ಬಕ್ರೀದ್ ನಂತರ ಕಾಶ್ಮೀರಿಗಳ ಹತ್ಯೆ : ಉಗ್ರ ಜೈಶ್ ಕಟ್ಟೆಚ್ಚರ
ಬೆಂಗಳೂರು, ಸೆಪ್ಟೆಂಬರ್ 10 : ಭಾರತ ಸರಕಾರಕ್ಕೆ ಬೆಂಬಲ ನೀಡುತ್ತಿರುವ 25 ಕಾಶ್ಮೀರಿಗಳನ್ನು ಬಕ್ರೀದ್ ಹಬ್ಬದ ನಂತರ ಹತ್ಯೆ ಮಾಡುವುದಾಗಿ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ವಿಡಿಯೋ ಮೂಲಕ ಎಚ್ಚರಿಕೆ ನೀಡಿದೆ. ತನ್ನ ಹಿಟ್ ಲಿಸ್ಟ್ ನಲ್ಲಿ 25 ಕಾಶ್ಮೀರಿಗಳ ಹೆಸರನ್ನು ಬಹಿರಂಗಪಡಿಸಿದೆ.
ಆ ಇಪ್ಪತ್ತೈದು ಕಾಶ್ಮೀರಿಗಳ ಪಟ್ಟಿಯಲ್ಲಿ, ಭಾರತೀಯ ಜನತಾ ಪಕ್ಷದೊಡನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ರಚಿಸಿರುವ ಪೀಪಲ್ಸ್ ಪಬ್ಲಿಕ್ ಪಾರ್ಟಿಯ ಐವರು ಸದಸ್ಯರಿದ್ದಾರೆ. ಭಾರತಕ್ಕೆ ನೀಡುತ್ತಿರುವ ಬೆಂಬಲ ಹಿಂತೆಗೆದುಕೊಳ್ಳದಿದ್ದರೆ ಅವರ ಹತ್ಯೆ ನಿಶ್ಚಿತ ಎಂದು ವಿಡಿಯೋದಲ್ಲಿ ಹೇಳಲಾಗಿದೆ. [ಭಯೋತ್ಪಾದನೆಯಿಂದ ದೂರ ಇರೋಕೆ ತಿಂಗಳಿಗೆ ಐನೂರು ಡಾಲರ್]
ಇತ್ತೀಚೆಗೆ ಹತನಾದ ಹಿಜ್ಬುಲ್ ಮುಜಾಹಿದ್ದಿನ್ ತಂಡದ ನಾಯಕ ಬುರ್ಹನ್ ವಾನಿಯ ಹೆಸರನ್ನು ಪ್ರಸ್ತಾಪಿಸಿರುವ, ಮುಖ ಮುಚ್ಚಿಕೊಂಡು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ, ಪಟ್ಟಿಯಲ್ಲಿರುವ ಎಲ್ಲರೂ ಭಾರತದೊಡನೆ ಸಾಹಚರ್ಯವನ್ನು ಕಡಿತಗೊಳ್ಳದಿದ್ದರೆ ಅವರ ಹತ್ಯೆ ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ. ಇದಕ್ಕಾಗಿ ಸೆಪ್ಟೆಂಬರ್ 13ರಂದು ಇರಲಿರುವ ಬಕ್ರೀದ್ ಡೆಡ್ ಲೈನನ್ನು ನೀಡಲಾಗಿದೆ.
ಕಾಶ್ಮೀರದಲ್ಲಿ ಶತ್ರುದೇಶ ಭಾರತ ಕೈಗೊಳ್ಳುತ್ತಿರುವ ಎಲ್ಲ ಕಾರ್ಯಗಳನ್ನು ತಿರಸ್ಕರಿಸಬೇಕಾಗಿ ಕಾಶ್ಮೀರದ ಜನತೆಗೆ ಕರೆ ನೀಡಿರುವ ಉಗ್ರ, ಭಾರತದೊಡನೆ ಸಂಪರ್ಕ ಹೊಂದಿರುವವರು ಕೂಡಲೆ ಅಲ್ಲಾಹುವಿನಲ್ಲಿ ಕ್ಷಮೆ ಕೇಳಬೇಕು ಮತ್ತು ಜೈಶ್-ಇ-ಮೊಹಮ್ಮದ್ ಕೆಲಸಗಳಿಗೆ ಸಹಕಾರ ನೀಡಬೇಕು ಎಂದೂ ಕಾಶ್ಮೀರಿಗಳಿಗೆ ಕಟ್ಟಾಜ್ಞೆ ನೀಡಿದ್ದಾನೆ. [ಬೆಂಗಳೂರು, ಮುಂಬೈನಲ್ಲೂ ಐಎಸ್ ಐಎಸ್ ನಿಂದ ಚಾಕು ದಾಳಿಗೆ ಸ್ಕೆಚ್]