2018 ಗಣರಾಜ್ಯೋತ್ಸವಕ್ಕೆ ಅತಿಥಿಗಳಾಗಿ 10ಆಸಿಯಾನ್ ನಾಯಕರು: ಮೋದಿ
ನವದೆಹಲಿ, ಡಿಸೆಂಬರ್ 31: 'ಮನ್ ಕೀ ಬಾತ್' ಸರಣಿಯ ವರ್ಷದ ಕೊನೆಯ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಿದರು. ಭಾಷಣದಲ್ಲಿ ಹಲವು ವಿಚಾರಗಳನ್ನು ಅವರು ಪ್ರಸ್ತಾಪಿಸಿದರು.
2018ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ 10 ಆಸಿಯಾನ್ ರಾಷ್ಟ್ರಗಳ ನಾಯಕರು ಆಗಮಿಸಲಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.
'ಆಸಿಯಾನ್ ರಾಷ್ಟ್ರಗಳ ನಾಯಕರು ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಭಾರತವು ಕಾತರದಿಂದ ಕಾಯುತ್ತಿದೆ,' ಎಂದು ಮೋದಿ ತಿಳಿಸಿದರು.
21ನೇ ಶತಮಾನದಲ್ಲಿ ಜನಿಸಿದ ಯುವಕರು 2018ರಲ್ಲಿ ಮತದಾನದ ಹಕ್ಕು ಪಡೆಯುತ್ತಾರೆ. ಎಲ್ಲಾ ಯುವ ಜನಾಂಗದವರು ಮತದಾರರಾಗಿ ನೋಂದಣಿ ಮಾಡಿಕೊಳ್ಳಿ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಕರೆ ನೀಡಿದರು. ಹೊಸ ಮತದಾರರನ್ನು ಸ್ವಾಗತಿಸಲು ಭಾರತ ಸಿದ್ದವಾಗಿದೆ ಎಂದು ಮೋದಿ ಹೇಳಿದರು.
ಇನ್ನು ದೇಶದ ಎಲ್ಲಾ ಜಿಲ್ಲೆಗಳಿಂದ ಯುವಕರನ್ನ ಆಯ್ದು ಆಗಸ್ಟ್ 15ರ ಸಂದರ್ಭದಲ್ಲಿ ಅಣಕು ಸಂಸತ್ ನಡೆಸಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ. ಮುಂದಿನ ಐದು ವರ್ಷದಲ್ಲಿ ಹೊಸ ಭಾರತ ಹೇಗೆ ನಿರ್ಮಾಣವಾಗಬೇಕು ಎಂಬುದರ ಬಗ್ಗೆ ಈ ಯುವಕರು ವಿವರ ನೀಡಲಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಎಲ್ಲಾ ಜಿಲ್ಲೆಗಳಲ್ಲಿ ಅಣಕು ಸಂಸತ್ ನಡೆಯಲಿದೆ ಎಂದು ಅವರು ವಿವರ ನೀಡಿದರು.
ನವ ಭಾರತ ಜಾತೀಯತೆ, ಕೋಮುವಾದ, ಭಯೋತ್ಪಾದನೆ ಮತ್ತು ಭ್ರಷ್ಟಚಾರ, ಬಡತನದಿಂದ ಮುಕ್ತವಾಗಲದೆ. ಈ ನವ ಭಾರತದಲ್ಲಿ ಎಲ್ಲಾ ಭಾರತೀಯರಿಗೆ ಸಮಾನ ಅವಕಾಶಗಳು ಇರಲಿವೆ ಎಂದು ಪ್ರಧಾನಿ ಹೇಳಿದರು. ಶಾಂತಿ, ಸಹಬಾಳ್ವೆ ಮತ್ತು ಏಕತೆಯೇ ನವ ಭಾರತದ ಚಾಲಕ ಶಕ್ತಿ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ತಿಳಿಸಿದರು.
'2018ರ ಜನವರಿ 4ರಿಂದ ಮಾರ್ಚ್ 10ರವರೆಗೆ ಸ್ವಚ್ಛ ಸಮೀಕ್ಷೆ -2018 ನಡೆಯಲಿದೆ. ದೇಶದ ಸುಮಾರು ನಾಲ್ಕು ಸಾವಿರ ನಗರಗಳಲ್ಲಿ, 40 ಕೋಟಿ ಜನರನ್ನು ಒಳಗೊಂಡಂತೆ ಈ ಸಮೀಕ್ಷೆ ನಡೆಯಲಿದೆ' ಎಂದು ಮೋದಿ ಮಾಹಿತಿ ನೀಡಿದರು.
ಮಹಿಳೆಯರಿಗೂ ಹಜ್ ಯಾತ್ರೆ
ಹಜ್ ಯಾತ್ರೆಗೆ ಪುರುಷ ಸಹಾಯಕರ ನೆರವಿಲ್ಲದೆ ಹೋಗಲು ಮುಸ್ಲಿಂ ಮಹಿಳೆಯರಿಗೆ ಅವಕಾಶವಿರಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ನಂತರವೂ ಈ ಅಸಮಾನತೆ ಮುಂದುವರಿಯುವುದು ಸರಿಯೇ? ಎಂದು ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆ ಈ ನಿರ್ಬಂಧಕ್ಕೆ ಅಂತ್ಯ ಹಾಡಿದೆ. ಹಜ್ ಯಾತ್ರೆಗೆ ಒಂಟಿಯಾಗಿ ಹೊರಡುವ ಮಹಿಳೆಯರಿಗೆ ಲಾಟರಿ ವ್ಯವಸ್ಥೆಯಿಂದ ವಿನಾಯಿತಿ ನೀಡಿ ಅವರಿಗೆ ವಿಶೇಷ ವ್ಯವಸ್ಥೆಯಡಿ ಯಾತ್ರೆಗೆ ಅನುವು ಮಾಡಿಕೊಡಲು ಇಲಾಖೆಗೆ ಸಲಹೆ ನೀಡಿದ್ದೇನೆ' ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ದೇಶದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.