ಲಡಾಖ್, ಪ್ರಧಾನಿ ಮೋದಿ ಜೊತೆ ಸರ್ವಪಕ್ಷಗಳ ಸಭೆ: ಪ್ರಶ್ನೆಯ ಸುರಿಮಳೆಗೈದ ಸೋನಿಯಾ ಗಾಂಧಿ
ನವದೆಹಲಿ, ಜೂನ್ 19: ಪೂರ್ವ ಲಡಾಖ್ ಗಡಿ ವಿಚಾರದಲ್ಲಿ ಭಾರತ-ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿ ಸರ್ವಪಕ್ಷಗಳ ಸಭೆಯನ್ನು ಕರೆದಿದ್ದರು. ಸೋನಿಯಾ ಗಾಂಧಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಮೊದಲಿಗೆ ಮಾತನಾಡಿದ ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಕೇಂದ್ರ ಸರಕಾರದ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದಾರೆ. "ಗಡಿ ಭಾಗದಲ್ಲಿ ಯಥಾಸ್ಥಿತಿಯನ್ನು ಪುನಃ ಸ್ಥಾಪಿಸಲಾಗುವುದು ಮತ್ತು ಚೀನಾ ತನ್ನ ಮೂಲ ಸ್ಥಾನಕ್ಕೆ ಮರಳುತ್ತದೆ ಎನ್ನುವ ಖಚಿತ ಭರವಸೆಯನ್ನು ದೇಶ ಬಯಸುತ್ತದೆ"ಎಂದು ಸೋನಿಯಾ ಗಾಂಧಿ ಹೇಳಿದರು.
ಚೀನಾ ವಿರುದ್ಧ ಯುದ್ಧ; ಸರ್ವಪಕ್ಷ ಸಭೆಯಲ್ಲಿ ಸಿಎಂಗಳು ಹೇಳಿದ್ದೇನು?
"ಇಂತಹ ಪರಿಸ್ಥಿತಿಯಲ್ಲೂ ಕೆಲವೊಂದು ನಿರ್ಣಾಯಕ ವಿಚಾರದಲ್ಲಿ ನಾವಿನ್ನೂ ಕತ್ತಲಲ್ಲಿದ್ದೇವೆ"ಎಂದು ಸಭೆಯಲ್ಲಿ ಬೇಸರ ವ್ಯಕ್ತ ಪಡಿಸಿದ ಸೋನಿಯಾ, "ಎರಡು ವಾರಗಳ ಹಿಂದೆಯೇ, ಚೀನಾ ಒಳನುಸುಳುವಿಕೆಯ ಮಾಹಿತಿ ಸಿಕ್ಕಾಗಲೇ ಈ ಸಭೆಯನ್ನು ಕರೆಯಬೇಕಾಗಿತ್ತು" ಎನ್ನುವ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.
"ನಾವು ಈ ಸಭೆಯಲ್ಲಿ ನಿರ್ದಿಷ್ಟ ಪ್ರಶ್ನೆಯನ್ನು ಕೇಳಲು ಬಯಸುತ್ತೇವೆ. ಯಾವ ದಿನಾಂಕದಂದು ಚೀನಾದ ಯೋಧರು ನಮ್ಮ ಗಡಿಯೊಳಗೆ ಪ್ರವೇಶಿಸಿದರು"ಎಂದು ಸೋನಿಯಾ ಸಭೆಯಲ್ಲಿ, ಪ್ರಧಾನಿಯವರನ್ನು ಪ್ರಶ್ನಿಸಿದ್ದಾರೆ.
"ಮೇ ಐದರಂದು ಚೀನಾದ ಯೋಧರು ಗಡಿಯೊಳಗೆ ನುಸುಳಿದರು ಎನ್ನುವ ಮಾಹಿತಿಯಿದೆ. ಗುಪ್ತಚರ ಮಾಹಿತಿ, ಸ್ಯಾಟಿಲೈಟ್ ಚಿತ್ರಗಳು ರಕ್ಷಣಾ ಸಚಿವಾಲಯಕ್ಕೆ ಕಾಲಕಾಲಕ್ಕೆ ಬರುವುದಿಲ್ಲವೇ"ಎಂದು ಸೋನಿಯಾ ಮಹತ್ವದ ಪ್ರಶ್ನೆಯನ್ನು ಸಭೆಯಲ್ಲಿ ಎತ್ತಿದ್ದಾರೆ.
ಎನ್ಸಿಪಿ ಮುಖಂಡ ಶರದ್ ಪವಾರ, ಸಿಪಿಐ(ಎಂ) ಮುಖಂಡ ಸೀತಾರಾಂ ಯಚೂರಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ಮುಖಂಡರು, ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು.