'ಮೋದಿ ಬಡವರಿಂದ ಕಿತ್ತುಕೊಂಡ ದುಡ್ಡನ್ನು ನಾವು ವಾಪಸ್ ಕೊಡ್ತೀವಿ'
ನವದೆಹಲಿ, ಮಾರ್ಚ್ 28: ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಅಪನಗದೀಕರಣವನ್ನು 'ನ್ಯಾಯ್' ಮರುನಗದೀಕರಣ ಮಾಡುತ್ತದೆ. ಕಾಂಗ್ರೆಸ್ ನ ಈ ಬಡತನ ನಿರ್ಮೂಲನೆ ಯೋಜನೆಯು ಬಿಜೆಪಿಯನ್ನು ಒಟ್ಟಾರೆ ಮೂಲೆಗೆ ತಳ್ಳುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ನ್ಯಾಯ್ ಯೋಜನೆಗೆ ಎರಡು ಉದ್ದೇಶವಿದೆ. ಒಂದು: ಭಾರತದಲ್ಲಿರುವ ಶೇಕಡಾ ಇಪ್ಪತ್ತರಷ್ಟು ಕಡು ಬಡವರಿಗೆ ಹಣ ನೀಡುವುದು ಮತ್ತು ಅಪನಗದೀಕರಣದಿಂದ ದೇಶದ ಆರ್ಥಿಕತೆಗೆ ಆಗಿರುವ ಹಾನಿಯನ್ನು ಸರಿಪಡಿಸಿ, ಮರುನಗದೀಕರಣ ಮಾಡುವುದು ಎಂದಿದ್ದಾರೆ.
ಕನಿಷ್ಠ ಆದಾಯ ಯೋಜನೆ ಕಡ್ಲೇಪುರಿ ಹಂಚಿದ ಹಾಗಲ್ಲ; ಇಲ್ಲಿದೆ ಲೆಕ್ಕಾಚಾರ!
ಕಳೆದ ಐದು ವರ್ಷಗಳಲ್ಲಿ ಪ್ರಧಾನಮಂತ್ರಿಗಳು ಆರ್ಥಿಕತೆಯೊಳಗಿನ ಎಲ್ಲ ಹಣವನ್ನು ತೆಗೆದುಹಾಕಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅಪನಗದೀಕರಣ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ ಟಿ) ಕೆಟ್ಟ ರೀತಿಯ ಅನುಷ್ಠಾನ. ಅಸಂಘಟಿತ ವಲಯಗಳಿಗೆ ಭಾರೀ ಪೆಟ್ಟು ಬಿದ್ದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಡವರಿಂದ ಕಸಿದುಕೊಂಡಿದ್ದೇ ಹೊರತು ವಾಪಸ್ ನೀಡಿಲ್ಲ
ನಾವು ಕನಿಷ್ಠ ಆದಾಯ ಯೋಜನೆಗೆ ನ್ಯಾಯ್ ಎಂದು ಹೆಸರು ನೀಡಲು ಕಾರಣವಿದೆ. ಏಕೆಂದರೆ, ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಬಡವರಿಂದ ಬರೀ ಕಸಿದುಕೊಂಡಿದ್ದೇ ಬಂತು, ಏನನ್ನೂ ವಾಪಸ್ ಕೊಟ್ಟಿಲ್ಲ. ರೈತರಿಂದ ಕಸಿದುಕೊಂಡರು, ಸಣ್ಣ-ಮಧ್ಯಮ ಪ್ರಮಾಣದ ವ್ಯಾಪಾರಿಗಳಿಂದ ಕಸಿದರು, ನಿರುದ್ಯೋಗಿ ಯುವಕರಿಂದ ಕಸಿದರು, ಈ ದೇಶದ ತಾಯಂದಿರು ಹಾಗೂ ತಂಗಿಯರ ಉಳಿತಾಯ ಕಸಿದರು. ಈ ದೇಶದ ದಮನಿತರಿಂದ ನರೇಂದ್ರ ಮೋದಿ ಅವರು ಅದೇನು ಕಸಿದುಕೊಂಡರೋ ಅದನ್ನು ನಾವು ವಾಪಸ್ ನೀಡಲು ಬಯಸುತ್ತೇವೆ ಎಂದಿದ್ದಾರೆ.
ಬಿಜೆಪಿಯವರು ಅಡ್ಡಾದಿಡ್ಡಿ ಜಾರಿಗೆ ತಂದ ಯೋಜನೆಗಳಂತೆ ಅಲ್ಲ
ನ್ಯೂನ್ ತಮ್ ಆಯ್ ಯೋಜನಾ (ನ್ಯಾಯ್) ಒಂದು ಬದಲಾವಣೆ. ಬಡತನದ ಮೇಲೆ ನಡೆಸುವ ಅಂತಿಮ ದಾಳಿ. ಆರ್ಥಿಕವಾಗಿಯೂ ಈ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿದೆ. ಅದನ್ನು ಅಪನಗದೀಕರಣ, ಜಿಎಸ್ ಟಿಯನ್ನು ಬಿಜೆಪಿಯವರು ಅಡ್ಡಾದಿಡ್ಡಿ ಜಾರಿಗೆ ತಂದರಲ್ಲ, ಹಾಗೆ ಮಾಡುವುದಿಲ್ಲ. ಈ ಯೋಜನೆಗೆ ಪ್ರತಿ ವರ್ಷ ಮೂರೂವರೆ ಲಕ್ಷ ಕೋಟಿಗೂ ಹೆಚ್ಚು ಮೊತ್ತ ಬೇಕು. ಆರ್ಥಿಕವಾಗಿ ಇದು ಸಾಕಾರ ಆಗುವ ಯೋಜನೆ ಅಲ್ಲ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ ಎಂದು ಕೇಳಿದಾಗ, ಇಲ್ಲ. ಅದು ಸರಿಯಲ್ಲ ಎಂದು ಹೇಳಿದ್ದಾರೆ.
ಈಗಿನ ಸರಕಾರದ ಯೋಜನೆಗಳಿಂದ ಯಾರಿಗೆ ಲಾಭ?
ಕಾಂಗ್ರೆಸ್ ಪಕ್ಷದಿಂದ ಹಲವರು ಅರ್ಥಿಕ ತಜ್ಞರನ್ನು, ಪರಿಣತರನ್ನು ಭೇಟಿ ಮಾಡಿ, ಚರ್ಚಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ಅಧ್ಯಯನ ನಡೆಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಸಾಮಗ್ರಿಗಳನ್ನು ಕಲೆ ಹಾಕಿ, ಕೂಲಂಕಷವಾಗಿ ಚಿತನೆ ನಡೆಸಿ, ಈ ತೀರ್ಮಾನಕ್ಕೆ ಬರಲಾಗಿದೆ. ಲೋಕಸಭೆ ಚುನಾವಣೆಗೆ ಈ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೊದಲಿಗೆ ಮಾದರಿಯೊಂದನ್ನು ಆಲೋಚಿಸಿಯೇ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದೆ. ಈಗ ನಾವು ಘೋಷಣೆ ಮಾಡಿದ ಯೋಜನೆ ವಿರುದ್ಧವಾಗಿ ಮಾತನಾಡುತ್ತಿರುವವರು ಬಂಡವಾಳಶಾಹಿಗಳ ಪರವಾಗಿ ಇರುವವರು. ಈಗಿರುವ ಸರಕಾರದ ಯೋಜನೆಗಳಿಂದ ಯಾರಿಗೆ ಲಾಭವಾಗಿದೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಮೊದಲು ಪ್ರಾಯೋಗಿಕವಾಗಿ ಜಾರಿಗೆ ಬರುತ್ತದೆ
ನಮಗೆ ಆತುರ ಇಲ್ಲ. ಅಪನಗದೀಕರಣ, ಜಿಎಸ್ ಟಿ ಜಾರಿ ಥರ ಆತುರಾತುರ ತೀರ್ಮಾನ ಮಾಡಲ್ಲ. ತಜ್ಞರ ಜತೆ ಚರ್ಚೆ ನಡೆಸಿ, ಆಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೀವಿ. ಈ ಯೋಜನೆಯನ್ನು ಮೊದಲು ಪ್ರಾಯೋಗಿಕವಾಗಿ ತರುತ್ತೇವೆ. ಅದು ಕೂಡ ಯಾವ ರಾಜ್ಯದಲ್ಲಿ ತರಬೇಕು ಎಂದು ತಜ್ಞರು ಹೇಳುತ್ತಾರೋ ಅಲ್ಲಿ ತರುತ್ತೇವೆ. ಯಾವುದೇ ಸಮಸ್ಯೆ ಇಲ್ಲ ಎಂದು ಖಾತ್ರಿ ಆದ ಮೇಲೆ ಇಡೀ ದೇಶದಲ್ಲಿ ಜಾರಿಗೆ ತರುತ್ತೇವೆ. ಫಲಾನುಭವಿಗಳನ್ನು ಗುರುತಿಸುವ ವಿಚಾರದಲ್ಲೂ ಸರಿಯಾದ ಮಾರ್ಗ ಅನುಸರಿಸುತ್ತೇವೆ. ಆಗ ಅರ್ಹ ಫಲಾನುಭವಿಗಳಿಗೆ ಅನುಕೂಲ ದಕ್ಕುತ್ತದೆ ಎಂದಿದ್ದಾರೆ.
ಭಾರತದಿಂದ ಬಡತನ ತೊಲಗಿಸುವುದೇ ಗುರಿ
ಯುಪಿಎ ಸರಕಾರ ಆಡಳಿತ ನಡೆಸಿದ ಹತ್ತು ವರ್ಷದ ಅವಧಿಯಲ್ಲಿ ಒಟ್ಟಾರೆ ಹದಿನಾಲ್ಕು ಕೋಟಿ ಮಂದಿಯನ್ನು ಬಡತನದ ಬಲೆಯಿಂದ ಮೇಲೆತ್ತಿದೆವು. ಈಗ ನಮ್ಮ ಗುರಿ ಬಡತನವನ್ನೇ ಇಲ್ಲದಂತೆ ಮಾಡುವುದು. ಇಂದಿಗೂ ಶೇಕಡಾ ಇಪ್ಪತ್ತರಿಂದ ಇಪ್ಪತ್ತೆರಡರಷ್ಟು ಕುಟುಂಬಗಳು ಬಡತನದಲ್ಲೇ ಬದುಕುತ್ತಿವೆ. ಆ ಪೈಕಿ ಹಲವರನ್ನು ಅಪನಗದೀಕರಣ ಯೋಜನೆ ಹಾಗೂ ಜಿಎಸ್ ಟಿ ಜಾರಿ ಎಂಬುದು ಬಡತನಕ್ಕೆ ನೂಕಿವೆ. ಈಗ ನಮ್ಮ ಗುರಿ ಏನೆಂದರೆ, ಭಾರತದಿಂದಲೇ ಬಡತನವನ್ನು ತೊಲಗಿಸುವುದು. ನ್ಯಾಯ್ ಎಂಬುದು ಬಡತನದ ವಿರುದ್ಧದ ಕೊನೆ ಅಸ್ತ್ರ ಎಂದು ಅವರು ಹೇಳಿದ್ದಾರೆ.