ಶರದ್ ಪವಾರ್ ಮನೆಯಲ್ಲಿ 8 ಪಕ್ಷಗಳ ಭೇಟಿ, ಚರ್ಚೆ ಬಗ್ಗೆ ಎನ್ಸಿಪಿ ಹೇಳಿದ್ದೇನು?
ನವದೆಹಲಿ, ಜೂ.23: 2024 ರ ಚುನಾವಣೆಗೂ ಮುನ್ನ ಹಿರಿಯ ರಾಜಕಾರಣಿ ಶರದ್ ಪವಾರ್ ಮನೆಯಲ್ಲಿ ಮಂಗಳವಾರ ನಡೆದ 8 ಪಕ್ಷಗಳ ಸಭೆಯು ಭಾರೀ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್, ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಎಡಪಕ್ಷಗಳು ಸೇರಿವೆ. ಆದರೆ ಕಾಂಗ್ರೆಸ್ ಮಾತ್ರ ಕಾಣೆಯಾಗಿದೆ.
ಮಾಜಿ ಕೇಂದ್ರ ಪ್ರಸಕ್ತ ಸಚಿವ ಯಶ್ವಂತ್ ಸಿನ್ಹಾ, "ಪ್ರಸ್ತುತ ಘಟನೆಗಳ ಬಗ್ಗೆ ಚರ್ಚಿಸಲು" ಶರದ್ ಪವಾರ್ ಬಳಿ ರಾಷ್ಟ್ರ ಮಂಚ್ ಕೂಟವನ್ನು ಕರೆಯುವಂತೆ ಹೇಳಿದ್ದರು. ಇದರಂತೆ ಸಭೆ ನಡೆದಿದೆ. ಚುನಾವಣೆಗೆ ಬಿಜೆಪಿ ಈಗಲೇ ಸಿದ್ದತೆ ನಡೆಸಿದೆ ಎಂಬ ವರದಿಗಳ ನಡುವೆ ತೃತೀಯ ಒಕ್ಕೂಟದ ಈ ಸಭೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಆದರೆ ಈ ಬಗ್ಗೆ ಮಾತನಾಡಿದ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖಂಡ ಮತ್ತು ರಾಷ್ಟ್ರ ಮಂಚ್ನ ಸ್ಥಾಪಕ ಸದಸ್ಯ ಮಜೀದ್ ಮೆಮನ್, "ಸಭೆಯನ್ನು ಯಶ್ವಂತ್ ಸಿನ್ಹಾ ಕರೆದರು, ಶರದ್ ಪವಾರ್ ಅಲ್ಲ, ಇದು ರಾಜಕೀಯ ಸಭೆಯಲ್ಲ," ಎಂದು ಒತ್ತಿ ಹೇಳಿದ್ದಾರೆ. ಈ ನಡುವೆ ಮಹಾರಾಷ್ಟ್ರದಲ್ಲಿ ತನ್ನ ಮಿತ್ರರಾಷ್ಟ್ರವಾಗಿರುವ ಕಾಂಗ್ರೆಸ್ ಅನ್ನು ಹೊರತುಪಡಿಸಿ ಎನ್ಸಿಪಿ ಸಭೆ ನಡೆಸಿರುವುದು ಇನ್ನೂ ಕೆಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.
"ಸಭೆ ಮೂರನೇ ಸ್ಥಾನದಲ್ಲಿರುವ ಪಕ್ಷಗಳದ್ದು, ಹಾಗಾಗಿ ಕಾಂಗ್ರೆಸ್ ಈ ಸಭೆಯಲ್ಲಿ ಇರುವ ಪ್ರಶ್ನೆಯಿಲ್ಲ. ಯಾವುದೇ ತಾರತಮ್ಯವಿಲ್ಲ. ನಾವು ಎಲ್ಲ ಸಮಾನ ಮನಸ್ಕ ಜನರನ್ನು ಕರೆದಿದ್ದೇವೆ. ನಾವು ಕಾಂಗ್ರೆಸ್ ಮುಖಂಡರನ್ನು ಕೂಡ ಆಹ್ವಾನಿಸಿದ್ದೇವೆ. ನಾನು ವಿವೇಕ್ ತನ್ಹಾ, ಮನೀಶ್ ತಿವಾರಿ, ಅಭಿಷೇಕ್, ಮನು ಸಿಂಗ್ವಿ, ಶತ್ರುಘ್ನ ಸಿನ್ಹಾರನ್ನು ಸಭೆಗೆ ಕರೆದಿದ್ದೇನೆ. ಆದರೆ ಅವರ್ಯಾರಿಗೂ ಬರಲು ಸಾಧ್ಯವಾಗಲಿಲ್ಲ. ನಾವು ಕಾಂಗ್ರೆಸ್ ಅನ್ನು ಆಹ್ವಾನಿಸಲಿಲ್ಲ ಎಂಬುದು ನಿಜವಲ್ಲ," ಎಂದು ಮಜೀದ್ ಮೆಮನ್ ಸ್ಪಷ್ಟಪಡಿಸಿದ್ದಾರೆ.
