ದೆಹಲಿಯಲ್ಲಿ ಮೊದಲ ದಿನವೇ ಮುಂಗಾರು ಆರ್ಭಟ: ರಸ್ತೆಗಳು ಜಲಾವೃತ, ವಿಮಾನ ಮಾರ್ಗ ಬದಲು
ನವದೆಹಲಿ, ಜೂನ್ 30: ಅಧಿಕ ತಾಪಮಾನದಿಂದ ಕಂಗಾಲಾಗಿದ್ದ ದೆಹಲಿಗೆ ಕೊನೆಗೂ ಮುಂಗಾರು ಆಗಮಿಸಿದೆ. ಮುಂಗಾರು ಆಗಮನದ ಮೊದಲ ದಿನವೇ ಆರ್ಭಟಿಸಿದೆ. ನಗರದಲ್ಲಿ ಸುರಿದ ಭಾರಿ ಮಳೆಗೆ ಜನ ತತ್ತರಿಸಿದರು.
ಗುರುವಾರ ಬೆಳಿಗ್ಗೆ ಮಳೆ ಸುರಿದ ನಗರದ ಭಾಗಗಳಲ್ಲಿ ಕೈಲಾಶ್ನ ಪೂರ್ವ, ಬುರಾರಿ, ಶಾಹದಾರ, ಪಟ್ಪರ್ಗಂಜ್, ಐಟಿಒ ಕ್ರಾಸಿಂಗ್, ಇಂಡಿಯಾ ಗೇಟ್, ಬಾರಾಪುಲ್ಲಾ, ರಿಂಗ್ ರೋಡ್, ದೆಹಲಿ-ನೋಯ್ಡಾ ಗಡಿ ಮತ್ತು ದೆಹಲಿ-ಗುರ್ಗಾಂವ್ ರಸ್ತೆಗಳು ಸೇರಿವೆ. ದೆಹಲಿಯ ತಾಪಮಾನ 27.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ದೆಹಲಿಯಲ್ಲಿಂದು ಮುಂಗಾರು ಮಳೆ: ಆರೆಂಜ್ ಅಲರ್ಟ್ ಜಾರಿ
ಬೆಳಗ್ಗೆಯೇ ಸುರಿದ ಮಳೆಯಿಂದಾಗಿ ನಗರದಲ್ಲಿ ತೀವ್ರ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ನಗರದ ಕೆಲವು ಭಾಗಗಳಲ್ಲಿ ರಸ್ತೆಗಳು ಮಳೆ ನೀರಿನಲ್ಲಿ ಮುಳುಗಿದ್ದವು.
ಪ್ರಗತಿ ಮೈದಾನ, ದೆಹಲಿ-ಮೀರತ್ ಎಕ್ಸ್ಪ್ರೆಸ್ ವೇ ವಿನೋದ್ ನಗರ ಬಳಿ, ಪುಲ್ ಪ್ರಹ್ಲಾದಪುರ ಅಂಡರ್ಪಾಸ್, ಡಬ್ಲ್ಯುಎಚ್ಒ ಕಟ್ಟಡದ ಮುಂಭಾಗದ ಐಪಿ ಎಸ್ಟೇಟ್, ಜಖೀರಾ ಫ್ಲೈಓವರ್ ಅಡಿಯಲ್ಲಿ, ಜಹಾಂಗೀರ್ಪುರಿ ಮೆಟ್ರೋ ನಿಲ್ದಾಣ, ಲೋನಿ ರಸ್ತೆ ವೃತ್ತ ಮತ್ತು ಆಜಾದ್ಪುರ ಮಾರುಕಟ್ಟೆ ಅಂಡರ್ಪಾಸ್ ಬಳಿ ನೀರು ನಿಂತಿದೆ. ನೆರೆಯ ಗುರ್ಗಾಂವ್ ಕೂಡ ಜಲಾವೃತವಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳ ರಜೆ ಘೋಷಿಸಿದ ಡಿಸಿ
ವಿಮಾನಗಳ ಮಾರ್ಗ ಬದಲು
ಭಾರೀ ಮಳೆಯಿಂದಾಗಿ ದೆಹಲಿಗೆ ತೆರಳುತ್ತಿದ್ದ ಎರಡು ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಏರ್ ಇಂಡಿಯಾ ವಿಮಾನವನ್ನು ಅಮೃತಸರಕ್ಕೆ ತಿರುಗಿಸಿದರೆ, ಇಂಡಿಗೋ ವಿಮಾನವನ್ನು ಜೈಪುರಕ್ಕೆ ತಿರುಗಿಸಲಾಯಿತು.
