ನಿವೃತ್ತಿ ಘೋಷಿಸಿದ ಹಿರಿಯ ವಕೀಲ ರಾಮ್ ಜೇಠ್ಮಲಾನಿ
ನವದೆಹಲಿ, ಸೆ. 10: ಹೈ ಪ್ರೊಫೈಲ್ ಪ್ರಕರಣಗಳನ್ನು ಕೈಗೆತ್ತಿಕೊಂಡು ಸಮರ್ಥವಾಗಿ ವಾದಿಸುತ್ತಿದ್ದ ಹಿರಿಯ ವಕೀಲ ರಾಮ್ ಜೇಠ್ಮಲಾನಿ(94) ಅವರು ನಿವೃತ್ತಿ ಘೋಷಿಸಿದ್ದಾರೆ.
ನಿವೃತ್ತಿ ಘೋಷಣೆ ಬಳಿಕ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಯುಪಿಎ ಸರ್ಕಾರದ ವೈಫಲ್ಯಕ್ಕಿಂತ ಎನ್ ಡಿಎ ವೈಫಲ್ಯ ದೊಡ್ಡದು ಎಂದಿದ್ದಾರೆ.
ಸರಿ ಸುಮಾರು ಏಳು ದಶಕಗಳ ಕಾಲ ಕರಿಕೋಟು ಧರಿಸಿ ವಿವಿಧ ಹಂತರ ಕೋರ್ಟುಗಳಲ್ಲಿ ಸಮರ್ಥವಾದ ಮಂಡಿಸುತ್ತಿದ್ದ ರಾಮ್ ಅವರು ತಮ್ಮ ಸುದೀರ್ಘ ವೃತ್ತಿಗೆ ಕೊನೆಗೂ ಅಂತ್ಯ ಹಾಡಿದ್ದಾರೆ.
ಆಡಳಿತ ಈಗ ವಿಕೋಪಕ್ಕೆ ತಿರುಗಿದೆ. ಭ್ರಷ್ಟಾಚಾರದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ದೇಶದ ಪರಿಸ್ಥಿತಿ ಈಗ ಹಗದೆಡುತ್ತಿದೆ. ಈ ಹಿಂದಿನ ಹಾಗೂ ಈಗಿನ ಸರ್ಕಾರವು ದೇಶದ ಪರಿಸ್ಥಿತಿಯನ್ನು ಹದಗೆಡಿಸಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ನೂತನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಸನ್ಮಾನಿಸಿದರು. ಮಾತನಾಡಿದ ರಾಮ್ ಜೇಠ್ಮಲಾನಿ ಅವರು, 'ನಾನು ನನ್ನ ವೃತ್ತಿಯಿಂದ ನಿವೃತ್ತನಾಗುತ್ತಿದ್ದೇನೆ. ಆದರೆ, ನಾನು ಹೊಸ ಪಾತ್ರವನ್ನು ವಹಿಸುತ್ತಿದ್ದೇನೆ. ನಾನು ಜೀವಂತ ಇರುವ ತನಕ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರೆಯಲಿದೆ. ಭಾರತ ಉತ್ತಮ ಸ್ಥಿತಿ ಹೊಂದಲು ಶ್ರಮಿಸುತ್ತೇನೆ' ಎಂದಿದ್ದಾರೆ.