ಗುಜರಾತ್ ಚುನಾವಣೆ ಕಾಂಗ್ರೆಸ್ ಸೋತಿದ್ದಕ್ಕೆ ಈ ಇಬ್ಬರೂ ಕಾರಣ!
Recommended Video
ರಾಜ್ಯದ ಪ್ರಸಿದ್ದ ದೇವಾಲಯಗಳಿಗೆ ಭೇಟಿ ನೀಡಿದರೂ, ಪಾಟೀದಾರ್ ಆಂದೋಲನ ಸಮಿತಿ, ದಲಿತ ಸಂಘಟನೆಗಳ ಜೊತೆ ಕೈಜೋಡಿಸಿದರೂ, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಆರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ.
ಪ್ರಧಾನಿ ಮೋದಿ ಜನಪ್ರಿಯತೆ ಕುಸಿದಿದೆ, ಗ್ರಾಮೀಣ ಭಾಗದಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ, ನೈತಿಕವಾಗಿ ನಾವೇ ಜಯಗಳಿಸಿದ್ದು ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಂಡು ಬಂದರೂ, 'ಸೋಲು ಸೋಲೇ' ಎನ್ನುವ ಸತ್ಯ ಕಾಂಗ್ರೆಸ್ ಮುಖಂಡರಿಗೆ ಕೊನೆಗೂ ಅರಿತಂದಿದೆ.
ಗುಜರಾತ್ ನಲ್ಲಿ ಪ್ರಯಾಸದ ಗೆಲುವು, ರಾಜ್ಯಸಭೆಯಲ್ಲಿ ಬಿಜೆಪಿಗೆ ಹೊಡೆತ
ಗುಜರಾತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದ ಅಂಶವೇನು ಎನ್ನುವುದನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಾರಂಭಿಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪ್ರಕಾರ, ಪಕ್ಷದ ಇಬ್ಬರು ಮುಖಂಡರಿಂದಾಗಿ ಕಾಂಗ್ರೆಸ್ ಸೋಲು ಅನುಭವಿಸಿತು ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ರೇಸಿಗೆ ತೇಲಿಬಂದ ಅಚ್ಚರಿಯ ಹೆಸರು!
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ಹೊರಬಿದ್ದ ಎರಡು ದಿನದ ನಂತರ, ಬುಧವಾರದಿಂದ (ಡಿ 20) ಮೂರು ದಿನಗಳ ಕಾಂಗ್ರೆಸ್ ಮುಖಂಡರ 'ಚಿಂತನ ಮಂಥನ' ಕಾರ್ಯಕ್ರಮ ಆರಂಭವಾಗಿದೆ. ಪಕ್ಷದ ಹಲವು ಮೊದಲ ಪಂಕ್ತಿಯ ನಾಯಕರು ಮೊದಲ ದಿನ ಭಾಗವಹಿಸಿದ್ದಾರೆ.
ಎರಡನೇ ಮತ್ತು ಮೂರನೇ ದಿನ ಎರಡು ರಾಜ್ಯದ ಜಿಲ್ಲಾಮಟ್ಟದ ಮುಖಂಡರು, ಕಾರ್ಯಕರ್ತರು, ಪಕ್ಷದ ಹಿರಿಯ ಮುಖಂಡರಿಗೆ ತಮ್ಮ ಅಭಿಪ್ರಾಯ ಮಂಡಿಸಲು, ಎಐಸಿಸಿ ನೂತನ ಅಧ್ಯಕ್ಷ ರಾಹುಲ್ ಗಾಂಧಿ ವೇದಿಕೆ ಕಲ್ಪಿಸಿದ್ದಾರೆ. ಮೊಯ್ಲಿ ಪ್ರಕಾರ ಕಾಂಗ್ರೆಸ್ ಸೋಲಿಗೆ ಕಾರಣರಾದ ಇಬ್ಬರಾರು? ಮುಂದೆ ಓದಿ..
ನವದೆಹಲಿಯಲ್ಲಿ ಮಾತನಾಡುತ್ತಿದ್ದ ವೀರಪ್ಪ ಮೊಯ್ಲಿ
ನವದೆಹಲಿಯಲ್ಲಿ ಮಾತನಾಡುತ್ತಿದ್ದ ವೀರಪ್ಪ ಮೊಯ್ಲಿ, ಕೇವಲ ಹನ್ನೆರಡು ಸೀಟುಗಳ ಕೊರತೆಯಿಂದಾಗಿ ನಾವು ಅಧಿಕಾರದಿಂದ ವಂಚಿತರಾದೆವು. ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ಪ್ರಚಾರ, ನಮ್ಮ ಪಕ್ಷದ ಇಬ್ಬರು ಹಿರಿಯ ಮುಖಂಡರ ಹೇಳಿಕೆಯಿಂದಾಗಿ ದಾರಿ ತಪ್ಪಿತು ಮತ್ತು ನಾವು ಹಿನ್ನಡೆ ಅನುಭವಿಸಬೇಕಾಯಿತು. ಪ್ರಧಾನಿ ಮೋದಿ ಇದೇ ವಿಚಾರವನ್ನು ಇಟ್ಟುಕೊಂಡು ಪ್ರಚಾರಗಿಟ್ಟಿಸಿಕೊಂಡರು ಎಂದು ಮೊಯ್ಲಿ ಹೇಳಿದ್ದಾರೆ.
ನೀಲಿನಕ್ಷೆ ತಯಾರಿಸುವ ವಿಷಯ ಚರ್ಚೆ
ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ, ಇದಾದ ನಂತರ ಲೋಕಸಭಾ ಚುನಾವಣೆ. ಇದಕ್ಕೆ ಈಗಲೇ ನಾವು ಪೂರ್ವತಯಾರಿ ಮಾಡಿಕೊಂಡಿದ್ದೇವೆ. ಈ ಸಂಬಂಧ ನೀಲಿನಕ್ಷೆ ತಯಾರಿಸುವ ವಿಷಯ ಚಿಂತನ ಮಂಥನದಲ್ಲಿ ಚರ್ಚೆಗೆ ಬರಲಿದೆ. ಚಿಂತನ ಮಂಥನದ ಕೊನೆಯ ದಿನ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಮಣಿಶಂಕರ್ ಅಯ್ಯರ್ ಮತ್ತು ಕಪಿಲ್ ಸಿಬಲ್
ಗುಜರಾತ್ ಸೋಲಿಗೆ ಮಣಿಶಂಕರ್ ಅಯ್ಯರ್ ಮತ್ತು ಕಪಿಲ್ ಸಿಬಲ್ ಅವರ ಹೇಳಿಕೆಗಳೇ ಕಾರಣ ಎಂದು ಅಭಿಪ್ರಾಯ ಪಟ್ಟಿರುವ ವೀರಪ್ಪ ಮೊಯ್ಲಿ, ನಿರ್ಣಾಯಕವಾಗಿದ್ದ ಗುಜರಾತ್ ಚುನಾವಣೆಯ ವೇಳೆ ಅಯ್ಯರ್ ಮತ್ತು ಸಿಬಲ್ ಆ ರೀತಿಯ ಹೇಳಿಕೆಯನ್ನು ನೀಡಬಾರದಿತ್ತು. ಈ ಅಂಶಗಳೇ ನಾವು ಸಣ್ಣ ಅಂತರದಿಂದ ಸೋಲಲು ಕಾರಣವಾಯಿತು ಎಂದು ಆತ್ಮವಿಮರ್ಶೆ ಮಾಡಿಕೊಂಡಿದ್ದಾರೆ.
ಪ್ರಧಾನಿ ಹುದ್ದೆಯ ಬಗ್ಗೆ ನಮಗೆ ಗೌರವವಿದೆ
ಪ್ರಧಾನಿ ಹುದ್ದೆಯ ಬಗ್ಗೆ ನಮಗೆ ಗೌರವವಿದೆ, ಅದಕ್ಕಾಗಿಯೇ ಮಣಿ ಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು. ಆದರೂ, ಬಿಜೆಪಿಯವರು ನಮ್ಮ ಪಕ್ಷದ ಈ ಇಬ್ಬರು ನೀಡಿದ ಹೇಳಿಕೆಯನ್ನು ಇಟ್ಟುಕೊಂಡು ರಾಜಕೀಯ ಮೈಲೇಜ್ ತೆಗೆದುಕೊಂಡರು - ವೀರಪ್ಪ ಮೊಯ್ಲಿ.
ಗುಜರಾತ್, ಹಿಮಾಚಲ ಪ್ರದೇಶ ಸೋಲು
ಮಣಿ ಶಂಕರ್ ಅಯ್ಯರ್ ಅವರು ಪ್ರಧಾನಿ ಮೋದಿಯನ್ನು 'ನೀಚ' ಎಂದು ಜರಿದರು, ಇನ್ನೊಂದೆಡೆ ಕಪಿಲ್ ಸಿಬಲ್, ಸೂಕ್ಷ್ಮ ವಿಚಾರವಾಗಿರುವ ಅಯೋಧ್ಯೆ ರಾಮಮಂದಿರ ವಿಚಾರಣೆಯನ್ನು 2019ರ ಲೋಕಸಭಾ ಚುನಾವಣೆಯ ನಂತರ ನಡೆಸಿ ಎಂದು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್, ಸಿಬಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ ಗುಜರಾತ್ ಸೋಲಿಗೆ, ಮಣಿಶಂಕರ್ ಅಯ್ಯರ್ ಮತ್ತು ಕಪಿಲ್ ಸಿಬಲ್ ಕಾರಣ ಎಂದು ಮೊಯ್ಲಿ , ಆ ಇಬ್ಬರು ಮುಖಂಡರ ಮೇಲೆ ಗೂಬೆ ಕೂರಿಸಿದ್ದಾರೆ.