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಸಮ್ಮೇಳನ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ, ಆರ್ಎಲ್ಡಿಯ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ ಘನ್ಶ್ಯಾಮ ತಿವಾರಿ, ಎಎಪಿ ನಾಯಕ ಸುಶೀಲ್ ಗುಪ್ತಾ, ಸಿಪಿಐನ ಬಿನೊಯ್ ವಿಶ್ವಮ್ ಮತ್ತು ಸಿಪಿಎಂನ ನಿಲೋತ್ಪಾಲ್ ಬಸು ಈ ಸಭೆಯಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿಪಿಎಂನ ನಿಲೋತ್ಪಾಲ್ ಬಸು, "ಇದು ರಾಜಕೀಯ ಸಭೆಯಲ್ಲ, ಸಮಾನ ಮನಸ್ಕರ ನಡುವಿನ ಮಾತುಕತೆಯಷ್ಟೇ. ಕೋವಿಡ್ ನಿರ್ವಹಣೆ, ಸಂಸ್ಥೆಗಳ ಮೇಲೆ 'ದಾಳಿ' ಮತ್ತು ನಿರುದ್ಯೋಗ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ," ಎಂದಿದ್ದಾರೆ.
ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಎಪಿ ಶಾ, ಮಾಜಿ ರಾಯಭಾರಿ ಕೆ.ಸಿ.ಸಿಂಗ್ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್ ಕೂಡಾ ಭಾಗವಹಿಸಿರುವುದು ಗಮನಾರ್ಹ ವಿಚಾರ. ಹಿರಿಯ ವಕೀಲ ಕೆ.ಟಿ.ಎಸ್ ತುಳಸಿ, ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಷಿ, ಮತ್ತು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಸಭೆಯಲ್ಲಿ ಭಾಗಿಯಾಗಿಲ್ಲ. ಈ ನಡುವೆ ಹಿರಿಯ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಎನ್ಸಿಪಿ ನಾಯಕ ಪವಾರ್ರನ್ನು ಪ್ರತ್ಯೇಕವಾಗಿ ಭೇಟಿಯಾದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬಳಿ ಈ ಸಭೆಯ ಬಗ್ಗೆ ಕೇಳಿದಾಗ, ''ರಾಜಕೀಯದ ಬಗ್ಗೆ ಚರ್ಚಿಸುವ ಸಮಯ ಇದಲ್ಲ,'' ಎಂದು ಹೇಳಿದರು.
"ಯಶ್ವಂತ್ ಸಿನ್ಹಾ ರಾಷ್ಟ್ರ ಮಂಚ್ ಮುಖ್ಯಸ್ಥರಾಗಿದ್ದಾರೆ. ಪವಾರ್ರನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದಾರೆ. ಆದ್ದರಿಂದ ಸಭೆ ರಾಷ್ಟ್ರ ಮಂಚ್ನ ನೇತೃತ್ವದ್ದಾಗಿದೆ,"ಎಂದು ಎನ್ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿದ್ದಾರೆ. ಈ ನಡುವೆ ತಾನು ಅಥವಾ ಪಕ್ಷ ಯಾವುದೇ ಆಹ್ವಾನ ನೀಡಿಲ್ಲ ಎಂದು ಶರದ್ ಪವಾರ್ ಆಪ್ತ ಮೂಲಗಳು ತಿಳಿಸಿವೆ.
(ಒನ್ಇಂಡಿಯಾ ಸುದ್ದಿ)