ಕೇಂದ್ರಕ್ಕೆ ಧಿಕ್ಕಾರ: ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ರೈತರ ತಿರಸ್ಕಾರ
ನವದೆಹಲಿ, ಮಾರ್ಚ್. 01: "ಕೊರೊನಾವೈರಸ್ ಬಗ್ಗೆ ನಮಗೆ ಯಾವುದೇ ಭಯವಿಲ್ಲ. ನಾವು ಕೊವಿಡ್-19 ಲಸಿಕೆಯನ್ನು ತೆಗೆದುಕೊಳ್ಳುವುದಿಲ್ಲ", ಇದು ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಆಕ್ರೋಶದ ಮಾತು.
ದೇಶದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸಲು ಲಸಿಕೆ ವಿತರಣೆಯ 2ನೇ ಅಭಿಯಾನ ಆರಂಭಿಸಲಾಗಿದೆ. ಮಾರ್ಚ್ 01ರಿಂದಲೇ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಈ ಬಾರಿ ಕೊವಿಡ್-19 ಲಸಿಕೆಯನ್ನು ನೀಡಲಾಗುತ್ತಿದೆ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸಾರ್ವಜನಿಕರು ಸಹ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರಿಸಿದರು.
ದೆಹಲಿಯಲ್ಲಿ ದಾರಿ ಗೊತ್ತಿಲ್ಲದ ರೈತರ ಹಾದಿ ತಪ್ಪಿಸಿತಾ ಬಿಜೆಪಿ ಸರ್ಕಾರ!?
ಕೇಂದ್ರ ಸರ್ಕಾರ ಆರಂಭಿಸಿರುವ ಎರಡನೇ ಹಂತದ ಲಸಿಕೆ ಅಭಿಯಾನದಲ್ಲಿ ನಾವು ಭಾಗವಹಿಸುವುದಿಲ್ಲ. ಕೊರೊನಾವೈರಸ್ ಬಗ್ಗೆ ನಮಗೇನೂ ಭಯವಿಲ್ಲ, ನಾವು ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದಿತ ಕೃಷಿ ಕಾಯ್ದೆ ಮತ್ತು ಕೊರೊನಾವೈರಸ್ ಲಸಿಕೆ ಬಗ್ಗೆ ಹಿರಿಯ ರೈತ ಮುಖಂಡರು ಹೇಳಿದ್ದೇನು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಮೂರು ಗಡಿಯಲ್ಲಿ ಪ್ರತಿಭಟನೆ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 97 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.
ಲಸಿಕೆ ಪಡೆಯುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ
ದೇಶದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾವೈರಸ್ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗಿದೆ. ಕೆಲವು ರೈತರು ಲಸಿಕೆ ಪಡೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. ಇನ್ನು, ಕೆಲವು ರೈತ ಮುಖಂಡರು ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಬಿಡುವುದು ಅವರ ವ್ಯಯಕ್ತಿಕ ವಿಚಾರವಾಗಿದೆ ಎಂದು ಹೇಳುತ್ತಿದ್ದಾರೆ.
"ಲಸಿಕೆ ಪಡೆಯದೇ ಕೊರೊನಾವೈರಸ್ ಕೊಲ್ಲುತ್ತೇವೆ"
ಕೊರೊನಾವೈರಸ್ ಲಸಿಕೆ ಪಡೆಯುವುದಕ್ಕಾಗಿ ನಾವು ಕೊವಿಡ್-19 ಲಸಿಕಾ ಕೇಂದ್ರಕ್ಕೆ ಹೋಗುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಮುಖಂಡ 80 ವರ್ಷದ ಬಲ್ಬೀರ್ ಸಿಂಗ್ ರಾಜೇವಾಲಾ ಹೇಳಿದ್ದಾರೆ. "ನಮಗೆ ಲಸಿಕೆಯ ಅಗತ್ಯವಿಲ್ಲ, ನಾವು ಕೊರೊನಾವೈರಸ್ ನ್ನು ಕೊಂದಿದ್ದೇವೆ. ತಮ್ಮ ಜಮೀನುಗಳಲ್ಲಿ ಶ್ರಮವಹಿಸಿ ದುಡುಯುವ ರೈತರಲ್ಲಿ ಕೊರೊನಾವೈರಸ್ ನ್ನು ಕೊಲ್ಲುವ ರೋಗನಿರೋಧಕ ಶಕ್ತಿ ಇರುತ್ತದೆ. ಅಂಥ ರೈತರು ಕೊರೊನಾವೈರಸ್ ಲಸಿಕೆಗೆ ಹೆದರುವುದಿಲ್ಲ" ಎಂದು ರಾಜೇವಾಲ್ ಹೇಳಿದ್ದಾರೆ.
