ಕಾನೂನು ಉಲ್ಲಂಘನೆ ಸಹಿಸೊಲ್ಲ: ಮಾನವ ಹಕ್ಕುಗಳ ಮುಖ್ಯಸ್ಥರಿಗೆ ಭಾರತದ ಖಡಕ್ ಉತ್ತರ
ನವದೆಹಲಿ, ಅಕ್ಟೋಬರ್ 21: ಭಾರತದಲ್ಲಿ ಮಾನವ ಹಕ್ಕುಗಳ ಎನ್ಜಿಒಗಳಿಗೆ ಸರಿಯಾದ ಸ್ವಾತಂತ್ರ್ಯವಿಲ್ಲ. ಅವುಗಳ ಚಟುವಟಿಕೆ ಮೇಲೆ ನಿರ್ಬಂಧ ಹೇರಲಾಗಿದೆ ಮತ್ತು ವಿದೇಶಿ ದೇಣಿಗೆಗಳನ್ನು ತಡೆಹಿಡಿಯಲಾಗಿದೆ ಎಂದು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಷೆಲ್ಲೆ ಬಾಷೆಲೆಟ್ ವಿಷಾದ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿರುವ ಭಾರತ, ಮಾನವ ಹಕ್ಕುಗಳ ನೆಪದಲ್ಲಿ ಕಾನೂನಿನ ಉಲ್ಲಂಘನೆಯನ್ನು ಸಹಿಸಲು ಸಾಧ್ಯವಿಲ್ಲ. ವಿಶ್ವ ಸಂಸ್ಥೆಯ ಈ ವಿಭಾಗಕ್ಕೆ ವಿಚಾರದ ಬಗ್ಗೆ ಹೆಚ್ಚಿನ ವಿವರದ ದೃಷ್ಟಿಕೋನವನ್ನು ನಿರೀಕ್ಷಿಸಲಾಗಿತ್ತು ಎಂದಿದೆ.
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಆಮ್ನೆಸ್ಟಿ: ಆರೋಪವೇನು?
'ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ಸಿಆರ್ಎ) ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ನೀಡಿದ ಕೆಲವು ಹೇಳಿಕೆಗಳನ್ನು ಗಮನಿಸಿದ್ದೇವೆ. ಭಾರತವು ಕಾನೂನಿನ ನಿಯಮ ಮತ್ತು ಸ್ವತಂತ್ರ ನ್ಯಾಯಾಂಗದ ಆಧಾರದಲ್ಲಿ ರಚನೆಯಾಗಿರುವ ಪ್ರಜಾಪ್ರಭುತ್ವ ದೇಶ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
'ಕಾನೂನುಗಳನ್ನು ರಚಿಸುವುದು ಖಂಡಿತವಾಗಿಯೂ ಸಾರ್ವಭೌಮತ್ವದ ವಿಶೇಷಾಧಿಕಾರ. ಮಾನವ ಹಕ್ಕುಗಳ ನೆಪದಲ್ಲಿ ಕಾನೂನುಗಳ ಉಲ್ಲಂಘನೆಯನ್ನು ಕ್ಷಮಿಸಲು ಸಾಧ್ಯವಿಲ್ಲ' ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪೌರತ್ವ ಕಾಯ್ದೆ ತಾರತಮ್ಯದಿಂದ ಕೂಡಿದೆ: ವಿಶ್ವಸಂಸ್ಥೆ ಕಳವಳ
ಭಾರತದಲ್ಲಿ ಮಾನವ ಹಕ್ಕುಗಳ ಎನ್ಜಿಒಗಳಿಗೆ ಬರುವ ವಿದೇಶಿ ದೇಣಿಗೆ ಮೇಲೆ ನಿರ್ಬಂಧ ವಿಧಿಸಿರುವುದು ಮತ್ತು ಮಾನವ ಹಕ್ಕು ಕಾರ್ಯಕರ್ತರ ಬಂಧನದಂತಹ ಚಟುವಟಿಕೆಗಳ ಕುರಿತು ಬಾಷೆಲೆಟ್ ಕಳವಳ ವ್ಯಕ್ತಪಡಿಸಿದ್ದರು. ಭಾರತದಲ್ಲಿ ಮಾನವಹಕ್ಕುಗಳ ಪ್ರತಿಪಾದಕರು ಮತ್ತು ಎನ್ಜಿಒಗಳು ತಮ್ಮ ಮಹತ್ವದ ಕಾರ್ಯಚಟುವಟಿಕೆ ನಡೆಸಲು ಹಾಗೂ ಅವರ ಸುರಕ್ಷತೆಗೆ ನೆರವು ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು.