ತೊಗಾಡಿಯಾ ನಾಪತ್ತೆಯ ಸುತ್ತ, ಹಲವು ಅನುಮಾನಗಳ ಹುತ್ತ
ಸುಮಾರು 68ಲಕ್ಷ ಸದಸ್ಯತ್ವನ್ನು ಹೊಂದಿರುವ ದೇಶದ ಅತ್ಯಂತ ದೊಡ್ಡ ಸಂಘಟನೆಗಳಲ್ಲೊಂದಾದ ವಿಶ್ವ ಹಿಂದೂ ಪರಿಷತ್ತಿನ ಅಂತರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪಾರ್ಕ್ ಒಂದರಲ್ಲಿ ಬಿದ್ದಿದ್ದರು ಎಂದರೆ ಏನರ್ಥ?
ತೊಗಾಡಿಯಾಗೆ ಝಡ್ ಪ್ಲಸ್ ಭದ್ರತೆಯಿದ್ದರೂ, ಸಂಘ ಪರಿವಾರದ ಪ್ರಮುಖ ಮುಖಂಡನಾಗಿದ್ದರೂ ಭದ್ರತಾ ಅಧಿಕಾರಿಗಳ ಕಣ್ತಪ್ಪಿಸಿಕೊಂಡು ನಾಪತ್ತೆಯಾಗಿ ಮತ್ತೆ ಪತ್ತೆಯಾಗುವಂತದ್ದು ಏನಿತ್ತು ಎನ್ನುವ ಪ್ರಶ್ನೆಗಳು ಕಾಡಲಾರಂಭಿಸಿದೆ.
ಪ್ರವೀಣ್ ತೊಗಾಡಿಯಾ ಎನ್ ಕೌಂಟರ್ ಹತ್ಯೆಗೆ ಸಂಚು ರೂಪಿಸಲಾಗಿತ್ತೆ
ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಾ ತೊಗಾಡಿಯಾ ಆಡಿರುವ ಒಂದೊಂದು ಮಾತು ಹೊಸಹೊಸ ಕಥೆಯನ್ನು ಹೇಳಲಾರಂಭಿಸಿದೆ. ರಾಜಸ್ಥಾನ ಪೊಲೀಸರು ನನ್ನನ್ನು ಎನ್ಕೌಂಟರ್ ಮಾಡಿ ಮುಗಿಸಲು ನೋಡುತ್ತಿದ್ದಾರೆ ಎನ್ನುವ ತೊಗಾಡಿಯಾ ಹೇಳಿಕೆಯ ಹಿಂದೆ ಹಲವು ಅನುಮಾನಗಳು ಏಳಲಾರಂಭಿಸಿದೆ.
ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ, ರೈತರ ಸಮಸ್ಯೆ ಕುರಿತು ನಾನು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿರುವ ನನಗೆ ಈ ರೀತಿಯ ಪರಿಸ್ಥಿತಿ. ಇಪ್ಪತ್ತು ವರ್ಷದ ಹಳೆಯ ಕೇಸ್ ಸಂಬಂಧ ರಾಜಸ್ಥಾನ ಮತ್ತು ಗುಜರಾತ್ ಪೊಲೀಸರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ, ನನ್ನ ಜೀವಕ್ಕೆ ಅಪಾಯವಿದೆ ಎಂದು ತೊಗಾಡಿಯಾ ಹೇಳಿದ್ದಾರೆ. ಹೇಳಿ..ಕೇಳಿ.. ಗುಜರಾತ್ ಮತ್ತು ರಾಜಸ್ಥಾನದಲ್ಲಿರುವುದು ಬಿಜೆಪಿ ಸರಕಾರ..