ಹಲವಾರು ಇತರ ವಿಮಾನಗಳ ಸೇವೆಯಲ್ಲೂ ವಿಳಂಬವಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ವಿಮಾನದ ಸ್ಥಿತಿಯ ಮೇಲೆ ಟ್ಯಾಬ್ ಇರಿಸಿಕೊಳ್ಳಲು ಮತ್ತು ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ವರದಿ ಮಾಡಲು ಸಾಕಷ್ಟು ಸಮಯ ಇರಿಸಿಕೊಳ್ಳಲು ಕೇಳಿಕೊಂಡಿದೆ.
ಕೆಟ್ಟ ಹವಾಮಾನದಿಂದಾಗಿ ಎಲ್ಲಾ ವಿಮಾನಗಳ ನಿರ್ಗಮನಗಳು ಮತ್ತು ಆಗಮನದ ಸಮಯದಲ್ಲಿ ವ್ಯತ್ಯಾಸ ಆಗಬಹುದು ಎಂದು ಸ್ಪೈಸ್ ಜೆಟ್ ಹೇಳಿದೆ.
ಟ್ರಾಫಿಕ್ ಬಗ್ಗೆ ಸಂಚಾರಿ ಪೊಲೀಸರ ಎಚ್ಚರಿಕೆ
"ಭಾರತೀಯ ಹವಾಮಾನ ಇಲಾಖೆ ವರದಿಯ ಪ್ರಕಾರ, ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿಗುಡುಗು ಸಹಿತ ಭಾರಿ ಮಳೆ ಮತ್ತು ಬಿರುಗಾಳಿ ಬೀಸುವ ಸಂಭವ ಇದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಸೂಚಿಸಲಾಗಿದೆ" ಎಂದು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಗುರುವಾರ ಬೆಳಿಗ್ಗೆಯೇ ಸುರಿದ ಮಳೆಯಿಂದಾಗಿ ದೆಹಲಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಚೇರಿಗೆ ತೆರಳುವ ಉದ್ಯೋಗಿಗಳು ಟ್ರಾಫಿಕ್ನಲ್ಲಿ ಸಿಲುಕಿ ಕಿರಿ ಕಿರಿ ಅನುಭವಿಸಿದರು.
ಶುಕ್ರವಾರವೂ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ (IMD), ಗುರುವಾರ ಬೆಳಿಗ್ಗೆ ಟ್ವೀಟ್ನಲ್ಲಿ ನೈಋತ್ಯ ಮಾನ್ಸೂನ್ ಮುಂದುವರೆಯುವುದನ್ನು ದೃಢಪಡಿಸಿದೆ. ಗುರುವಾರ ನಗರದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದ್ದು ಶುಕ್ರವಾರ ಸಾಧಾರಣ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ದೆಹಲಿಯ ಗರಿಷ್ಠ ತಾಪಮಾನವು 34-35 ಡಿಗ್ರಿ ಸೆಲ್ಸಿಯಸ್ಗೆ ಕಡಿಮೆಯಾಗಿದೆ.
ಅಧಿಕ ತಾಪಮಾನದಿಂದ ಬೆಂದಿದ್ದ ದೆಹಲಿ ನಗರಕ್ಕೆ ಕೊನೆಗೂ ವರುಣನ ಆಗಮನವಾಗಿದೆ. ಇದರಿಂದ ರಾಜಧಾನಿಯಲ್ಲಿ ತಾಪಮಾನವೂ ಕಡಿಮೆಯಾಗಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.
ಉತ್ತರದ ಹಲವು ರಾಜ್ಯಗಳಲ್ಲಿ ಮಳೆ
"ನೈಋತ್ಯ ಮಾನ್ಸೂನ್ ಇಡೀ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನದ ಕೆಲವು ಭಾಗಗಳು, ಸಂಪೂರ್ಣ ದೆಹಲಿ, ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಗುರುವಾರ ಭಾರಿ ಮಳೆಯಾಗುತ್ತದೆ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಆರಂಭದ ಮೊದಲ 10 ದಿನ ಉತ್ತಮ ಮಳೆಯಾಗುತ್ತದೆ ಮತ್ತು ದೆಹಲಿಯಲ್ಲಿ ಮಳೆ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
Recommended Video