ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಕೋವಿಡ್ ದೃಢ
ನವದೆಹಲಿ, ಸೆಪ್ಟೆಂಬರ್ 29: ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ. ಉಪ ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆ ಮಂಗಳವಾರ ಈ ಮಾಹಿತಿ ನೀಡಿದೆ.
'ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಇಂದು ಬೆಳಿಗ್ಗೆ ಎಂದಿನಂತೆ ಕೋವಿಡ್-19 ಪರೀಕ್ಷೆಗೆ ಒಳಪಟ್ಟಿದ್ದರು. ಅವರಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಕಂಡುಬಂದಿದೆ. ಆದರೆ ಅವರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ ಹಾಗೂ ಅವರ ಆರೋಗ್ಯ ಉತ್ತಮವಾಗಿದೆ. ಹೋಮ್ ಕ್ವಾರೆಂಟೈನ್ನಲ್ಲಿರುವಂತೆ ಅವರಿಗೆ ಸಲಹೆ ನೀಡಲಾಗಿದೆ' ಎಂದು ತಿಳಿಸಿದೆ.
ವೆಂಕಯ್ಯ ನಾಯ್ಡು ಅವರ ಪತ್ನಿ ಉಷಾ ಅವರಿಗೆ ಕೊರೊನಾ ವೈರಸ್ ನೆಗೆಟಿವ್ ಎಂದು ವರದಿ ಬಂದಿದ್ದು, ಅವರು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದಾರೆ ಎಂದು ಟ್ವಿಟ್ಟರ್ ಖಾತೆ ಮಾಹಿತಿ ನೀಡಿದೆ.
ಈ ಮಾಹಿತಿ ನೀಡುವ ಗಂಟೆಗಳ ಮುಂಚೆಯಷ್ಟೇ, 'ಕೋವಿಡ್ ಪಾಸಿಟಿವ್ ಕಂಡುಬಂದ ಅಥವಾ ಕೋವಿಡ್ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯ ಬಗ್ಗೆ ತಾರತಮ್ಯ ತೋರಿಸದೆ ಇರುವುದು ಮುಖ್ಯವಾಗಿದೆ. ನಾವು ಅನುಕಂಪದ ಜತೆಗೆ ಕೋವಿಡ್ ಸುತ್ತ ಸಕಾರಾತ್ಮಕ ಸಂದೇಶ ನೀಡಬೇಕಿದೆ ಎಂದು ಉಪ ರಾಷ್ಟ್ರಪತಿ ಟ್ವಿಟ್ಟರ್ ಖಾತೆ ಹೇಳಿತ್ತು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ರಾಜ್ಯಸಭೆ ಅಧಿವೇಶನವನ್ನು ರಾಜ್ಯಸಭೆ ಅಧ್ಯಕ್ಷರೂ ಆಗಿರುವ ಎಂ. ವೆಂಕಯ್ಯ ನಾಯ್ಡು ನಿಭಾಯಿಸಿದ್ದರು. ಅ. 31ರವರೆಗೂ ನಡೆಯಬೇಕಿದ್ದ ಅಧಿವೇಶನ ಹತ್ತು ದಿನಗಳಲ್ಲಿಯೇ ಅಂತ್ಯಗೊಂಡಿತ್ತು. ರಾಜ್ಯಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 83 ಉದ್ಯೋಗಿಗಳು ಕೋವಿಡ್ ಸೋಂಕಿಗೆ ಒಳಗಾಗಿದ್ದರು.
Recommended Video