ತೊಗಾಡಿಯಾ ನೀಡಿರುವ ಹೇಳಿಕೆಯನ್ನೇ ನಂಬುವುದಾದರೆ, ವಿಶ್ವಹಿಂದೂ ಪರಿಷತ್ ಆಗಲಿ ಬಿಜೆಪಿಯ ಮಾತೃ ಸಂಘಟನೆ RSS ಆಗಲಿ ತೊಗಾಡಿಯಾ ಬೆಂಬಲಕ್ಕೆ ಯಾಕೆ ನಿಂತಿಲ್ಲ, ಗುಜರಾತ್, ರಾಜಸ್ಥಾನ ಸರಕಾರಕ್ಕಾಗಲಿ ಅಥವಾ ಕೇಂದ್ರ ಗೃಹ ಸಚಿವಾಲಯಕ್ಕೆ ಕನಿಷ್ಠ ಎಚ್ಚರಿಕೆ ನೀಡುವ ಕೆಲಸ ವಿಎಚ್ಪಿ, ಆರ್ ಎಸ್ ಎಸ್ ಸಂಘಟನೆಯಿಂದ ಆಗಿದೆಯಾ?
ತೊಗಾಡಿಯಾ ಹೇಳಿಕೆ, ಹಾರ್ದಿಕ್ ಪಟೇಲ್ ಭೇಟಿಯ ನಂತರ, ಹಲವು ಅನುಮಾನಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುತ್ತಲಾರಂಭಿಸಿದೆ, ಮುಂದೆ ಓದಿ
ಪೊಲೀಸರು ಬಂಧಿಸಲು ಬರುತ್ತಿದ್ದಾರೆ ಎನ್ನುವ ಮಾಹಿತಿ ಬಂತು
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ತೊಗಾಡಿಯಾ ಹೇಳಿದ ಮಾತನ್ನು ಅವಲೋಕಿಸುವುದಾದರೆ, ರಾಜಸ್ಥಾನದ ಸಿಎಂ ಜೊತೆ ಮಾತುಕತೆಯ ನಂತರ ನನ್ನ ಸಂಶಯ ಇನ್ನಷ್ಟು ಜಾಸ್ತಿಯಾಯಿತು ಎಂದು ತೊಗಾಡಿಯಾ ಹೇಳಿದ್ದಾರೆ. ಮಕರ ಸಂಕ್ರಾಂತಿ ಪೂಜೆಯಲ್ಲಿ ಕೂತಿದ್ದ ನನಗೆ, ನನ್ನನ್ನು ಪೊಲೀಸರು ಬಂಧಿಸಲು ಬರುತ್ತಿದ್ದಾರೆ ಎನ್ನುವ ಮಾಹಿತಿ ಬಂತು. ಕೂಡಲೇ, ರಾಜಸ್ಥಾನದ ಸಿಎಂ ವಸುಂಧರಾ ರಾಜೆಗೆ ಫೋನ್ ಮಾಡಿದೆ.
ಬಂಧನದ ವಿಚಾರವನ್ನು ವಸುಂಧರಾ ಅಲ್ಲಗಳೆದರು
ನನ್ನನು ಬಂಧಿಸುವ ವಿಚಾರದ ಬಗ್ಗೆ ವಸುಂಧರಾ ಮತ್ತು ರಾಜಸ್ಥಾನದ ಗೃಹ ಸಚಿವರಲ್ಲಿ ಪ್ರಸ್ತಾವಿಸಿದೆ. ಅವರು ಬಂಧನದ ವಿಚಾರವನ್ನು ಅಲ್ಲಗಳೆದರು, ಆದರೆ ಪೊಲೀಸರು ಬಂಧಿಸಲು ಬರುತ್ತಿರುವ ವಿಚಾರದ ಬಗ್ಗೆ ನನಗೆ ಕರಾರುವಕ್ಕಾದ ಮಾಹಿತಿಯಿತ್ತು. ಹಾಗಾಗಿ, ನನಗೆ ಸಂಶಯ ಮೂಡಲಾರಂಭಿಸಿತು - ಪ್ರವೀಣ್ ತೊಗಾಡಿಯಾ.
ದೇಶದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ
ಪೊಲೀಸರು ನನ್ನನ್ನು ಬಂಧಿಸುವ ಮೊದಲು ನಾನೇ ಶರಣಾಗತಿಯಾಗಲು ಹೊರಟೆ. ಆರೋಗ್ಯ ಕೈಕೊಟ್ಟಿತು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದೆ. ಈ ದೇಶದ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಆರೋಗ್ಯ ಚೇತರಿಕೆಯ ನಂತರ ನಾನೇ ರಾಜಸ್ಥಾನ ಕೋರ್ಟಿಗೆ ಶರಣಾಗತನಾಗುತ್ತೇನೆಂದು ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.
