ಜುಲೈ 6ರಿಂದ ಬಾಗಿಲು ತೆರೆಯಲಿದೆ ತಾಜ್ ಮಹಲ್
ನವದೆಹಲಿ, ಜುಲೈ 05 : ವಿಶ್ವಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ವೀಕ್ಷಣೆಗೆ ಪ್ರವಾಸಿಗರಿಗೆ ಸೋಮವಾರದಿಂದ ಅವಕಾಶ ಸಿಗಲಿದೆ. ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್ ಡೌನ್ ಘೋಷಣೆಯಾದ ಬಳಿಕ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿತ್ತು.
ಜುಲೈ 6ರ ಸೋಮವಾರದಿಂದ ತಾಜ್ ಮಹಲ್ ವೀಕ್ಷಣೆಗೆ ಅವಕಾಶವನ್ನು ನೀಡಲಾಗುತ್ತದೆ. ಪ್ರವಾಸಿಗರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಮೃತ ಶಿಲೆಯಲ್ಲಿ ನಿರ್ಮಾಣಗೊಂಡಿರುವ ಸ್ಮಾರಕವನ್ನು ಮುಟ್ಟುವಂತಿಲ್ಲ.
ಒಂದೇ ದಿನ ಭಾರತದಲ್ಲಿ 24 ಸಾವಿರ ಕೋವಿಡ್ - 19 ಪ್ರಕರಣ!
ಒಂದು ದಿನಕ್ಕೆ 5 ಸಾವಿರ ಪ್ರವಾಸಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರವಾಸಿಗರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದು ಸೂಚನೆ ನೀಡಲಾಗಿದೆ. ತಾಜ್ ಮಹಲ್ ಒಳಗೆ ಸ್ಯಾನಿಟೈಸ್ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಕೊರೊನಾ ಭೀತಿಯಲ್ಲೂ ಪ್ರವಾಸೋದ್ಯಮ ಪುನರಾರಂಭಿಸಿದ ಗೋವಾ
ರಜೆ ದಿನಗಳಲ್ಲಿ ಸುಮಾರು 80 ಸಾವಿರ ಪ್ರಯಾಣಿಕರು ತಾಜ್ ಮಹಲ್ ವೀಕ್ಷಣೆ ಮಾಡಲು ಬರುತ್ತಿದ್ದರು. ಆದರೆ, ಈಗ ಹೆಚ್ಚು ಜನರು ಸೇರದಂತೆ ಎಚ್ಚರಿಕೆ ವಹಿಸಲು ಪ್ರವಾಸಿಗರ ಸಂಖ್ಯೆಗೆ ನಿರ್ಬಂಧ ವಿಧಿಸಲಾಗಿದೆ.
ಕೊಡಗಿನಲ್ಲಿ 21 ದಿನಗಳ ಕಾಲ ಪ್ರವಾಸೋದ್ಯಮ ಬಂದ್
ತಾಜ್ ಮಹಲ್ ಜೊತೆಗೆ ದೆಹಲಿಯ ಕೆಂಪುಕೋಟೆಗೂ ಸೋಮವಾರದಿಂದ ಪ್ರವಾಸಿಗರು ಭೇಟಿ ನೀಡಬಹುದಾಗಿದೆ. ವೇಗವಾಗಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವಾಗ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿರುವುದು ಚರ್ಚೆಗೆ ಕಾರಣವಾಗಿದೆ.
ಆಗ್ರಾದಲ್ಲಿ 1267 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಾಖಲಾಗಿವೆ. ನವದೆಹಲಿಯಲ್ಲಿ 97,200 ಸೋಂಕಿತರು ಇದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವಾಲಯ ತಾಜ್ ಮಹಲ್, ಕೆಂಪುಕೋಟೆಗೆ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದೆ.