ಭಾರತ ಹಿಂದೂಗಳ ರಾಷ್ಟ್ರ: ಭಾಗ್ವತ್ ಹೇಳಿಕೆಗೆ ವಿಎಚ್ ಪಿ ಬೆಂಬಲ
ಕೋಲ್ಕತ್ತಾ, ಡಿ.21: ಭಾರತ ಹಿಂದೂಗಳ ರಾಷ್ಟ್ರ, ಮತಾಂತರದ ನಿಮಗೆ ಇಷ್ಟವಿಲ್ಲದಿದ್ದರೆ, ಮತಾಂತರ ವಿರೋಧಿ ಕಾನೂನು ರೂಪಿಸಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಗೆ ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಸಹಮತ ವ್ಯಕ್ತಪಡಿಸಿದ್ದಾರೆ.
ವಿಎಚ್ ಪಿ ಮುಖಂಡ ಅಶೋಕ್ ಸಿಂಘಾಲ್ ಅವರು ಅನಾರೋಗ್ಯದ ಕಾರಣ ಪಶ್ಚಿಮ ಬಂಗಾಳದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ನ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ. ಅದರೆ, ಮೋಹನ್ ಭಾಗ್ವತ್ ಅವರ ಭಾಷಣವನ್ನು ಆಲಿಸಿರುವ ಸಿಂಘಾಲ್ ಅವರು ಭಾಗ್ವತ್ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. [ಬಿಜೆಪಿ ಬಲವಂತದ ಮತಾಂತರಕ್ಕೆ ವಿರುದ್ಧ : ಶಾ]
ಭಾಗ್ವತ್ ಸವಾಲು: ಮತಾಂತರ ತಪ್ಪು ಎಂದು ಸಂಸತ್ತಿನಲ್ಲಿ ಗಲಾಟೆ ಮಾಡುವುದಲ್ಲ. ಬದಲಾಗಿ ನಿಮಗೆ ಅದು ಇಷ್ಟವಿಲ್ಲದಿದ್ದರೆ, ಮತಾಂತರ ವಿರೋಧಿ ಕಾನೂನು ರೂಪಿಸಿ ಮತಾಂತರವನ್ನು ಸಂಪೂರ್ಣವಾಗಿ ನಿಷೇಧಿಸಿ ಎಂದು ಸಂಸತ್ ಸದಸ್ಯರಿಗೆ ಅವರು ಸವಾಲು ಹಾಕಿದ್ದರು.
ಮರು ಮತಾಂತರ ನಿಲ್ಲುವುದಿಲ್ಲ: ಅನ್ಯಮತದಿಂದ ಹಿಂದೂ ಧರ್ಮಕ್ಕೆ ವಾಪಸ್ ಬರುವವರಿಗೆ ಸ್ವಾಗತ. ಘರ್ ವಾಪಸಿ ಕಾರ್ಯಕ್ರಮ ಮುಂದುವರೆಯಲಿದೆ. ಅದರೆ, ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಬರುವುದು ಮೊದಲು ನಿಲ್ಲಬೇಕು. ಅದೇ ರೀತಿ ಹಿಂದೂಗಳು ಬೇರೆ ಧರ್ಮಕ್ಕೆ ಮತಾಂತರವಾಗಬಾರದು. ನಿಮಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇಲ್ಲ ಎಂದು ಹೇಳಿ ಉಳಿದ ಹಿಂದೂಗಳನ್ನು ಬೇರೆ ಧರ್ಮಕ್ಕೆ ಮತಾಂತರ ಮಾಡಬೇಡಿ ಎಂದು ಭಾಗವತ್ ತಮ್ಮ ಭಾಷಣದ ವೇಳೆ ಹೇಳಿದರು. [ಮತಾಂತರ ಕುರಿತು ಕಾನೂನು ಹೇಳುವುದೇನು]
ಕೇರಳದ ಕೊಚ್ಚಿಯಲ್ಲಿ ಶನಿವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ದೇಶದಲ್ಲಿ ಬಿಜೆಪಿ ಒಂದೇ ಬಲವಂತದ ಮತಾಂತರವನ್ನು ವಿರೋಧಿಸುತ್ತಿದೆ. ಬಲವಂತದ ಮತಾಂತರವನ್ನು ತಡೆಯಲು ಜಾತ್ಯತೀತ ರಾಜಕೀಯ ಪಕ್ಷಗಳು ಶಾಸನ ರೂಪಿಸಲು ಸಹಕಾರ ನೀಡಬೇಕೆಂದು ಹೇಳಿದ್ದರು. ಇದರ ಬೆನ್ನಲ್ಲೇ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದರು.
ಹಿಂದೂಗಳಿಲ್ಲದಿದ್ದರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ. ಮುಸ್ಲಿಂ ವಲಸಿಗರ ಮೇಲೆ ಕಟ್ಟೆಚ್ಚರ ವಹಿಸಬೇಕಿದೆ. ಅಲ್ಪಸಂಖ್ಯಾತರ ಓಲೈಕೆಗೆ ನಿಂತಿರುವ ಮಮತಾ ಬ್ಯಾನರ್ಜಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಹಿಂದೂಗಳತ್ತ ಕಣ್ಣು ಹಾಯಿಸಲಿ ಎಂದು ಇದೇ ಸಮಾರಂಭದಲ್ಲಿ ಹಿಂದೂ ಮುಖಂಡ ಪ್ರವೀಣ್ ತೊಗಾಡಿಯಾ ಹೇಳಿದ್ದಾರೆ.(ಪಿಟಿಐ)