ಹಾರ್ದಿಕ್ ಪಟೇಲ್, ಗುಜರಾತ್ ಕಾಂಗ್ರೆಸ್ ಮುಖಂಡ ಮೋದ್ವಾಡಿಯಾ
ಆಸ್ಪತ್ರೆಯಲ್ಲಿ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್, ಗುಜರಾತ್ ಕಾಂಗ್ರೆಸ್ ಮುಖಂಡ ಮೋದ್ವಾಡಿಯಾ ಮತ್ತು ರಾಹುಲ್ ಗಾಂಧಿ ಆಪ್ತವಲಯದಲ್ಲಿ ಕಾಣಿಸಿಕೊಳ್ಳುವ ಹಲವು ಕಾಂಗ್ರೆಸ್ ಮುಖಂಡರು, ತೊಗಾಡಿಯಾ ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದಾರೆ.
ಮೋದಿ ಹಾಗೂ ಅಮಿತ್ ಷಾ ಜತೆಗೂಡಿ ತೊಗಾಡಿಯಾ ವಿರುದ್ಧ ಸಂಚು
ತೊಗಾಡಿಯಾ ಭೇಟಿಯಾದ ನಂತರ ಹಾರ್ದಿಕ್ ಮತ್ತು ಮೋದ್ವಾಡಿಯಾ, ತೊಗಾಡಿಯಾ ಮಾಡಿರುವ ಆರೋಪ ಗಂಭೀರ ಸ್ವರೂಪದ್ದು. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಜತೆಗೂಡಿ ತೊಗಾಡಿಯಾ ವಿರುದ್ಧ ಸಂಚು ರೂಪಿಸಿದ್ದಾರೆ, ಈ ಸಂಬಂಧ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ಸಾಕ್ಷ್ಯ ಸಮೇತ ಮಾಧ್ಯಮದ ಮುಂದೆ ಎಲ್ಲಾ ಹೇಳುತ್ತೇನೆ
ನನ್ನ ದನಿ ಅಡಗಿಸುವ ಯತ್ನ ಹಿಂದಿನಿಂದಲೂ ನಡೆಯುತ್ತಿದೆ. ಯಾರು ತಮ್ಮ ವಿರುದ್ಧ ಸಂಚು ರೂಪಿಸಿದ್ದಾರೆ ಎಂಬುದೂ ನನಗೆ ಅರಿತಿದೆ. ಮುಂದಿನ ದಿನಗಳಲ್ಲಿ ಸಾಕ್ಷ್ಯ ಸಮೇತ ನಿಮ್ಮ ಮುಂದೆ ಬರುವುದಾಗಿ ತೊಗಾಡಿಯಾ ಹೇಳುವ ಮೂಲಕ ತಮ್ಮ ನಾಪತ್ತೆ ಮತ್ತು ಪತ್ತೆಯಾದ ಘಟನೆಯನ್ನು ಜೀವಂತವಾಗಿರಿಸಿದ್ದಾರೆ.
ಕೋಮು ದ್ವೇಷದ ವಿಚಾರದಲ್ಲಿ ಮೋದಿ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರು
ಕೆಲವೊಂದು ಮೂಲಗಳ ಪ್ರಕಾರ, ತೊಗಾಡಿಯಾಗೆ ವಿಎಚ್ಪಿಯಲ್ಲಿ ಹಿಂದೆ ಇದ್ದಷ್ಟು ನಿಯಂತ್ರಣವಿಲ್ಲ,ಕಾರ್ಯಕರ್ತರು ಇವರ ಮಾತನ್ನು ಕೇಳುತ್ತಿಲ್ಲ. 1980ರಲ್ಲಿ ಮೋದಿಗೆ ಅತ್ಯಂತ ಆಪ್ತರಾಗಿದ್ದ ತೊಗಾಡಿಯಾಗೆ 2014ರ ಲೋಕಸಭಾ ಚುನಾವಣೆಯ ವೇಳೆ, ಕೋಮು ದ್ವೇಷದ ವಿಚಾರದಲ್ಲಿ ಮೋದಿ ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದರು.