ಇನ್ನೂ ಎರಡು ದಿನ ಅಬ್ಬರಿಸಲಿದೆ ಚಂಡಮಾರುತ
ನವದೆಹಲಿ, ಮೇ 14: ಸರಿಸುಮಾರು ಒಂದು ವಾರದಿಂದ ನಡುಗಿಸುತ್ತಿರುವ ಮಳೆ, ಬಿರುಗಾಳಿ, ಗುಡುಗು, ಮಿಂಚಿನ ಆರ್ಭಟ ಇನ್ನೂ ಎರಡು ದಿನ ಮುಂದುವರಿಯಲಿದೆ.
ಉತ್ತರ ಭಾರತ, ಈಶಾನ್ಯ ಭಾರತ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ಚಂಡಮಾರುತದ ಅಬ್ಬರ ಜೋರಾಗಿದೆ. ದಿನವೂ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಈ ವಾತಾವರಣ ಮಂಗಳವಾರದವರೆಗೂ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು: ಭಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿ ವೃದ್ಧೆ ಸಾವು
ಉತ್ತರ ಭಾರತದಲ್ಲಿ ಭಾನುವಾರ ಗುಡುಗು ಸಿಡಿಲು ಸಹಿತ ಮಳೆ ಮತ್ತು ಬಿರುಗಾಳಿ ಸುಮಾರು 60 ಮಂದಿಯನ್ನು ಬಲಿ ತೆಗೆದುಕೊಂಡಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ.
ನಾಲ್ಕು ರಾಜ್ಯಗಳಲ್ಲಿ ಬಿರುಗಾಳಿ, ಮಳೆ ಅನಾಹುತ ಉಂಟುಮಾಡಿದೆ. ಉತ್ತರ ಪ್ರದೇಶ ಒಂದರಲ್ಲೇ 38 ಮಂದಿ ಜೀವ ಕಳೆದುಕೊಂಡಿದ್ದಾರೆ. ಕೆಲವಡೆ ಮನೆಗಳು ನೆಲಕಚ್ಚಿವೆ. ಮರಗಳು ಬೇರು ಸಹಿತ ಧರೆಗುರುಳಿವೆ. ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿದುಹೋಗಿವೆ.
ಭಾನುವಾರ ಸಂಜೆ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ 70ಕ್ಕೂ ಅಧಿಕ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ದೆಹಲಿ ಮತ್ತು ಉಪನಗರಗಳಲ್ಲಿ ರೈಲು, ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಉತ್ತರ ಪ್ರದೇಶದ ಸಾಂಭಾಲ್ ಎಂಬಲ್ಲಿ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿ ಉರಿದು ಸುಮಾರು 100 ಮನೆಗಳು ಆಹುತಿಯಾಗಿವೆ. ಆಂಧ್ರಪ್ರದೇಶದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಮಥುವಾದಲ್ಲಿ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರ ಬೆಂಗಾವಲು ಪಡೆಯ ವಾಹನದ ಮೇಲೆ ಮರವೊಂದು ಉರುಳಿಬಿದ್ದಿದೆ. ರಾಜ್ಯದಲ್ಲಿಯೇ 12 ದಿನಗಳಲ್ಲಿ 102 ಮಂದಿ ಚಂಡಮಾರುತದ ಆಕ್ರೋಶಕ್ಕೆ ಜೀವಕಳೆದುಕೊಂಡಿದ್ದಾರೆ.