ಸ್ವಾತಂತ್ರ್ಯ ದಿನಕ್ಕೆ ವಿಂಗ್ ಕಮ್ಯಾಂಡರ್ ಅಭಿನಂದನ್ ಗೆ ವೀರ್ ಚಕ್ರ ಪದಕ ಪ್ರದಾನ
ನವದೆಹಲಿ, ಆಗಸ್ಟ್ 14: ಮಿಗ್ -21 ಬೈಸನ್ ವಿಮಾನವನ್ನು ಪಾಕಿಸ್ತಾನ ವಾಯು ಸೇನೆಯ F- 16 ವಿಮಾನ ಫೆಬ್ರವರಿಯಲ್ಲಿ ಹೊಡೆದುರುಳಿಸಿದಾಗ ಅರವತ್ತು ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿ ಇದ್ದ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಸ್ವಾತಂತ್ರ್ಯೋತ್ಸವ ದಿನದಂದು ವೀರ್ ಚಕ್ರ ಸೇವಾ ಪದಕ ಪ್ರದಾನ ಮಾಡಲಾಗುತ್ತದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೆಬ್ರವರಿ 27ರಂದು F 16 ಪಾಕ್ ಯುದ್ಧ ವಿಮಾನವನ್ನು ಗಡಿ ನಿಯಂತ್ರಣ ರೇಖೆ ಬಳಿ ವಿಂಗ್ ಕಮ್ಯಾಂಡರ್ ವರ್ತಮಾನ್ ಹೊಡೆದುರುಳಿಸಿದ ಮೇಲೆ ರಾಷ್ಟ್ರೀಯ ಹೀರೋ ಆಗಿದ್ದರು. ಆದರೆ ವಿಮಾನ ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯು ಅವರನ್ನು ವಶಕ್ಕೆ ಪಡೆದಿತ್ತು. ಅದಾಗಿ ಮೂರು ದಿನಗಳ ನಂತರ, ಮಾರ್ಚ್ 1ಕ್ಕೆ ವರ್ತಮಾನ್ ಭಾರತಕ್ಕೆ ಮರಳಿದ್ದರು.
ಅಭಿನಂದನ್ ಗೆ ಪರಮ ವೀರ ಚಕ್ರ ನೀಡುವಂತೆ ತಮಿಳುನಾಡಿನಿಂದ ಶಿಫಾರಸು
ಪುಲ್ವಾಮಾದಲ್ಲಿ ಉಗ್ರ ದಾಳಿಯಲ್ಲಿ ಭಾರತದ ಸಿಆರ್ ಪಿಎಫ್ ನ ನಲವತ್ತು ಸಿಬ್ಬಂದಿ ಸಾವನ್ನಪ್ಪಿದ ನಂತರ ಫೆಬ್ರವರಿ 26ನೇ ತಾರೀಕು ಭಾರತೀಯ ವಾಯುಸೇನೆಯು ಪಾಕಿಸ್ತಾನದ ಬಾಲಾಕೋಟ್ ಮೇಲೆ ದಾಳಿ ನಡೆಸಿ, ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
36 ವರ್ಷದ ಅಭಿನಂದನ್ ವೈದ್ಯಕೀಯ ಪರೀಕ್ಷೆಗಳೆಲ್ಲವನ್ನೂ ಪೂರೈಸಿದ ನಂತರ ಕರ್ತವ್ಯಕ್ಕೆ ಮರಳಲಿದ್ದಾರೆ. ವಿಮಾನದಿಂದ ಪ್ಯಾರಾಚೂಟ್ ಮೂಲಕ ಹೊರಬೀಳುವಾಗ ಗಾಯಗಳಾಗಿದ್ದವು. ಅಭಿನಂದನ್ ರ ವಶ ಹಾಗೂ ಬಿಡುಗಡೆ ನಂತರ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗಳನ್ನು ಮಾಡಲಾಗಿತ್ತು.
ಪಾಕಿಸ್ತಾನದಲ್ಲಿ ಸಾರ್ವಜನಿಕರು ಹಲ್ಲೆ ನಡೆಸಿದ್ದರಿಂದ ಅಭಿನಂದನ್ ಗೆ ಗಾಯಗಳಾಗಿದ್ದವು. ಇನ್ನು ಪಾಕಿಸ್ತಾನಿ ಅಧಿಕಾರಿಗಳು ತನಗೆ ಯಾವುದೇ ದೈಹಿಕ ಹಿಂಸೆ ನೀಡಲಿಲ್ಲ. ಆದರೆ ಮಾನಸಿಕವಾಗಿ ಹಿಂಸಿಸಿದರು ಎಂದು ಅಭಿನಂದನ್ ಹೇಳಿಕೊಂಡಿದ್ದರು.
ಅಭಿನಂದನ್ ರ ಭದ್ರತೆ ವಿಚಾರದಲ್ಲಿ ಆತಂಕ ಇದ್ದುದರಿಂದ ಕಳೆದ ಏಪ್ರಿಲ್ ನಲ್ಲಿ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರನ್ನು ಹೆಸರು ಬಯಲು ಮಾಡದ- ಪಶ್ಚಿಮ ವಲಯದ ವಾಯು ನೆಲೆಯೊಂದಕ್ಕೆ ನಿಯೋಜಿಸಲಾಗಿತ್ತು. ಅದು ಕೂಡ ಪಾಕಿಸ್ತಾನದ ಸರಹದ್ದಿನೊಂದಿಗೆ ಹೊಂದಿಕೊಂಡಂತೆ ಇತ್ತು.
ಭಾರತೀಯ ವಾಯು ಸೇನೆಯಾ ಚೀಫ್ ಮಾರ್ಷಲ್ ಬಿ. ಎಸ್. ಧನೋವಾ ಖಾತ್ರಿ ಪಡಿಸಿರುವ ಪ್ರಕಾರ, ವಿಂಗ್ ಕಮ್ಯಾಂಡರ್ ಅಭಿನಂದನ್ ಕ್ಷಮತೆ ಖಾತ್ರಿ ಆದ ಮೇಲೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತಾರೆ.