ನೀರವ್ ಮೋದಿಯ ಹೈ ಪ್ರೊಫೈಲ್ ಗ್ರಾಹಕರಿಗೆ ಐಟಿ ನೋಟಿಸ್
ನವದೆಹಲಿ, ಜುಲೈ 14: ಸದ್ಯಕ್ಕೆ ತಲೆ ತಪ್ಪಿಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯಿಂದ ವಿಪರೀತ ದುಬಾರಿ ಒಡವೆಗಳನ್ನು ಖರೀದಿ ಮಾಡಿದ್ದ ಐವತ್ತು ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಆ ಶ್ರೀಮಂತರ ತೆರಿಗೆ ರಿಟರ್ನ್ಸ್ ಗಳನ್ನು ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಪರಿಶೀಲಿಸುತ್ತಿದೆ. ಈ ಮಾಹಿತಿಯನ್ನು ಅಧಿಕೃತ ಮೂಲಗಳೇ ತಿಳಿಸಿವೆ.
ಎಷ್ಟು ಮಂದಿ ಖರೀದಿ ಮಾಡಿದ್ದಾರೆ ಅನ್ನೋದು ಗೊತ್ತಾದ ಮೇಲೆ, ಯಾರಿಗೆ ಪ್ರಶ್ನೆ ಕೇಳಬೇಕು ಅಂತ ನಿರ್ಧಾರ ಮಾಡಿ, ನೋಟಿಸ್ ಜಾರಿ ಮಾಡಿದ್ದು ಮೊದಲ ಹಂತ. ಆಭರಣ ಖರೀದಿಗೆ ಹಣಕಾಸಿನ ಮೂಲ ಯಾವುದು ಎಂದು ಕೇಳಲಾಗುತ್ತದೆ. ಆ ನಂತರ ನೀರವ್ ಮೋದಿಗೆ ಸೇರಿದ ಸಂಸ್ಥೆಗೆ ಮಾಡಿದ ಯಾವುದೇ ನಗದು ಪಾವತಿಯನ್ನು ಮಾಡಿದ್ದಾರಾ ಎಂಬ ಬಗ್ಗೆ ಕೂಡ ತನಿಖೆ ನಡೆಯುತ್ತದೆ.
ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ ಇಂಟರ್ಪೋಲ್
ಆಯ್ದ ಖರೀದಿದಾರರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಈಗಾಗಲೇ ಇಲಾಖೆಯಿಂದ ಕಲೆಹಾಕಲಾಗಿದೆ. ಈ ಶ್ರೀಮಂತರು ಮಾಡಿದ ವಜ್ರಾಭರಣ ಖರೀದಿಗೆ ಒಟ್ಟು ಪಾವತಿ ಮೊತ್ತವನ್ನು ಸ್ವಲ್ಪ ಚೆಕ್ ಅಥವಾ ಕಾರ್ಡ್ (ಡೆಬಿಟ್/ಕ್ರೆಡಿಟ್) ಮೂಲಕವೂ ನೀಡಲಾಗಿದೆ. ಬಾಕಿ ಮೊತ್ತಕ್ಕೆ ನಗದು ನೀಡಲಾಗಿದೆ.
