ಮಾರ್ಚ್ 26ರಿಂದ ರಾಷ್ಟ್ರಾದ್ಯಂತ ರಾಮ ಮಹೋತ್ಸವ
ಏಪ್ರಿಲ್ 28ರಿಂದ ಹಿಂದೂಗಳ ಹೊಸ ವರ್ಷ ಆರಂಭವಾಗಲಿದೆ. ಅದಕ್ಕೆ ಎರಡು ದಿನ ಬಾಕಿಯಿರುವಾಗಲೇ ವಿಎಚ್ ಪಿಯ ಕಡೆಯಿಂದ ರಾಮ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ವಿಎಚ್ ಪಿ ಹೇಳಿದೆ.
ನವದೆಹಲಿ, ಮಾರ್ಚ್ 21: ದಶಕಗಳ ಹಿಂದೆ ರಾಮ ಜನ್ಮಭೂಮಿಯ ಆಂದೋಲನ ಆರಂಭಿಸಿದ್ದ ವಿಶ್ವ ಹಿಂದೂ ಪರಿಷತ್ ಇದೇ ತಿಂಗಳ 26ರಿಂದ ಏಪ್ರಿಲ್ 16ರವರೆಗೆ ರಾಮ ಮಹೋತ್ಸವ ಆಚರಿಸುವುದಾಗಿ ಘೋಷಿಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಮಾರ್ಚ್ 21), ಸುಪ್ರೀಂ ಕೋರ್ಟ್, ನ್ಯಾಯಾಲಯದ ಹೊರಗೆ ಸೌಹಾರ್ದ ರೀತಿಯಲ್ಲಿ ರಾಮಮಂದಿರ ವಿವಾದವನ್ನು ಇತ್ಯರ್ಥಗೊಳಿಸುವಂತೆ ಸೂಚನೆ ನೀಡಿದೆ.[ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ]
ಈ ಹಿನ್ನೆಲೆಯಲ್ಲಿ, ರಾಮ ಮಹೋತ್ಸವ ಆರಂಭಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ನಿಂದ ಪಶ್ಚಿಮ ಉತ್ತರ ಪ್ರದೇಶ ಹಾಗೂ ಉತ್ತರಾಖಾಂಡ್ ನಲ್ಲಿ ವಲಯವಾರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಈಶ್ವರಿ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ''ಏಪ್ರಿಲ್ 28ರಿಂದ ಹಿಂದೂಗಳ ಹೊಸ ವರ್ಷ ಆರಂಭವಾಗಲಿದೆ. ಅದಕ್ಕೆ ಎರಡು ದಿನ ಬಾಕಿಯಿರುವಾಗಲೇ ವಿಎಚ್ ಪಿಯ ಕಡೆಯಿಂದ ರಾಮ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು'' ಎಂದು ಅವರು ತಿಳಿಸಿದರು.
''ಇದು ರಾಷ್ಟ್ರವ್ಯಾಪಿ ಆಂದೋಲನವಾಗಿದ್ದು, ನಮ್ಮ ಕಾರ್ಯಕರ್ತರು ಪ್ರತಿ ಹಳ್ಳಿಗಳಿಗೂ ತೆರಳಿ ಶ್ರೀರಾಮನ ವ್ಯಕ್ತಿತ್ವವನ್ನು ಜನತೆಗೆ ಪುನರ್ ಮನನ ಮಾಡಿ ರಾಮನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಅವರಲ್ಲಿ ವಿನಂತಿ ಮಾಡಲಿದ್ದಾರೆ. ಸದ್ಯಕ್ಕೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಅಡತಡೆಯಿಲ್ಲವಾದ್ದರಿಂದ ಶೀಘ್ರದಲ್ಲೇ ಅಲ್ಲಿ ಮಂದಿರ ನಿರ್ಮಾಣವಾಗುವ ನಿರೀಕ್ಷೆಯಿದೆ'' ಎಂದರು.