ವಿವಾದ : ಕಾಂಡೋಮ್ ಬದಲು ನೈತಿಕ ಮೌಲ್ಯ ಧರಿಸಿ
ಬೆಂಗಳೂರು, ಜೂ. 25 : "ಏಡ್ಸ್ ಮಹಾಮಾರಿಯ ವಿರುದ್ಧ ಹೋರಾಡಲು ನೈತಿಕ ಮೌಲ್ಯವನ್ನು ಧರಿಸಬೇಕೇ ಹೊರತು ಬರೀ ಕಾಂಡೋಮ್ ಧರಿಸಿದರೆ ಏಡ್ಸ್ ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ (ಇಎನ್ಟಿ ನಿಪುಣ) ಹೇಳಿರುವುದು ಭಾರೀ ವಿವಾದಕ್ಕೆ ಮತ್ತು ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ನ್ಯೂಯಾರ್ಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಡಾ. ಹರ್ಷವರ್ಧನ್ ಅವರು, "ಏಡ್ಸ್ ವಿರುದ್ಧದ ಅಭಿಯಾನದಲ್ಲಿ ಕಾಂಡೋಮ್ ಬಳಸುವಿಕೆಯ ಕುರಿತು ಹೆಚ್ಚಿನ ಒತ್ತಡ ತರುವ ಅಗತ್ಯವಿಲ್ಲ. ಕಾಂಡೋಮ್ ಬಳಸುತ್ತಿರುವವರೆಗೆ ಅನೈತಿಕ ಸಂಬಂಧ ಇರಿಸಿಕೊಳ್ಳುವುದು ಸರಿ ಎಂಬ ಇದು ತಪ್ಪು ಸಂದೇಶವನ್ನು ಸಾರುತ್ತದೆ" ಹೇಳಿಕೆ ನೀಡಿದ್ದರು. [ಸಂದರ್ಶನ ಇಲ್ಲಿದೆ]
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ಎನ್ಎಸಿಓ)ಗೆ ಡಾ. ಹರ್ಷವರ್ಧನ್ ಅವರು, ಏಡ್ಸ್ ತಡೆಗಟ್ಟಲು ಕಾಂಡೋಮ್ ಬಳಕೆಯ ಬಗ್ಗೆ ಹೆಚ್ಚಿನ ಒತ್ತಡ ತರುವ ಬದಲು, ನೈತಿಕತೆಯ ಪಾಠವನ್ನು ಜನರಿಗೆ ನೀಡಬೇಕು ಎಂದು ಆದೇಶ ನೀಡಿದ್ದಾರೆ. ಜನರಿಗೆ ನೈತಿಕತೆಯ ಪಾಠದ ಅಗತ್ಯವಿದೆ ಎಂದು ಎನ್ಎಸಿಓದ ಮುಖ್ಯಸ್ಥ ವಿಕೆ ಸುಬ್ಬುರಾಜ್ ಅವರು ಕೂಡ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಇದು ನರೇಂದ್ರ ಮೋದಿಯವರ ಕಾಂಡೋಮ್ ಅಭಿಯಾನಕ್ಕೆ ತದ್ವಿರುದ್ಧವಾಗಿದೆ. 2006ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಏಡ್ಸ್ ರೋಗ ಮತ್ತು ಎಚ್ಐವಿ ಸೋಂಕು ನಿಯಂತ್ರಿಸಲು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಬಳಕೆಯ ಬಗ್ಗೆ ಅಭಿಯಾನ ಆರಂಭಿಸಿದ್ದರು.
ಟ್ವಿಟ್ಟರ್ ನಲ್ಲಿ ಹರ್ಷವರ್ಧನ್ ವಿರುದ್ಧ ಚರ್ಚೆ
ಡಾ. ಹರ್ಷವರ್ಧನ್ ಅವರ ಮಾತಿನ ಹಿಂದಿನ ಕಾಳಜಿ ಅಥವಾ ಮರ್ಮ ಏನೇ ಇರಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಭಾರೀ ಚರ್ಚೆಗೆ ಅನುವುಮಾಡಿಕೊಟ್ಟಿದೆ. ಕೆಲವರು ಹರ್ಷವರ್ಧನ್ ಅವರನ್ನು ಹಿಗ್ಗಾಮುಗ್ಗಾ ಜಾಡಿಸುತ್ತಿದ್ದರೆ, ಕೆಲವರು 'ಇಪ್ಪತ್ತೊಂದನೇ ಶತಮಾನಕ್ಕೆ ಬನ್ನಿ ಡಾಕ್ಟ್ರೇ' ಎಂದು ಕಾಲೆಳೆದಿದ್ದಾರೆ.
|
ಇವರು ವೈದ್ಯರು ಮತ್ತು ಆರೋಗ್ಯ ಸಚಿವರು!
ಇವರು ವೈದ್ಯರು ಮತ್ತು ಆರೋಗ್ಯ ಸಚಿವರು ಎಂದು ಟ್ವಿಟ್ಟಿಗರೊಬ್ಬರು ಹರ್ಷವರ್ಧನ್ ಅವರ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ.
|
ಆರೋಗ್ಯ ಸಚಿವರಲ್ಲಿ ಅಲೋಕ್ ನಾಥ್ ಇದ್ದಾರೆಯೆ?
ಆರೋಗ್ಯ ಸಚಿವರಲ್ಲಿ ಅಲೋಕ್ ನಾಥ್ ಇದ್ದಾರೆಯೆ? ಎಂದಿದ್ದಾರೆ ಸಂಜಯ್ ಶರ್ಮಾ.
|
ಹರ್ಷವರ್ಧನ್ ಬೆಂಬಲಕ್ಕೆ ಬಂದ ಗೀತಿಕಾ
ಕಾಂಡೋಮ್ ಬಳಕೆಯ ವಿರುದ್ಧ ಹರ್ಷವರ್ಧನ್ ಹೇಳಿಕೆ ನೀಡಿಲ್ಲ. ಆದರೆ, ಕಾಂಡೋಮ್ ಬಳಕೆಯಿಂದಲೇ ಏಡ್ಸ್ ತಡೆಗಟ್ಟುವುದು ಅಸಾಧ್ಯ ಎಂದಷ್ಟೇ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ?
|
ಹೀಗೊಬ್ಬರು ಏನು ಸಲಹೆ ನೀಡಿದ್ದಾರೆ ಓದಿರಿ
ಡಾ. ಹರ್ಷವರ್ಧನ್ ಹೇಳಿಕೆಯಿಂದ ಅಸಂತುಷ್ಟರಾದವರಿಗೆ ನನ್ನ ಸಲಹೆ. ನಿಮ್ಮ ಯುವ ಮಗ ಮತ್ತು ಮಗಳಿಗೆ ಕಾಂಡೋಮ್ ಅನ್ನು ಉಡುಗೊರೆಯಾಗಿ ನೀಡಿರಿ ನೋಡೋಣ?
|
ಹರ್ಷವರ್ಧನ್ ಗೆ ಸ್ನೇಹ ಸಂದೇಶ ಹೋಗಲಿದೆ
ಡಾ. ಹರ್ಷವರ್ಧನ್ ಅವರಿಗೆ ಎನ್ ಡಿ ತಿವಾರಿ ಮತ್ತು ದಿಗ್ವಿಜಯ್ ಸಿಂಗ್ ಅವರ ಸ್ನೇಹ ಸಂದೇಶ ಸದ್ಯದಲ್ಲೇ ಹೋಗಲಿದೆ.
|
ಮಾಧ್ಯಮದ ವರದಿಗಳಿಗೆ ಹರ್ಷವರ್ಧನ್ ಅಸಮಾಧಾನ
ಕಾಂಡೋಮ್ ಬಳಕೆ ಕುರಿತಂತೆ ತಾವು ನೀಡಿದ ಹೇಳಿಕೆಯನ್ನು ಮಾಧ್ಯಮ ತಿರುಚುತ್ತಿದೆ ಎಂದು ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.