ಅಯೋಧ್ಯೆ ವಿವಾದದಲ್ಲಿ ಸಂಧಾನ ಅಗತ್ಯವಿಲ್ಲ: ವಿಹಿಂಪ
ಲಕ್ನೋ, ನವೆಂಬರ್ 15: ಅಯೋಧ್ಯೆ ವಿವಾದದಲ್ಲಿ ಸಂಧಾನ ಅಗತ್ಯವಿಲ್ಲ ಎಂದು ವಿಶ್ವ ಹಿಂದೂ ಪರಿಷತ್ (ವಿಹಿಂಪ) ಹೇಳಿದೆ.
ಪುರಾತತ್ತ್ವ ದಾಖಲೆಗಳ ಹಿಂದೂಗಳ ಪರವಾಗಿವೆ. ಮತ್ತು ಕೋರ್ಟ್ ದಾಖಲೆಗಳನ್ನಿಟ್ಟುಕೊಂಡು ತೀರ್ಪು ನೀಡುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಅಯೋಧ್ಯೆ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಹೇಳಿಕೆ ನೀಡಿದ್ದರು. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿಹಿಂಪ ವಕ್ತಾರ ಶರದ್ ಶರ್ಮಾ, ಸಂಧಾನದ ಅಗತ್ಯವಿಲ್ಲ ಎಂದಿದ್ದಾರೆ.
"ವಿಹಿಂಪ ಶ್ರೀ ಶ್ರೀ ರವಿಶಂಕರ್ ರನ್ನು ಗೌರವಿಸುತ್ತದೆ. ಆದರೆ ಅವರು ಈ ಹಿಂದೆ ನಡೆದ ಪ್ರಯತ್ನಗಳನ್ನು ಮರೆಯಬಾರದು. ಪ್ರಧಾನ ಮಂತ್ರಿಗಳು, ಸರಕಾರಗಳು ಮತ್ತು ಶಂಕರಾಚಾರ್ಯರೇ ಪ್ರಯತ್ನಪಟ್ಟರೂ ಅಯೋಧ್ಯೆ ವಿವಾದ ಪರಿಹರಿಸುವಲ್ಲಿ ಯಾವುದೇ ಫಲ ಕಾಣಲಿಲ್ಲ," ಎಂದು ಶರ್ಮಾ ಹೇಳಿದ್ದಾರೆ.
ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಕೆಲವರು ಭಾರೀ ಚಟುವಟಿಕೆಯಿಂದಿದ್ದಾರೆ ಎಂದು ಅವರು ದೂರಿದ್ದಾರೆ. "ಆಂದೋಲನದಲ್ಲಿ ಭಾಗವಹಿಸದೇ ಇರುವವರು ಈಗ ಸಂಧಾನಕ್ಕೆ ಬರುವಂತೆ ನಡೆಸಲಾಗುತ್ತಿರುವ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ," ಎಂದು ಅವರು ಟೀಕಿಸಿದ್ದಾರೆ.
"ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಮತ್ತು ಇದಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಿದಂತೆ ಮುಸ್ಲಿಮರು ತಮ್ಮ ರಿಟ್ ಅರ್ಜಿಯನ್ನು ಹಿಂಪಡೆಯಬೇಕು," ಎಂದು ಶರ್ಮಾ ಒತ್ತಾಯಿಸಿದ್ದಾರೆ.
"ರಾಮ ದೇವರು ಕೋಟ್ಯಾಂತರ ಹಿಂದೂಗಳ ನಂಬಿಕೆಯ ಪ್ರತೀಕ. ರಾಮ ಹುಟ್ಟಿದ ಜಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಮತ್ತು ಪೂಜೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಶಕ್ತಿ ಇದನ್ನು ಬೇರೆಡೆಗೆ ವರ್ಗ ಮಾಡಲು ಸಾಧ್ಯವಿಲ್ಲ," ಎಂದು ಶರ್ಮಾ ಹೇಳಿದ್ದು, ರಾಮ ಜನ್ಮಭೂಮಿ ವಿವಾದದ ಬಗ್ಗೆ ಕರ್ನಾಟಕದಲ್ಲಿ ನಡೆಯಲಿರುವ 15ನೇ ಧರ್ಮ ಸಂಸತ್ ನಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ನವೆಂಬರ್ 24-26ರವರೆಗೆ ಉಡುಪಿಯಲ್ಲಿ ಧರ್ಮ ಸಂಸತ್ ನಡೆಯಲಿದೆ.