50ಕ್ಕೂ ಹೆಚ್ಚು ಮಂದಿಯ ಮಾಹಿತಿ ಪರಿಶೀಲನೆ
ಆದರೆ, ನೋಟಿಸ್ ಗೆ ಉತ್ತರ ನೀಡಿದ ಬಹುತೇಕರು ಯಾವುದೇ ನಗದು ಪಾವತಿ ಮಾಡಿಲ್ಲ ಅಂತಲೇ ಹೇಳಿದ್ದಾರೆ. ಆದರೆ ಆದಾಯ ತೆರಿಗೆ ಇಲಾಖೆ ಬಳಿ ಇರುವ ಮಾಹಿತಿ ಜತೆಗೆ ಇದು ತಾಳೆಯಾಗುತ್ತಿಲ್ಲ. ಅಂದರೆ ನೀರವ್ ಮೋದಿ ಸಂಸ್ಥೆಯ ಮಾರಾಟ ದಾಖಲಾತಿಗಳಿಗೆ ತಾಳೆ ಆಗುತ್ತಿಲ್ಲ. ನೀರವ್ ಮೋದಿ ಕಂಪೆನಿಯ ಲೆಕ್ಕಪತ್ರಗಳ ಮಾಹಿತಿ ಪ್ರಕಾರ, ಆಭರಣವನ್ನು ಮಾರಾಟ ಮಾಡಿದ ನಂತರ ಚೆಕ್, ಕಾರ್ಡ್ ಗಳು ಹಾಗೂ ನಗದು ಎಂದು ವಿಂಗಡಿಸಿ ಪಾವತಿ ಮಾಡಿಸಿಕೊಂಡಿದ್ದಾರೆ. ಆ ಗೊಂದಲ ಇರುವ ಕಾರಣಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮತ್ತೊಮ್ಮೆ ಪರಿಶೀಲಿಸುತ್ತಿದೆ ಇಲಾಖೆ. 50ಕ್ಕೂ ಹೆಚ್ಚು ಮಂದಿಯ ಮಾಹಿತಿಯನ್ನು 2014-15ರಿಂದಲೇ ಪರಿಶೀಲಿಸಲಾಗುತ್ತಿದೆ.
ತೆರಿಗೆ ವಂಚಿಸಲಾಗಿದೆ ಎಂಬ ಗುಮಾನಿ
ಪಾವತಿಯಲ್ಲಿ ಹಲವು ರೀತಿಯ ವ್ಯತ್ಯಾಸಗಳು ಗೋಚರಿಸುತ್ತಿವೆ. ಕೆಲವು ಲಕ್ಷಗಳವರೆಗೆ ವ್ಯತ್ಯಾಸ ಆಗ್ತಿದೆ. ಒಂದು ವೇಳೆ ಹಾಗೆ ತೆರಿಗೆ ಕದ್ದಿದ್ದರೆ ಅದಕ್ಕೆ ತಕ್ಕ ದಂಡ ಹಾಗೂ ಆ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ಕೆಲವು ಪ್ರಕರಣಗಳು ಪ್ರಾಥಮಿಕ ತನಿಖೆ ಹಂತದಲ್ಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯೋಗೇಂದ್ರ ಯಾದವ್ ಸಂಬಂಧಿಕರ ಮೇಲೆ ಐಟಿ ದಾಳಿ
ಈಚೆಗೆ ಸ್ವರಾಜ್ ಇಡಿಯಾ ಪಕ್ಷದ ನಾಯಕ ಯೋಗೇಂದ್ರ ಯಾದವ್ ರ ಸಂಬಂಧಿಕರಿಗೆ ಸೇರಿದ ರೆವಾರಿ ಮೂಲದ ಆಸ್ಪತ್ರೆ ಮೇಲೆ ಇಲಾಖೆ ದಾಳಿ ನಡೆಸಿತ್ತು. ಏಕೆಂದರೆ ಅದರ ಮಾಲೀಕರು ನೀರವ್ ಮೋದಿ ಸಂಸ್ಥೆಯಿಂದ ಚಿನ್ನಾಭರಣ ಖರೀದಿ ಮಾಡಿ, ಸ್ವಲ್ಪ ಭಾಗವನ್ನು ನಗದಾಗಿಯೂ ಮತ್ತು ಇನ್ನೊಂದಿಷ್ಟು ಭಾಗವನ್ನು ಚೆಕ್ ಮೂಲಕವೂ ಪಾವತಿ ಮಾಡಿದ್ದರು.
13,400 ಕೋಟಿ ರುಪಾಯಿ ವಂಚನೆ ಆರೋಪ
ತೆರಿಗೆ ವಂಚನೆ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆಯು ಈಗಾಗಲೇ ನೀರವ್ ಮೋದಿ ಮತ್ತಿತರರ ವಿರುದ್ಧ ಮುಂಬೈ ಕೋರ್ಟ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿದ ಮೊತ್ತ 13,400 ಕೋಟಿ ರುಪಾಯಿ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪತ್ತೆ ಮಾಡಿದೆ.