ವಿಡಿಯೋ: ಹೈಟೆನ್ಷನ್ ಲೈನ್ ಹತ್ತಿ ಯುವಕನ ಸಾಹಸ: ಶಾಕ್ ಹೊಡಿತಾ ಎಂದು ಜನ ಕನ್ಫ್ಯೂಸ್
ಪಿಲಿಭಿತ್ ಸೆಪ್ಟೆಂಬರ್ 27: ಉತ್ತರಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಯುವಕನೊಬ್ಬನ ಕೃತ್ಯ ಜನರಲ್ಲಿ ರೊಚ್ಚಿಗೆಬಿಸಿದೆ. ಯುವಕ ಹೈವೋಲ್ಟೇಜ್ ಲೈನ್ನಲ್ಲಿ ಸ್ಟಂಟ್ ಮಾಡುತ್ತಿರುವುದು ಕಂಡು ಬಂದಿದೆ. ತಂತಿಗಳನ್ನು ಹಿಡಿದುಕೊಂಡು ಯುವಕ ಮೇಲಕ್ಕೆ ಮತ್ತು ಕೆಲವೊಮ್ಮೆ ಕೆಳಗೆ ಹೋಗುತ್ತಿರುವುದು ಕಂಡು ಬಂದಿದೆ. ವಿದ್ಯುತ್ ಇಲಾಖೆ ಸಿಬ್ಬಂದಿ ಜನರ ಸಹಾಯದಿಂದ ಯುವಕರನ್ನು ಕೆಳಗಿಳಿಸಿದ್ದಾರೆ. ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿದ್ಯುತ್ ತಂತಿಗಳ ಮೇಲೆ ಯುವಕನ ಸಾಹಸವನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದಾರೆ.
ಉತ್ತರಪ್ರದೇಶ ಪಿಲಿಭಿತ್ ಜಿಲ್ಲೆಯ ತೆಹಸಿಲ್ ಅಮರಿಯಾ ಪಟ್ಟಣದ ಬಜಾರ್ನಲ್ಲಿ ಈ ಘಟನೆ ನಡೆದಿದೆ. ನೌಶಾದ್ ಎಂಬ ಯುವಕ ಈ ಮಾರುಕಟ್ಟೆಯಲ್ಲಿ ಬಳೆಗಳನ್ನು ಮಾರುವ ಕೆಲಸ ಮಾಡುತ್ತಾನೆ. ಈ ಹಿಂದೆ ನೌಶಾದ್ ಹೈವೋಲ್ಟೇಜ್ ಲೈನ್ ಮೇಲೆ ಏರಿ ಜೋಲಿ ಹೊಡೆಯ ತೊಡಗಿದ್ದ. ವಿದ್ಯುತ್ ತಂತಿಗಳ ಮೇಲೆ ಇಂತಹ ಅಪಾಯಕಾರಿ ಸಾಹಸವನ್ನು ನೋಡಿದ ಜನ ದಂಗಾಗಿದ್ದರು. ಆದರೆ ನೌಶಾದ್ ಮತ್ತೆ ಇದೇ ಮಂಗನಾಟ ಜೀವದ ಜೊತೆ ಆಡಿದ್ದಾರೆ.
ತಪ್ಪಿದ ಭಾರಿ ಅನಾಹುತ
ನೌಶಾದ್ ನಿನ್ನೆ ಮತ್ತೆ ವಿದ್ಯುತ್ ತಂತಿಗಳ ಮೇಲೆ ಸಹಾಸ ಪ್ರದರ್ಶನ ಮಾಡಿದ್ದಾರೆ. ಅದೃಷ್ಟವಶಾತ್ ಎಡೆಬಿಡದೆ ಸುರಿದ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ಭಾರೀ ಅನಾಹುತ ತಪ್ಪಿದೆ. ಯುವಕರು ವಿದ್ಯುತ್ ತಂತಿಗಳ ಮೇಲೆ ಸಾಹಸಗಳನ್ನು ಮಾಡುತ್ತಲೇ ಇದ್ದರು, ಆದರೆ ಕೆಳಗೆ ನಿಂತ ಜನರು ಕರೆಂಟ್ ಬರಬಹುದೆಂದು ಭಯಪಡುತ್ತಿದ್ದರು. ಇದೇ ವೇಳೆ ಜನರು ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಆಗ ವಿದ್ಯುತ್ ಅಧಿಕಾರಿಗಳು ಕರೆಂಟ್ ನೀಡದೆ ಅನಾಹುತ ತಪ್ಪಿದೆ.
