತ್ತರ ಸಿಕ್ಕಿಂನ ಲಾಚೆನ್ ಮತ್ತು ಲಾಚುಂಗ್ನಂತಹ ಕೆಲವು ಜನಪ್ರಿಯ ಪ್ರವಾಸಿ ತಾಣಗಳಾದ ಯುಮ್ತಾಂಗ್ ಮತ್ತು ಗುರುಡೊಂಗ್ಮಾರ್ನಲ್ಲಿ ಸಿಲುಕಿಕೊಂಡಿದ್ದ ನೂರಾರು ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಕ್ಕಿಂನಲ್ಲಿ ಅತ್ಯಧಿಕ ಮಳೆ
"ಲಾಚೆನ್ ಮತ್ತು ಲಾಚುಂಗ್ನಂತಹ ಸ್ಥಳಗಳಲ್ಲಿ ಸಿಕ್ಕಿಬಿದ್ದ ಎಲ್ಲಾ ಪ್ರವಾಸಿಗರನ್ನು ಗ್ಯಾಂಗ್ಟಾಕ್ನಂತಹ ಸುರಕ್ಷಿತ ಸ್ಥಳಗಳಿಗೆ ಕರೆತರಲಾಗಿದೆ. ಆದಾಗ್ಯೂ, ಝೊಂಗೊ, ಚುಂಗ್ಥಾಂಗ್, ಲಾಚೆನ್, ಲಾಚುಂಗ್ ಮತ್ತು ದಿಕ್ಚು ಸ್ಥಳಗಳಲ್ಲಿ ಪ್ರಮುಖ ಭೂಕುಸಿತಗಳು ಸಂಭವಿಸಿರುವುದರಿಂದ ರಾಜ್ಯದ ಮೇಲ್ಭಾಗದ ರಸ್ತೆ ಪರಿಸ್ಥಿತಿಗಳು ತುಂಬಾ ಕೆಟ್ಟದಾಗಿದೆ, "ಎಂದು ಸಿಕ್ಕಿಂನ ಮಂಗನ್ ಜಿಲ್ಲೆಯ ಜಿಲ್ಲಾಧಿಕಾರಿ ಎಬಿ ಕರ್ಕಿ ತಿಳಿಸಿದ್ದಾರೆ.
2020 ಮತ್ತು 2021 ಕ್ಕೆ ಹೋಲಿಸಿದರೆ ಜೂನ್ 1 ಮತ್ತು ಜೂನ್ 16 ರ ನಡುವೆ ಗ್ಯಾಂಗ್ಟಾಕ್ನಲ್ಲಿ ದಾಖಲಾದ ಮಳೆಯ ಪ್ರಮಾಣವು ಈ ವರ್ಷ ಅತ್ಯಧಿಕವಾಗಿದೆ. ಈ ವರ್ಷ ಸಿಕ್ಕಿಂನ ರಾಜಧಾನಿಯಲ್ಲಿ 632.5 ಮಿಮೀ ಮಳೆಯಾಗಿದೆ. 2020ರಲ್ಲಿ 232.1 ಮಿಮೀ ಮತ್ತು 2021 ರಲ್ಲಿ 486.6 ಮಿಮೀ ಮಳೆ ಪ್ರಮಾಣ ದಾಖಲಾಗಿತ್ತು.
ಹಲವೆಡೆ ಭೂಕುಸಿತದ ಎಚ್ಚರಿಕೆ
ಉತ್ತರ ಬಂಗಾಳದ ಜಿಲ್ಲೆಗಳಲ್ಲಿಯೂ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದೆ. ಅಲಿಪಿರ್ದಾರ್ ಜಿಲ್ಲೆಯ ಬಕ್ಸಾದುವಾರ್ ಮತ್ತು ಹಸಿಮಾರಾ ಮುಂತಾದ ಕೆಲವು ಸ್ಥಳಗಳಲ್ಲಿ 24 ಗಂಟೆಗಳಲ್ಲಿ ಸುಮಾರು 350 ಮಿಮೀ ಮತ್ತು 230 ಮಿಮೀ ಮಳೆಯಾಗಿದೆ. ಹಲವೆಡೆ 50 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
"ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಸೇರಿದಂತೆ ಪಶ್ಚಿಮ ಬಂಗಾಳದ ಉಪ ಹಿಮಾಲಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಬಹುದು. ಭಾರತೀಯ ಹವಾಮಾನ ಇಲಾಖೆ (IMD) ತನ್ನ ಬುಲೆಟಿನ್ನಲ್ಲಿ, ಬೆಟ್ಟಗಳಲ್ಲಿ ಭೂಕುಸಿತಗಳು ಸಂಭವಿಸಬಹುದು ಮತ್ತು ತೀಸ್ತಾ, ಜಲ್ಧಾಕಾ, ಸಂಕೋಶ್ ಮತ್ತು ತೋರ್ಸಾದಂತಹ ನದಿಗಳಲ್ಲಿ ನೀರಿನ ಮಟ್ಟವು ಮತ್ತಷ್ಟು ಹೆಚ್ಚಾಗಬಹುದು" ಎಂದು ಕೋಲ್ಕತ್ತಾದ ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವು ತಗ್ಗುಪ್ರದೇಶಗಳು ಜಲಾವೃತ
ಶನಿವಾರ ಮಧ್ಯಾಹ್ನದವರೆಗೆ ಭಾರೀ ಮಳೆಯಿಂದಾಗಿ ಯಾವುದೇ ದೊಡ್ಡ ಹಾನಿಯ ವರದಿಯಾಗಿಲ್ಲ ಎಂದು ಡಾರ್ಜಿಲಿಂಗ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್.ಪೂನಂಬಲಂ ಹೇಳಿದ್ದಾರೆ. ತೊರ್ಸಾ ಮತ್ತು ಕಲ್ಜಾನಿಯಂತಹ ಕೆಲವು ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ಮತ್ತು ಅಲಿಪುರ್ದೂರ್ ಮತ್ತು ಕೂಚ್ ಬೆಹಾರ್ ಜಿಲ್ಲೆಗಳಲ್ಲಿ ಕೆಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ.
"ಪರಿಸ್ಥಿತಿಗಳು ಅನುಕೂಲಕರವಾಗಿವೆ ಮತ್ತು ಮಾನ್ಸೂನ್ ಮುಂದಿನ ಎರಡು ಮೂರು ದಿನಗಳಲ್ಲಿ ಪಶ್ಚಿಮ ಬಂಗಾಳದ ಉಳಿದ ಭಾಗಗಳನ್ನು ಆವರಿಸುವ ಸಾಧ್ಯತೆಯಿದೆ" ಎಂದು ಕೋಲ್ಕತ್ತಾದ ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿಯ ವಿಜ್ಞಾನಿ ಜಿಕೆ ದಾಸ್ ಹೇಳಿದ್ದಾರೆ.
ಕರ್ನಾಟಕದಲ್ಲೂ ಅಧಿಕ ಮಳೆ ಸಾಧ್ಯತೆ
ಕರ್ನಾಟಕದಲ್ಲೂ ಮುಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಶನಿವಾರ ಸಂಜೆಯಿಂದ ನಾಳೆಯವರೆಗೂ ಮಲೆನಾಡು ಮತ್ತು ಕರಾವಳಿಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯನ್ನು ಕೆಎಸ್ಎನ್ಡಿಎಂಸಿ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆ, ಮಲೆನಾಡಿನಾದ್ಯಂತ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.
ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಬಾರಿ ಮುಂಗಾರು ಎಂದಿಗಿಂತ ಸ್ವಲ್ಪ ಮುಂಚೆಯೇ ಆರಂಭವಾಗಿದ್ದು, ರೈತರಿಗೆ ಸಂತಸ ತಂದಿದೆ.