3 ತಿಂಗಳ ಸುದೀರ್ಘ ರಜೆಯ ನಂತರ ಸುಷ್ಮಾ ಸ್ವರಾಜ್ ಲೋಕಸಭೆಗೆ ಬಂದಾಗ!
ಕಿಡ್ನಿ ಶಸ್ತ್ರ ಚಿಕಿತ್ಸೆಗೊಳಗಾಗಿ, 3 ತಿಂಗಳ ನಂತರ ಲೋಕಸಭೆಗೆ ಹಾಜರಾದ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಪಕ್ಷಬೇಧ ಮೆರೆತು ಎಲ್ಲರೂ ಸ್ವಾಗತಿಸಿದ ಅಪರೂಪದ ಘಟನೆಗೆ ಲೋಕಸಭೆ ಸಾಕ್ಷಿಯಾಯಿತು.
ನವದೆಹಲಿ, ಮಾ 15: ಮೂರು ತಿಂಗಳ ನಂತರ ಲೋಕಸಭೆಗೆ ಹಾಜರಾದ ವಿದೇಶಾಂಗ ಖಾತೆಯ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಪಕ್ಷಬೇಧ ಮೆರೆತು ಎಲ್ಲರೂ ಸ್ವಾಗತಿಸಿದ ಅಪರೂಪದ ಘಟನೆಗೆ ಲೋಕಸಭೆ ಬುಧವಾರ (ಮಾ 15) ಸಾಕ್ಷಿಯಾಯಿತು.
ಕಿಡ್ನಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಸುಷ್ಮಾ ಸ್ವರಾಜ್, ಮೂರು ತಿಂಗಳ ಸುದೀರ್ಘ ರಜೆಯ ನಂತರ ಪಾರ್ಲಿಮೆಂಟಿಗೆ ಆಗಮಿಸಿದಾಗ ಎಲ್ಲರೂ ಎದ್ದುನಿಂತು, ಮೇಜು ತಟ್ಟಿ ಅವರನ್ನು ಸ್ವಾಗತಿಸಿದರು. (ಸುಷ್ಮಾಗೆ ಬೆಂಗಳೂರಿಗನ ಮೊರೆ)
ಸುಷ್ಮಾ ಸ್ವರಾಜ್ ಅವರನ್ನು ಲೋಕಸಭೆಗೆ ಸ್ವಾಗತಿಸುತ್ತಿದ್ದೇವೆಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದಾಗ, ಎದ್ದು ನಿಂತ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ನಿಮ್ಮನ್ನು ಲೋಕಸಭೆಗೆ ಸ್ವಾಗತಿಸುತ್ತಿದ್ದೇವೆ.
ನಿಮಗೆ ದೇವರು ಇನ್ನಷ್ಟು ಆರೋಗ್ಯ ನೀಡಲಿ, ದೇಶಕ್ಕೆ ಮತ್ತಷ್ಟು ನೀವು ಸೇವೆ ಮಾಡುತ್ತೀರಿ ಎನ್ನುವ ನಂಬಿಕೆ ಇದೆ. ಜೊತೆಗೆ, ಅಮೆರಿಕಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಹಲ್ಲೆಯ ಬಗ್ಗೆಯೂ ನಿಮ್ಮಿಂದ ಉತ್ತರ ಸಿಗಲಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಂಸತ್ತಿನ ಪ್ರಶ್ನೋತ್ತರ ಕಲಾಪ ಮುಗಿದ ಕೂಡಲೇ ಜನಸಂಪನ್ಮೂಲ ಖಾತೆಯ ಸಚಿವೆ ಉಮಾ ಭಾರತಿ ಜೊತೆ ಸದನಕ್ಕೆ ಆಗಮಿಸಿದ ಸುಷ್ಮಾ ಸ್ವರಾಜ್ ಅವರ ಫೋಟೋ ತೆಗೆಯಲು ಮಾಧ್ಯಮದವರು ಪೈಪೋಟಿಗೆ ಬಿದ್ದರು.
ಹಸಿರು ಸೀರೆ ಮತ್ತು ಅದಕ್ಕೆ ಹೊಂದುವ ಜ್ಯಾಕೆಟ್ ಧರಿಸಿ ಲೋಕಸಭೆಗೆ ಆಗಮಿಸಿದ ಸುಷ್ಮಾ ಅವರು ಸೀಟಿನಲ್ಲಿ ಆಸೀನರಾಗುತ್ತಿದ್ದಂತೆಯೇ, ಕಾಂಗ್ರೆಸ್ ಮುಖಂಡ ಜ್ಯೋತಿರಾಧ್ಯ ಸಿಂಧ್ಯಾ ಆರೋಗ್ಯ ವಿಚಾರಿಸಿದರು.
ಸ್ಪೀಕರ್, ಖರ್ಗೆಜೀ ಮತ್ತು ಸದನದ ಎಲ್ಲಾ ಸದಸ್ಯರಿಗೆ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆ ಮತ್ತು ನಾನು ನಂಬಿದ ಕೃಷ್ಣ ಪರಮಾತ್ಮನ ಆಶೀರ್ವಾದದಿಂದ ನಾನು ಮತ್ತೆ ಸದನದಕ್ಕೆ ಹಾಜರಾಗುವಂತಾಯಿತು ಎಂದು ಸುಷ್ಮಾ ಭಾವುಕವಾಗಿ ನುಡಿದರು. (ಚಿತ್ರಕೃಪೆ: ಲೋಕಸಭಾ ಟಿವಿ)