ಕಷ್ಟಪಟ್ಟು ಯುವಕನನ್ನು ಕೆಳಗಿಳಿಸಿದ ಜನ
ಯುವಕ ಹೈವೋಲ್ಟೇಜ್ ವೈರ್ ಮೇಲೆ ಹತ್ತುತ್ತಿರುವುದನ್ನು ಕಂಡು ಸ್ಥಳದಲ್ಲೇ ಜನ ಜಮಾಯಿಸಿದರು. ಜನರು ಯುವಕನ ವಿಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ಅದೇ ವೇಳೆಗೆ ಯುವಕ ಸಂತೋಷದಿಂದ ವಿದ್ಯುತ್ ತಂತಿಗಳ ಮೇಲೆ ತೂಗಾಡಿ ಸಾಹಸ ಮಾಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ವಿದ್ಯುತ್ ಇಲಾಖೆಯ ನೌಕರರು ಹಾಗೂ ಮಾರುಕಟ್ಟೆಯ ಜನರು ಸೇರಿ ಯುವಕನನ್ನು ಕೆಳಗಿಳಿಸಿದ್ದಾರೆ.
ಹಿಂದೆ ಪತ್ನಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿದ ಪತಿ
ಮಧ್ಯಪ್ರದೇಶ ಅನುಪ್ಪುರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ (ಸೆಪ್ಟೆಂಬರ್ 2)ದಂದು ಬೆಳಗ್ಗೆ ಪತಿ-ಪತ್ನಿಯರ ನಡುವಿನ ಜಗಳದಿಂದಾಗಿ ಮೂರು ರಾಜ್ಯಗಳಲ್ಲಿ ಸಂಚಲನ ಉಂಟಾಗಿತ್ತು. ದಿನವಿಡೀ ತೊಂದರೆ ಅನುಭವಿಸಿದ ಅಧಿಕಾರಿಗಳು ಹಾಗೂ ನೌಕರರು ಸುಮಾರು ಐದು ಗಂಟೆಗಳ ಪರಿಶ್ರಮದ ಬಳಿಕ ಗಲಾಟೆಯನ್ನು ಶಮನಗೊಳಿಸುವಲ್ಲಿ ಯಶಸ್ವಿಯಾದರು.
ಅನುಪ್ಪುರ್ ಜಿಲ್ಲೆಯ ಬಾಕೇಲಿ ಗ್ರಾಮದ ನಿವಾಸಿಯಾದ ಯುವಕನೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡಿದ ನಂತರ 300 ಅಡಿ ಎತ್ತರದ ವಿದ್ಯುತ್ ಟವರ್ ಅನ್ನು ಹತ್ತಿ ಸುಮಾರು ಐದು ಗಂಟೆಗಳ ಕಾಲ ಗದ್ದಲವನ್ನು ಸೃಷ್ಟಿಸಿದನು. ಬಾಕೇಲಿ ಗ್ರಾಮದ ನಿವಾಸಿ ರೋಹಿತ್ ಸಿಂಗ್ ಎಂಬಾತ ತನ್ನ ಪತ್ನಿಯೊಂದಿಗೆ ಜಗಳವಾಡಿ ಬೆಳಗ್ಗೆ ಗ್ರಾಮದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯ ಟವರ್ ಅನ್ನು ಏರಿದ್ದಾನೆ. ಸುಮಾರು 300 ಅಡಿ ಎತ್ತರದಲ್ಲಿ ಟವರ್ನ ತಂತಿಗಳ ನಡುವೆ ಅಳವಡಿಸಿದ್ದ ಸೆರಾಮಿಕ್ ಉಪಕರಣಗಳನ್ನು ಹಿಡಿದುಕೊಂಡು ಕುಳಿತಿದ್ದ ರೋಹಿತ್ನನ್ನು ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕಂಡ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೋಹಿತ್ ಸಿಂಗ್ ಅವರನ್ನು ಕೆಳಗಿಳಿಸಲು ಹರಸಾಹಸಪಟ್ಟಿದ್ದಾರೆ. ಸುಮಾರು ಐದು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ವಿಶೇಷ ತಂಡ ಹೇಗೋ ವ್ಯಕ್ತಿಯನ್ನು ಟವರ್ನಿಂದ ಕೆಳಗಿಳಿಸಿದ್ದರು.
