ಸುಪ್ರೀಂ ಅಂಗಳ ತಲುಪಿದ ಆಂಧ್ರ v/s ತೆಲಂಗಾಣ ಜಲ ವಿವಾದ
ನವದೆಹಲಿ, ಜುಲೈ 14: ಶ್ರೀಶೈಲಂ ಅಣೆಕಟ್ಟು ಯೋಜನೆ, ನಾಗಾರ್ಜುನಸಾಗರ ಯೋಜನೆ, ಪುಲಿಚಿಂತಿಲ ಯೋಜನೆಗಳಿಂದ ನ್ಯಾಯಸಮ್ಮತವಾಗಿ ಆಂಧ್ರಕ್ಕೆ ಸಿಗಬೇಕಾಗಿರುವ ನೀರು ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ತೆಲಂಗಾಣ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕುಡಿಯುವ ಮತ್ತು ನೀರಾವರಿ ಉದ್ದೇಶಕ್ಕೆ ಎರಡು ರಾಜ್ಯಗಳ ನಡುವೆ ನೀರು ಹಂಚಿಕೆ ವಿಷಯವಾಗಿ ಎದ್ದಿರುವ ವಿವಾದ ಈಗ ತಾರಕಕ್ಕೇರಿದೆ.
ತೆಲಂಗಾಣ ಸರ್ಕಾರವು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಇದರಿಂದ ಆಂಧ್ರಪ್ರದೇಶದ ಜನರ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆಂಧ್ರಪ್ರದೇಶ ಮರುರಚನಾ ಕಾಯಿದೆ 2014ರ ಅಡಿಯಲ್ಲಿ ರಚಿಸಲಾದ ಸರ್ವೋಚ್ಚ ಸಮಿತಿ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಡಿ ರಚಿಸಲಾಗಿರುವ ಕೃಷ್ಣಾ ನದಿ ನಿರ್ವಹಣಾ ಮಂಡಳಿಯ (ಕೆಆರ್ಎಂಬಿ) ನಿರ್ದೇಶನಗಳನ್ನು ತೆಲಂಗಾಣ ಸರ್ಕಾರ ನಿರಾಕರಿಸಿದೆ.
ಶ್ರೀಶೈಲಂ ಅಣೆಕಟ್ಟು ಯೋಜನೆಯಡಿ, ವಿದ್ಯುತ್ ಉತ್ಪಾದನೆ ಹೆಚ್ಚಾಗಿರುವುದರಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಗಂಭೀರ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಆಂಧ್ರಕ್ಕೆ ನೀರು ಹಂಚಿಕೆಯಲ್ಲಿ ವ್ಯತ್ಯಾಸ ಉಂಟಾಗಿದೆ.
ಜೊತೆಗೆ ನಾಗಾರ್ಜುನಸಾಗರ ಯೋಜನೆ, ಪುಲಿಚಿಂತಿಲ ಯೋಜನೆಗಳಲ್ಲಿ ನೀರಿನ ಲಭ್ಯತೆ ಇಲ್ಲದಿರುವುದು ಆಂಧ್ರದ ಜನರಿಗೆ ಸಂಕಷ್ಟ ಉಂಟು ಮಾಡಿದೆ ಎಂದು ವಿವರಿಸಲಾಗಿದೆ.
ಬಚಾವತ್ ತೀರ್ಪು ಉಲ್ಲಂಘನೆ: 1976ರ ಮೇ 31ರಂದು ನೀಡಲಾಗಿದ್ದ ತೀರ್ಪನ್ನು ಆಂಧ್ರಪ್ರದೇಶ ಮರುರಚನೆ ಕಾಯಿದೆ- 2014ರ ನಿಬಂಧನೆ(ಬಚಾವತ್ ತೀರ್ಪು) ಗಳನ್ನು ತೆಲಂಗಾಣ ಉಲ್ಲಂಘಿಸಿದೆ. ಕೆಆರ್ಎಂಬಿ ಮಂಡಳಿಯ ವ್ಯಾಪ್ತಿಯನ್ನು 2014 ರ ಸೆಕ್ಷನ್ 87 ರ ಅಡಿಯಲ್ಲಿ ಇನ್ನೂ ಘೋಷಿಸಿಲ್ಲ ಎಂದು ಆಂಧ್ರದ ವಕೀಲ ಮೆಹ್ಫೂಜ್ ಎ ನಜ್ಕಿ ಅರ್ಜಿಯಲ್ಲಿ ತಿಳಿಸಿದ್ದಾರೆ. 2021ರ ಜೂನ್ 28ರಂದು ತೆಲಂಗಾಣ ಸರ್ಕಾರ ಜಾರಿಗೊಳಿಸಿದ ಆದೇಶ ಅನ್ಯಾಯದಿಂದ ಕೂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)