ಕೈ ಕತ್ತರಿಸುತ್ತೇವೆ : ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ!
ಬುರ್ದ್ವಾನ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರ ಉಗ್ರ ಅಭಿಮಾನಿ ಕಾಂಗ್ರೆಸ್ ಕಾರ್ಯರ್ತರಿಗೆ ಕೈ ಕತ್ತರಿಸಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ಜಿ ಅವರ ಪೋಸ್ಟರ್, ಫ್ಲೆಕ್ಸ್ ಗಳಿಗೆ ಹಾನಿ ಮಾಡುವುದಕ್ಕೆ ಈ ರೀತಿ ಉಗ್ರ ಎಚ್ಚರಿಕೆ ನೀಡಿದ್ದಾನೆ.
ಅನುಬ್ರತ್ ಮಂಡಲ್ ಎಂಬ ನಾಯಕ ಈ ರೀತಿ ಉಗ್ರವಾದ ಹೇಳಿಕೆ ನೀಡಿ ವಿವಾದದ ಹುಟ್ಟು ಹಾಕಿದ್ದಾನೆ. ಪಶ್ವಿಮ ಬಂಗಾಳದ ಯಾವುದೇ ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಮಮತಾ ಬ್ಯಾನರ್ಜಿ ಅವರ ಪೋಸ್ಟರ್ ಗಳನ್ನು ಮುಟ್ಟಿದರೆ, ನಮ್ಮ ಕಾರ್ಯಕರ್ತರು ನಿಮ್ಮ ಕೈ ಕಡಿಯುತ್ತಾರೆ ಎಂದು ಬೆದರಿಕೆ ಹಾಕಿದ್ದಾನೆ.
ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಪಶ್ಚಿಮ ಬಂಗಾಳದಲ್ಲಿ ಜಟಾಪಟಿ ನಡೆಯುತ್ತಿದೆ. ಶುಕ್ರವಾರ ಬ್ಯಾನರ್ಜಿ ವಿರುದ್ಧ ಕಾಂಗ್ರೆಸ್ ಕಾರ್ಯರ್ತರು ತೀವ್ರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಟಿಸಿ ಕಾರ್ಯಕರ್ತ ಇಂತಹ ಹೇಳಿಕೆ ನೀಡಿದ್ದಾನೆ.
ಪಶ್ಚಿಮ ಬಂಗಾಳದಲ್ಲಿ ಕಾರ್ಯಕರ್ತನ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಸಿಪಿಎಂ ನಾಯಕ ಬಿಮನ್ ಬೋಸ್ ಮಮತಾ ಬ್ಯಾನರ್ಜಿ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಮೂಲಕ ಪ್ರತಿಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದ್ದರು.
ಕರ್ನಾಟದಲ್ಲಿಯೂ ಕೆಲವು ವರ್ಷಗಳ ಹಿಂದೆ ಕೈ ಕಡಿಯಿರಿ, ನಾಲಿಗೆ ಸೀಳಿ ಎಂದು ಹೇಳುವ ಮೂಲಕ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಭಾರೀ ವಿವಾದ ಹುಟ್ಟುಹಾಕಿದ್ದರು ಮತ್ತು ಅವರ ವಿರುದ್ಧ ನ್ಯಾಯಾಲಯದಲ್ಲಿಯೂ ದೂರು ದಾಖಲಾಗಿತ್ತು.