ಹೈಟೆನ್ಷನ್ ವೈರ್ ಮೇಲೇರಿ ಕುಳಿತ ರೈತ
ಜುಲೈ 18ರಂದು ಕೌಶಂಬಿ ಜಿಲ್ಲೆಯಲ್ಲಿ ಗೃಹ ಸಂಪರ್ಕದ ವಿದ್ಯುತ್ ಬಿಲ್ ಜಾಸ್ತಿಯಾದ ಹಿನ್ನೆಲೆಯಲ್ಲಿ ವ್ಯಕ್ತಿನೊಬ್ಬ ವಿದ್ಯುತ್ ಟವರ್ ಏರಿ ಕುಳಿದ ಘಟನೆ ಬೆಳಕಿಗೆ ಬಂದಿದೆ. ಜೊತೆಗೆ ಈತ ಬರಿಗಾಲಲ್ಲಿ ವಿದ್ಯುತ್ ತಂತಿಗಳ ಮೇಲೆ ನಡೆಯತೊಡಗಿರುವ ವಿಡಿಯೋ ವೈರಲ್ ಆಗಿದೆ. ಈತನ ಈ ಕೃತ್ಯವನ್ನು ಕಂಡು ಗ್ರಾಮಸ್ಥರು ಜಮಾಯಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಯುವಕನನ್ನು ಕೆಳಗಿಳಿಸಲು ಹರಸಾಹಸ ಪಟ್ಟಿದ್ದರು.
ವಾಸ್ತವವಾಗಿ ಈ ಘಟನೆಯು ಸರಾಯ್ ಅಕಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ನಂದಾ ಗ್ರಾಮದಲ್ಲಿ ನಡೆದಿದೆ. ನಂದಾ ಗ್ರಾಮದ ನಿವಾಸಿ ಅಶೋಕ್ ಕುಮಾರ್ ಹೈವೋಲ್ಟೇಜ್ ವಿದ್ಯುತ್ ತಂತಿಯ ಮೇಲೇರಿ ಕುಳಿತಿರುವ ವ್ಯಕ್ತಿ. ಇವರು ಕೃಷಿ ಮಾಡಿಕೊಂಡು ಮನೆ ನಿರ್ವಹಣೆ ಮಾಡುತ್ತಿದ್ದರು. ಅಶೋಕ್ ಸೌಭಾಗ್ಯ ಯೋಜನೆಯಡಿ ಮೂರು ವರ್ಷಗಳ ಹಿಂದೆ ಉಚಿತ ಸಂಪರ್ಕ ಪಡೆದಿದ್ದರು. ಅಂದಿನಿಂದ ನಿರಂತರವಾಗಿ ಬಿಲ್ ವಸೂಲಿ ಮಾಡಲಾಗುತ್ತಿತ್ತು. ಆದರೆ ಶನಿವಾರ ಅಶೋಕ್ ಮನೆಗೆ 80 ಸಾವಿರದ 700 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. 80 ಸಾವಿರಕ್ಕೂ ಹೆಚ್ಚು ಬಿಲ್ ನೋಡಿ ಅಶೋಕ್ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ಅಶೋಕ್ ಪತ್ನಿ ಮೋಹನಿ ದೇವಿ ಆರೋಪಿಸಿದ್ದಾರೆ.