"ನನಗೆ ಬೇಕಾಗಿಲ್ಲ, ಬೇರೆಯವರ ಬಗ್ಗೆ ನಾನು ಹೇಳುವುದಿಲ್ಲ"
ಕೊರೊನಾವೈರಸ್ ಸೋಂಕಿಗೆ ಭಯ ಪಡುವವರಲ್ಲಿ ಹೋರಾಟಕ್ಕೆ ಬೇಕಾಗುವಷ್ಟು ಧೈರ್ಯ ಇರುವುದಿಲ್ಲ ಎಂದು ದೆಹಲಿಯ ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟದ 75 ವರ್ಷ ವಯಸ್ಸಿನ ರೈತ ಮುಖಂಡ ಜೋಗಿಂದರ್ ಸಿಂಗ್ ಉಗ್ರಾಹನ್ ಹೇಳಿದ್ದಾರೆ. ನಮ್ಮ ಧೈರ್ಯವನ್ನು ಕೊವಿಡ್-19 ಸೋಂಕಿನಿಂದ ಅಡಗಿಸಲು ಸಾಧ್ಯವಿಲ್ಲ. ನಾನು ಲಸಿಕೆ ಹಾಕಿಸಿಕೊಳ್ಳುವುದಿಲ್ಲ. ಆದರೆ, ಬೇರೆಯವರಿಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳದಂತೆ ನಾನು ಹೇಳುವುದಿಲ್ಲ ಎಂದು ಜೋಗಿಂದರ್ ಸಿಂಗ್ ಉಗ್ರಾಹಾನ್ ತಿಳಿಸಿದ್ದಾರೆ.
ಕೊರೊನಾ ಲಸಿಕೆಯನ್ನು ರಾಕೇಶ್ ತಿಕೈಟ್ ಪಡೆಯುವುದಿಲ್ಲ
ದೆಹಲಿಯ ಘಾಜಿಪುರ್ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಚದ ಮುಖ್ಯಸ್ಥ ರಾಕೇಶ್ ತಿಕೈಟ್ ಅವರಿಗೆ ಕೊರೊನಾವೈರಸ್ ಲಸಿಕೆ ಹಾಕಿಸಿಕೊಳ್ಳುವ ಅಗತ್ಯವೇನಿಲ್ಲ ಎಂದು ಸಂಘಟನೆಯ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲ್ಲಿಕ್ ತಿಳಿಸಿದ್ದಾರೆ.
ಕೊವಿಡ್-19 ಸೋಂಕಿನ ಬಗ್ಗೆ ನಮಗೇನೂ ಹೆದರಿಕೆಯಿಲ್ಲ
ಕೊರೊನಾವೈರಸ್ ಸೋಂಕಿನ ಬಗ್ಗೆ ನಮಗೇನೂ ಭಯವಿಲ್ಲ. ದೆಹಲಿಯ ಮೂರು ಗಡಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಕಳೆದ 97 ದಿನಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಅಲ್ಲಿ ಒಬ್ಬರೇ ಒಬ್ಬರ ರೈತರಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿಲ್ಲ. ನಾನೂ ಕೂಡಾ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯ ಕುಲ್ವಂತ್ ಸಿಂಗ್ ಸಂಧು ಹೇಳಿದ್ದಾರೆ.