ನಿವೃತ್ತ ಯೋಧರೇ ಇರುವ ಈ ಊರಲ್ಲಿ ಕೇಜಿ ಉಪ್ಪಿಗೆ 150, ಸಕ್ಕರೆಗೆ 200
ಅರುಣಾಚಲ ಪ್ರದೇಶದಲ್ಲಿರುವ ಈ ಕಣಿವೆ ಪ್ರದೇಶದ ಬಗ್ಗೆ ನೀವು ಓದುತ್ತಾ ಹೋದರೆ, ನಿಮ್ಮ ಊರಿನ ಸಮಸ್ಯೆಗಳೆಲ್ಲ ಜುಜುಬಿ ಅನ್ನಿಸಿಬಿಡುತ್ತದೆ. ವಿಜಯನಗರ ಆ ಜಾಗದ ಹೆಸರು. ನಿವೃತ್ತ ಯೋಧರ ಕುಟುಂಬಗಳೂ ಸೇರಿ ಮುನ್ನೂರು ಚಿಲ್ಲರೆ ಕುಟುಂಬ ಅಲ್ಲಿದೆ. ಒಂದು ಕೇಜಿ ಉಪ್ಪು ಖರೀದಿ ಮಾಡಬೇಕು ಅಂದರೆ ಇಲ್ಲಿನ ಜನ 150 ರುಪಾಯಿ ಕೊಡಬೇಕು.
ಇನ್ನು ಸಕ್ಕರೆ ಖರೀದಿ ಮಾಡಬೇಕು ಅಂದರೆ ಕೇಜಿಗೆ 200 ರುಪಾಯಿ. ಅದೂ ಸಿಕ್ಕಿದರೆ...ಭಾರತ- ಮ್ಯಾನ್ಮಾರ್ ಗಡಿಯಲ್ಲಿರುವ ಅರುಣಾಚಲ ಪ್ರದೇಶ ರಾಜ್ಯದ ವಿಜಯನಗರದ ಸ್ಥಿತಿ ಇದು. ಈ ಊರನ್ನು ತಲುಪಬೇಕು ಅಂದರೆ ದಟ್ಟ ಕಾಡಿನ ಮಧ್ಯೆ ಹತ್ತು ದಿನ ನಡೆದು ಹೋಗಬೇಕು.
ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ
ಈ ಸ್ಥಳವನ್ನು ಗುರುತಿಸಿದವರು ಅಸ್ಸಾಂ ರೈಫಲ್ಸ್ ಪ್ಯಾರಾ ಮಿಲಿಟರಿ ಪಡೆಯವರು. ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಇಲ್ಲಿ ನಿವೃತ್ತ ಯೋಧರ ಕುಟುಂಬಗಳೇ ವಾಸವಿವೆ. ಈ ಸ್ಥಳಕ್ಕೆ ತೆರಳುವಾಗ ಆ ಕುಟುಂಬಗಳಿಗೆ ಎಲ್ಲ ಸವಲತ್ತಿನ ಭರವಸೆ ನೀಡಲಾಗಿತ್ತು. ನಾಲ್ಕು ದಶಕವೇ ಕಳೆಯುತ್ತಾ ಬಂದರೂ ಇಲ್ಲಿನ ಸ್ಥಿತಿಯಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ.
ಆಹಾರ ಪದಾರ್ಥ ಸರಕಾರ ಪೂರೈಸಲಿ
ಅಸ್ಸಾಂ ರೈಫಲ್ಸ್ ನ ನಿವೃತ್ತ ಯೋಧ ಜೆಡ್ ರಾಲ್ಟೆ ಮಾತನಾಡಿ, ಐವತ್ತು ಎಕರೆ ಜಾಗ ಕೊಡುವುದಾಗಿ ಹೇಳಿದ ಸರಕಾರ ನಮ್ಮನ್ನು ಇಲ್ಲಿಗೆ ಕಳುಹಿಸಿತು. ಆದರೆ ಸಿಕ್ಕಿದ್ದು ಹನ್ನೊಂದು ಎಕರೆ ಭೂಮಿ. ಇಲ್ಲಿ ಕೃಷಿ ಮಾಡ್ತಾ ಇದ್ದೀನಿ. ಇಲ್ಲಿ ಉಪ್ಪು ಸಿಗೋದು ಕಷ್ಟ. ನೂರೈವತ್ತು ರುಪಾಯಿ ಕೊಟ್ಟು ಉಪ್ಪು ಖರೀದಿಸಬೇಕು. ಆದ್ದರಿಂದ ಉಪ್ಪು, ಎಣ್ಣೆ ಮತ್ತಿತರ ಆಹಾರ ಪದಾರ್ಥ ಪೂರೈಸಲು ಸರಕಾರಕ್ಕೆ ಮನವಿ ಮಾಡಿದ್ದೀವಿ ಎನ್ನುತ್ತಾರೆ.
ವಯಸ್ಸಾದವರಿಗೆ ಇಲ್ಲಿ ಜೀವನ ನಡೆಸುವುದು ಬಲು ಕಷ್ಟ. ಮುನ್ನೂರು ಕುಟುಂಬಗಳಿಗೆ ಒಳ್ಳೆ ಆರೋಗ್ಯ ಸೇವೆ, ಆರ್ಥಿಕ ಅನುಕೂಲ ಒದಗಿಸುವ ಭರವಸೆ ನೀಡಲಾಗಿತ್ತು. ಈ ಕುಟುಂಬಗಳಿಗೆ ದೊರೆಯುವ ಸೌಕರ್ಯವೂ ಕಡಿಮೆ ಹಾಗೂ ಜೀವನ ನಿರ್ವಹಣೆ ಕೂಡ ದುಬಾರಿ.
ಒಂದು ನಿಮಿಷದ ಫೋನ್ ಕರೆಗೆ ಐದು ರುಪಾಯಿ
ಅಗತ್ಯ ವಸ್ತುಗಳು ವಿಪರೀತ ದುಬಾರಿ ಅನ್ನೋದು ಒಂದು ಕಡೆಯಾಯಿತು, ಸ್ಥಳೀಯ ದೂರವಾಣಿಯಿಂದ ಕರೆ ಮಾಡಬೇಕು ಅಂದರೆ ನಿಮಿಷಕ್ಕೆ ಐದು ರುಪಾಯಿ ಬೀಳುತ್ತದೆ. ಇಲ್ಲಿರುವವರ ದಿನದ ಸರಾಸರಿ ದುಡಿಮೆ ಇನ್ನೂರು ರುಪಾಯಿ. ಅದರಲ್ಲಿ ಒಂದು ಕೇಜಿ ಉಪ್ಪೋ ಅಥವಾ ಸಕ್ಕರೆ ಖರೀದಿಸಿದರೆ ಆ ಹಣ ಖರ್ಚಾಗಿ ಬಿಡುತ್ತದೆ.
ಹತ್ತಿರದ ಆಸ್ಪತ್ರೆಗೆ ಇನ್ನೂರು ಕಿ.ಮೀ. ದೂರ
ಇವೆಲ್ಲ ಸಮಸ್ಯೆಗಳ ತೂಕ ಒಂದಾದರೆ, ವೈದ್ಯಕೀಯ ನೆರವು ಬೇಕೆಂದರೆ ತೀರಾ ಹತ್ತಿರದ ಆಸ್ಪತ್ರೆ ಅಂದರೆ ಇನ್ನೂರು ಕಿಲೋಮೀಟರ್ ದೂರವಿದೆ. ಅಲ್ಲಿಗೆ ತಲುಪಬೇಕು ಅಂದರೆ ವಿಮಾನವೇ ಬೇಕು. ಅಸ್ಸಾಂ ರೈಫಲ್ಸ್ ನವರು ಇಲ್ಲಿನವರಿಗೆ ಸಹಾಯ ಮಾಡುತ್ತಿದ್ದಾರೆ ಅನ್ನೋದು ನಿಜ. ಆದರೆ ಅನಾರೋಗ್ಯದಿಂದ ಬಳಲುವವರು ಹಾಗೂ ಗರ್ಭಿಣಿಯರು ಅವರ ನೆರವಿಗೆ ಕಾಯಬೇಕು. ಇಲ್ಲದಿದ್ದರೆ ಜೀವ ಕಳೆದುಕೊಳ್ಳಬೇಕು ಎಂಬ ಸ್ಥಿತಿ ಇದೆ.
ಪ್ರಾಥಮಿಕ ಶಿಕ್ಷಣ ಮಾತ್ರ ಅಗ್ಗ
ಈ ಸ್ಥಳದಲ್ಲಿ ಬಹಳ ಅಗ್ಗ ಅಂದರೆ ಪ್ರಾಥಮಿಕ ಶಿಕ್ಷಣ. ಐನೂರು ರುಪಾಯಿ ಒಂದು ಮಗುವಿಗೆ ಶುಲ್ಕ ಪಡೆಯಲಾಗುತ್ತದೆ. ಕೆಲವು ಸಲ ಉಚಿತವಾಗಿ ಹೇಳಿಕೊಡಲಾಗುತ್ತದೆ. ಏಕೆಂದರೆ ಇವರು ಸಮಾಜ ಸೇವೆ ಎಂಬ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ.