ತ್ರಿಪುರಾ: ಗಲಭೆ ವರದಿ ಮಾಡುತ್ತಿದ್ದ ಪತ್ರಕರ್ತನ ಕೊಲೆ
ಅಗರ್ತಲಾ, ಸೆಪ್ಟೆಬರ್ 21: ತ್ರಿಪುರಾ ರಾಜಧಾನಿ ಅಗರ್ತಲಾದಿಂದ 25 ಕಿಲೋಮೀಟರ್ ದೂರದಲ್ಲಿರುವ ಮಂಡಾಯ್ ನಲ್ಲಿ ಪತ್ರಕರ್ತರೊಬ್ಬರನ್ನು ಹೊಡೆದು ಕೊಲೆ ಮಾಡಲಾಗಿದೆ. ಸ್ಥಳೀಯ ಚಾನಲ್ 'ದಿನ್ ರಾತ್'ನಲ್ಲಿ ವರದಿಗಾರರಾಗಿದ್ದ ಶಂತನು ಭೌಮಿಕ್ (28) ಸಾವಿಗೀಡಾದ ಪತ್ರಕರ್ತರಾಗಿದ್ದಾರೆ.
ತ್ರಿಪುರಾದ 'ಐಪಿಎಫ್ ಟಿ' (Indigenous People's Front of Tripura - IPFT) ಮತ್ತು 'ಟಿಆರ್ ಯುಜಿಪಿ' (Tripura Rajaer Upajati Ganamukti Parishad - TRUGP) ಸಂಘಟನೆಗಳ ನಡುವೆ ಮಂಡಾಯ್ ಪ್ರದೇಶದಲ್ಲಿ ಗಲಭೆ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಮಂಡಾಯ್ ನಲ್ಲಿ ರಸ್ತೆಯನ್ನು 'ಐಪಿಎಫ್ ಟಿ' ಕಾರ್ಯಕರ್ತರು ಬಂದ್ ಮಾಡಿದ್ದರು. ಇದನ್ನು ವರದಿ ಮಾಡಲು ತೆರಳಿದ್ದ ಸಂದರ್ಭ ಶಂತನು ಮೇಲೆ ಹಿಂದಿನಿಂದ ಬಂದು ದಾಳಿ ನಡೆಸಿ ಅಪಹರಣ ನಡೆಸಲಾಗಿತ್ತು.
ನಂತರ ಶಂತನು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದ್ದರು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅದಾಗಲೆ ಅವರು ಸಾವನ್ನಪ್ಪಿದ್ದರು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ 'ಐಪಿಎಫ್ ಟಿ'ಯ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯಿಂದ ವ್ಯಗ್ರರಾಗಿರುವ ತ್ರಿಪುರಾದ ಪತ್ರಕರ್ತರು ಬುಧವಾರ ರಾತ್ರಿ ಮುಖ್ಯಮಂತ್ರಿ ಮಾಣಿಕ್ ಸರಕಾರ ನಿವಾಸಕ್ಕೆ ಮುತ್ತಿಗೆ ಹಾಕಿದ್ದರು.
ಸೆಪ್ಟೆಂಬರ್ 19ರಿಂದ ಪಶ್ಚಿಮ ತ್ರಿಪುರಾ ಮತ್ತು ಕೊವಾಯ್ ಪ್ರದೇಶದಲ್ಲಿ ಎರಡೂ ಪಕ್ಷಗಳ ನಡುವೆ ಭಾರೀ ಗಲಭೆ ನಡೆಯುತ್ತಿದ್ದು, 10 ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ. 'ಐಪಿಎಫ್ ಟಿ' ಪಕ್ಷ ಟ್ವಿಪ್ರಲ್ಯಾಂಡ್ ಎಂಬ ಪ್ರತ್ಯೇಕ ಬುಡಕಟ್ಟು ರಾಜ್ಯಕ್ಕಾಗಿ ಒತ್ತಾಯಿಸುತ್ತಿದ್ದು ನಿರಂತರ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿಕೊಂಡು ಬರುತ್ತಿದೆ.